ಬಳ್ಳಾರಿ | ಮನುಸ್ಮೃತಿ ದಹನ ದಿನ ಆಚರಣೆ
ಬಳ್ಳಾರಿ / ಕಂಪ್ಲಿ: 1927ರ ಡಿ.25ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಮನುಸ್ಮೃತಿ ದಹಿಸಿದ ದಿನದ ಸ್ಮರಣಾರ್ಥ ದಲಿತ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಅಂಬೇಡ್ಕರ್ ವೃತ್ತದದಲ್ಲಿ ಗುರುವಾರ ಮನುಸ್ಮೃತಿ ದಹನ ದಿನ ಆಚರಿಸಿದರು.
ನಂತರ ಮುಖಂಡ ಬಿ.ಲಕ್ಷ್ಮಣ ಮಾತನಾಡಿ, ಅಂಬೇಡ್ಕರ್ ಅವರು ಮನುಸ್ಮೃತಿ ದಹಿಸಿದ ಐತಿಹಾಸಿಕ ಘಟನೆಗೆ ಇಂದಿಗೆ 98 ವರ್ಷಗಳು ಪೂರ್ಣಗೊಂಡಿವೆ. ಶ್ರೇಣಿಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಲಿಂಗಭೇದ, ಮಹಿಳೆಯರ ಮೇಲಿನ ದಬ್ಬಾಳಿಕೆ, ಸತಿ ಸಹಗಮನ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ ಸೇರಿದಂತೆ ಅನಿಷ್ಠ ಸಾಮಾಜಿಕ ಪದ್ಧತಿಗಳ ಮೂಲವಾಗಿದ್ದ ಮನುಸ್ಮೃತಿಯನ್ನು ದಹಿಸಿ ಸಮಾನತೆ, ಸ್ವಾತಂತ್ರ್ಯ ಹಾಗೂ ಭಾತೃತ್ವದ ಹೋರಾಟಕ್ಕೆ ದಿಕ್ಕು ತೋರಿಸಿದ್ದರು ಎಂದರು.
ಭಾವೈಕ್ಯ ವೆಂಕಟೇಶ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಣಾಪುರ ಮರಿಸ್ವಾಮಿ, ವಸಂತರಾಜ್ ಕಹಳೆ, ಡಿ.ಬಸವರಾಜ, ಪುಟಾಣಿ ಅಂಜಿನಪ್ಪ, ರವಿ ಮಣ್ಣೂರು, ಅಕ್ಕಿ ಜಿಲಾನ್, ಮೆಟ್ರಿ ಬಸಪ್ಪ, ರಾಮಸಾಗರ ಬಸಪ್ಪ, ಸಣಾಪುರ ದುರುಗಪ್ಪ, ಯಲ್ಲಪ್ಪ, ಧನಕಾಯಿ ಬಸವರಾಜ, ಪುರುಷೋತ್ತಮ ಸೇರಿದಂತೆ ಅನೇಕರಿದ್ದರು.