ಸಂಡೂರಿನಲ್ಲಿ ತ್ಯಾಜ್ಯಮುಕ್ತ ನಗರ ಅಭಿಯಾನ

ಜಿವಿಪಿ ತೆರವುಗೊಳಿಸಿ ಹಸಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ

Update: 2026-08-07 20:11 IST

ಸಂಡೂರು/ಬಳ್ಳಾರಿ, ಆ.8: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ “ತ್ಯಾಜ್ಯಮುಕ್ತ ನಗರ – ಸ್ವಚ್ಛ ನಗರ, ಆರೋಗ್ಯಕರ ರಾಷ್ಟ್ರ” ಅಭಿಯಾನದಡಿ ಸಂಡೂರು ಪುರಸಭೆಯು ವಾರ್ಡ್ ಸಂಖ್ಯೆ 12ರ ಕುರ್ಮಟ್ಟಿ ರಸ್ತೆಯಲ್ಲಿದ್ದ ಜಿವಿಪಿ (Garbage Vulnerable Point) ಅನ್ನು ತೆರವುಗೊಳಿಸಿ, ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಹೆಜ್ಜೆ ಇಟ್ಟಿದೆ.

ಕುರ್ಮಟ್ಟಿ ರಸ್ತೆಯ ಗುಡ್ಡದ ಮೇಲಿರುವ ಸುಮಾರು 80 ಮನೆಗಳಿಗೆ ಮನೆ-ಮನೆ ಕಸ ಸಂಗ್ರಹ ವಾಹನ ಅಥವಾ ಪುಷ್‌ಕಾರ್ಟ್ ತಲುಪಲು ಸಾಧ್ಯವಾಗದ ಕಾರಣ, ನಿವಾಸಿಗಳು ಸಮೀಪದ ಖಾಲಿ ಜಾಗದಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಅದು ಜಿವಿಪಿಯಾಗಿ ಮಾರ್ಪಟ್ಟಿತ್ತು. ಇದರಿಂದ ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ಉಂಟಾಗಿದ್ದವು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪುರಸಭೆಯು ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅಲ್ಲಿಯೇ ವಿಕೇಂದ್ರೀಕೃತ ಹಸಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಿದೆ. ಇದರ ಮೂಲಕ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಸ್ಥಳದಲ್ಲೇ ಗೊಬ್ಬರವಾಗಿ ಪರಿವರ್ತಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಜೊತೆಗೆ, ಒಣ ತ್ಯಾಜ್ಯವನ್ನು ಮಾತ್ರ ಮನೆ-ಮನೆಗಳಿಂದ ಸಂಗ್ರಹಿಸಲು ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸಲಾಗಿದ್ದು, ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಬಿ. ವಿನಯ್ ಕುಮಾರ್ ಗೌಡ, ಪರಿಸರ ಅಭಿಯಂತರ ಅನ್ನಪೂರ್ಣ ಡಿ., ಕಿರಿಯ ಆರೋಗ್ಯ ನಿರೀಕ್ಷಕಿ ಕೆ. ಶಿವರಂಜಿನಿ, ಸಮುದಾಯ ಸಂಘಟಕರಾದ ಕಾವ್ಯಾಂಜಲಿ, ಧೀನಾ, ಮರಕ್ಕಾ, ಅನಿತಾ, ಚೈತ್ರಾ ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದರು.

ನಗರವನ್ನು ತ್ಯಾಜ್ಯಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ಪುರಸಭೆಯೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News