ಬಿಎಸ್‌ಎಸ್‌ಕೆ ದುಸ್ಥಿತಿಗೆ ಹಿಂದಿನ ಆಡಳಿತ ಕಾರಣ: ಶಾಸಕ ಸಿದ್ಧು ಪಾಟೀಲ್ ಆರೋಪ

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಒತ್ತಾಯ

Update: 2026-08-22 19:18 IST

ಹುಮನಾಬಾದ್: ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ದುಸ್ಥಿತಿಗೆ ಹಿಂದಿನ ಆಡಳಿತವೇ ನೇರ ಹೊಣೆಗಾರವಾಗಿದೆ ಎಂದು ಹುಮನಾಬಾದ್ ಶಾಸಕ ಸಿದ್ಧು ಪಾಟೀಲ್ ಆರೋಪಿಸಿದರು.

ಹುಮನಾಬಾದ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಲೀಸ್ ಆಧಾರದ ಮೇಲೆ ಟೆಂಡರ್ ಕರೆದು ಪುನರಾರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಹಳ ಹಳೆಯದಾದ ಬಿಎಸ್‌ಎಸ್‌ಕೆ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದೆ. ಕಾರ್ಖಾನೆ ಪುನಶ್ಚೇತನಗೊಳಿಸುವ ಕುರಿತು ಹಲವು ಬಾರಿ ಸರ್ಕಾರದ ಮಟ್ಟದಲ್ಲಿ ಸಭೆಗಳು ನಡೆದಿದ್ದರೂ, ಸಕ್ಕರೆ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಖಾನೆ ಪಡೆದ ಸಾಲ ಮರುಪಾವತಿಯಾಗದ ಕಾರಣ ಬೀದರ್ ಡಿಸಿಸಿ ಬ್ಯಾಂಕ್ ಸುಮಾರು 145 ಎಕರೆ ಜಾಗ ಹಾಗೂ ಕಾರ್ಖಾನೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದು, ಇದರ ಪರಿಣಾಮ ಕಾರ್ಖಾನೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಕಾರ್ಖಾನೆಯನ್ನು 29 ಸಾವಿರ ಷೇರುದಾರರು, 600 ಕಾರ್ಮಿಕರು ಹಾಗೂ 5 ಸಾವಿರಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಅವಲಂಬಿಸಿದ್ದಾರೆ ಎಂದು ಹೇಳಿದರು.

2015ರಿಂದ 2020ರವರೆಗೆ ಕಾರ್ಖಾನೆಯಲ್ಲಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ ಮಾಜಿ ಶಾಸಕರ ಸಹೋದರ ಭೀಮರಾವ್ ಪಾಟೀಲ್ ಅವರ ಸಹಿಯೂ ಕಡ್ಡಾಯವಾಗಿತ್ತು. ಈ ಟ್ರಿಪಲ್ ಸಹಿ ಪದ್ಧತಿ ಯಾಕೆ ಜಾರಿಯಲ್ಲಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಆರೋಪಿಸಿದರು.

2015–16ರಲ್ಲಿ ಕೇವಲ 55 ದಿನ ಕಾರ್ಖಾನೆ ನಡೆಸಿ 67,669 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದ್ದು, 2016–17ರಲ್ಲಿ 39 ದಿನ ಕಾರ್ಯನಿರ್ವಹಿಸಿ 42,129 ಮೆಟ್ರಿಕ್ ಟನ್ ಮಾತ್ರ ಕ್ರಶಿಂಗ್ ಮಾಡಲಾಗಿದೆ. ವರ್ಷಕ್ಕೆ 5 ಲಕ್ಷ ಟನ್ ಸಾಮರ್ಥ್ಯದ ಕಾರ್ಖಾನೆಯನ್ನು ಕೇವಲ 40 ಸಾವಿರ ಟನ್ ಮಟ್ಟಕ್ಕೆ ಇಳಿಸಿ ನಷ್ಟಕ್ಕೆ ದೂಡಿದವರಿಗೆ ಈಗ ಹರಾಜಿನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಕಾರ್ಖಾನೆ ಸ್ಥಗಿತದಿಂದ ರೈತರು ತಮ್ಮ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಕಡಿಮೆ ದರಕ್ಕೆ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಮಧ್ಯಪ್ರವೇಶಿಸಿ ಕಾರ್ಖಾನೆಯನ್ನು ಡಿಸಿಸಿ ಬ್ಯಾಂಕ್ ಸಾಲದಿಂದ ಮುಕ್ತಗೊಳಿಸಿ ಪುನರಾರಂಭಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿದ್ಧು ಪಾಟೀಲ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅನಿಲ್ ಪಸಾರ್ಗಿ, ಬಿಜೆಪಿ ಮುಖಂಡ ಬಸವರಾಜ್ ಆರ್ಯ, ರವಿ ಹೊಸಳ್ಳಿ‌, ಶಿವರಾಜ್ ಚಿನಿಕೆರಾ ಹಾಗೂ ಗೌತಮ್ ಸೇಡೊಳ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News