ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿ: ಪಿಎಸ್ಐ ರೇಣುಕಾ
ಔರಾದ್: ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಸರ್ವರು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡುವುದರ ಜೊತೆಗೆ ಸರಕಾರ ವಿಧಿಸಿರುವ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪಿಎಸ್ಐ ರೇಣುಕಾ ಭಾಲೆಕರ್ ಹೇಳಿದರು.
ತಾಲೂಕಿನ ಸಂತಪುರ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಬಕ್ರೀದ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಬೇಕು. ಯಾವುದೇ ಜಾತಿಗೆ ಸೀಮಿತವಾಗದೆ, ಎಲ್ಲರೂ ಪ್ರತಿಯೊಂದು ಹಬ್ಬಗಳಲ್ಲಿ ಭಾಗಿಯಾಗಿ ಉತ್ತಮ ಬಾಂಧವ್ಯದ ಜೊತೆಗೆ ಹಬ್ಬಗಳನ್ನು ಆಚರಿಸಿ ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಮೌಲಾನಾ ಚಾಂದ್ ಪಾಶಾ ಅವರು ಮಾತನಾಡಿ, ಹಬ್ಬ ಹರಿದಿನಗಳಲ್ಲಿ ನಾವೆಲ್ಲರೂ ಹಿಂದೂ ಮುಸ್ಲಿಮರೆನ್ನದೆ ಎಲ್ಲರೂ ನಮ್ಮ ಅಣ್ಣ ತಮ್ಮಂದಿರಂತೆ ಭಾತೃತ್ವ ಭಾವದಿಂದ ಹಬ್ಬಗಳನ್ನು ಆಚರಿಸಿ, ಪ್ರತಿಯೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು.
ಬೋರಗಿ ಗ್ರಾಮದ ಮುಸ್ಲಿಂ ಮುಖಂಡ ಆಯುಬ್ ಪಟೇಲ್ ಅವರು ಮಾತನಾಡಿ, ಅಹಿತಕರ ಘಟನೆಗಳಿಗೆ ಯಾರು ಕೂಡ ಆಸ್ಪದ ನೀಡದಂತೆ ಪ್ರತಿಯೊಂದು ಗ್ರಾಮಗಳಲ್ಲಿ ಎಲ್ಲರೂ ಜೊತೆಗೂಡಿ ಹಬ್ಬವನ್ನು ಆಚರಿಸೋಣ. ಎಲ್ಲರೂ ಒಟ್ಟುಗೂಡಿ ಊಟ ಮಾಡುವುದರ ಮೂಲಕ ಸರ್ವರು ಕಾನೂನಿನ ಪರಿಪಾಲನೆಯ ಮೂಲಕ ಹಬ್ಬವನ್ನು ಆಚರಣೆ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಎಸ್ಐ ರವೀಂದ್ರ , ಕಾಶಿನಾಥ್ ಬೆಳ್ಳೆ, ಲಕ್ಷ್ಮಣ್, ದಸ್ತಗೀರ್, ನಾಮದೇವ್, ಫಯಾಝ್, ಶೇಕ್ ಮಹಮದ್, ಪೊಲೀಸ್ ಪೇದೆಗಳಾದ ಪ್ರಕಾಶ್ ಹಾಗೂ ಕೊಟ್ರೇಶ್ ಇದ್ದರು.