ಬೀದರ್ | ಸಕಾಲಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿ ಮೃತ್ಯು; ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ: ಗ್ರಾಮಸ್ಥರ ಆರೋಪ
ಹುಮನಾಬಾದ್, ಜು.25: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಗೈರುಹಾಜರಿ ಹಾಗೂ ಆಂಬುಲೆನ್ಸ್ಗೆ ಚಾಲಕ ಇಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಬೆಳಿಗ್ಗೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ದುಬಲಗುಂಡಿ ಗ್ರಾಮದ ತುಕಾರಾಮ್ (70) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶನಿವಾರ ಬೆಳಿಗ್ಗೆ ಸುಮಾರು 9.30ಕ್ಕೆ ಅಸ್ವಸ್ಥಗೊಂಡ ತುಕಾರಾಮ್ ಅವರನ್ನು ಕುಟುಂಬಸ್ಥರು ದುಬಲಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಕರ್ತವ್ಯದಲ್ಲಿರಲಿಲ್ಲ. ಕೇವಲ ಸ್ಟಾಫ್ ನರ್ಸ್ ಮಾತ್ರ ಇದ್ದರು. ಪ್ರಾಥಮಿಕ ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯಗಳಿಲ್ಲದ ಕಾರಣ ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ನರ್ಸ್ ಸೂಚಿಸಿದ್ದರು ಎನ್ನಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಆಂಬುಲೆನ್ಸ್ ಇದ್ದರೂ ಅದಕ್ಕೆ ಚಾಲಕ ಇರಲಿಲ್ಲ. ಬೇರೆ ವಾಹನದ ವ್ಯವಸ್ಥೆಯೂ ತಕ್ಷಣ ಸಾಧ್ಯವಾಗದ ಹಿನ್ನೆಲೆಯಲ್ಲಿ 108 ಆಂಬುಲೆನ್ಸ್ಗೆ ಕರೆ ಮಾಡುವಷ್ಟರಲ್ಲಿ ತುಕಾರಾಮ್ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಪುತ್ರ ಬಸವರಾಜ್ ಮಾತನಾಡಿ, "ನಮ್ಮ ತಂದೆಗೆ ಯಾವುದೇ ಕಾಯಿಲೆ ಇರಲಿಲ್ಲ. ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆ ಸಮೀಪ ಪೂಜೆ ಮಾಡುತ್ತಿದ್ದ ವೇಳೆ ತಲೆ ಸುತ್ತುತ್ತಿದೆ ಎಂದು ಹೇಳಿದ್ದರು. ಕೂಡಲೇ ಆಸ್ಪತ್ರೆಗೆ ಕರೆತಂದೆವು. ಆದರೆ, ಆಸ್ಪತ್ರೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ನರ್ಸ್ಗಳಿಗೂ ಪ್ರಥಮ ಚಿಕಿತ್ಸೆ ನೀಡಲು ಅಗತ್ಯ ವಸ್ತುಗಳು ಲಭ್ಯವಾಗದೆ ಪರದಾಡುತ್ತಿದ್ದರು. ಹುಮನಾಬಾದ್ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರೂ ವಾಹನ ದೊರೆಯಲಿಲ್ಲ. ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇದ್ದರೂ ಅದಕ್ಕೆ ಚಾಲಕ ಇರಲಿಲ್ಲ. ಸೂಕ್ತ ಚಿಕಿತ್ಸೆ ದೊರೆಯದೆ ನನ್ನ ತಂದೆ ನನ್ನ ಕಣ್ಣೆದುರೇ ಕೊನೆಯುಸಿರೆಳೆದರು" ಎಂದು ಆರೋಪಿಸಿದರು.
ಘಟನಾ ಸ್ಥಳಕ್ಕೆ ಹಳ್ಳಿಖೇಡ್ (ಬಿ) ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.