ಬೀದರ್ | ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

Update: 2026-08-20 18:42 IST

ಬೀದರ್ :‌ ತಾಲೂಕಿನ ಟಿ. ಮಿರ್ಜಾಪೂರ್ ಗ್ರಾಮದ ನಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐ ಹಾಗೂ ಅಖಿಲ ಭಾರತ ಕಿಸಾನ್‌ ಸಭಾದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. 

ನಗರದ ಅಂಬೇಡ್ಕರ್‌ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿಯಲ್ಲಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್‌ ಕಚೇರಿಗೆ ತೆರಳಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಬೀದರ್‌ ನಗರದಿಂದ ಸುಮಾರು 15 ರಿಂದ16 ಕಿ.ಮೀ. ದೂರದಲ್ಲಿರುವ ಟಿ. ಮಿರ್ಜಾಪೂರ್ ಗ್ರಾಮದಲ್ಲಿ ಸುಮಾರು 300 ಮನೆಗಳಿದ್ದು, ಗ್ರಾಮವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಗ್ರಾಮದ ಸುತ್ತಮುತ್ತ ಕಾಯ್ದಿಟ್ಟ ಅರಣ್ಯ ಪ್ರದೇಶ ಇರುವುದರಿಂದ ಜನರಿಗೆ ವಾಸಿಸಲು ಹಾಗೂ ಮನೆ ನಿರ್ಮಿಸಿಕೊಳ್ಳಲು ಜಾಗದ ಕೊರತೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.‌

ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೇ ನಂ.2ರಲ್ಲಿರುವ 36 ಎಕರೆ ಜಾಗದಲ್ಲಿ ಸಾಮಾಜಿಕ ಅರಣ್ಯ ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ಅಗತ್ಯವಾದ ನಿವೇಶನಗಳ ಕೊರತೆ ಎದುರಾಗಿದೆ. ಆದ್ದರಿಂದ, ಈ ಜಾಗದಲ್ಲಿ ಗ್ರಾಮದ ಅರ್ಹ ಜನರಿಗೆ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಟಿ. ಮಿರ್ಜಾಪೂರ್ ಗ್ರಾಮದ ಸರಕಾರಿ ಭೂಮಿಯ ಸರ್ವೇ ನಂ. 2ರಲ್ಲಿರುವ 36 ಎಕರೆ ಜಾಗದಲ್ಲಿ 30/40 ಅಳತೆಯ ನಿವೇಶನಗಳನ್ನು ಗ್ರಾಮದ ಜನರಿಗೆ ನೀಡಬೇಕು. ಅದೇ ರೀತಿ ಬೆಳಕೇರಾ, ಬೇಮಳಖೇಡಾ, ಚಾಂಗಲೇರಾ, ಕಪಲಾಪೂರ್ (ಜೆ), ಹೊನ್ನಿಕೇರಿ ಹಾಗೂ ಅತಿವಾಳ್ ಗ್ರಾಮಗಳ ಬಗರ ಹುಕುಂ ಸಾಗುವಳಿದಾರರಿಗೆ ‘ಸಿ’ ಫಾರಂ ನೀಡಲಾಗಿದ್ದು, ಅವರ ಜಮೀನುಗಳನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಹಾಗೆಯೇ ಸಾಮಾಜಿಕ ಭದ್ರತಾ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು 8 ಲಕ್ಷ ರೂ.ಗೆ ಹೆಚ್ಚಿಸಬೇಕು. ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಇತರ ಅರ್ಹ ಫಲಾನುಭವಿಗಳಿಗೆ ತಡೆಹಿಡಿಯಲಾಗಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ‌ಎಐಕೆಎಸ್‌ ರಾಜ್ಯ ಉಪಾಧ್ಯಕ್ಷ ಬಾಬುರಾವ್‌ ಹೊನ್ನಾ, ಸಿಪಿಐ ಶಾಖಾ ಕಾರ್ಯದರ್ಶಿ ನನ್ನೇಸಾಬ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ನಜೀರ್ ಅಹ್ಮದ್, ಸಹಾಯಕ ಕಾರ್ಯದರ್ಶಿ ಶಫಾಯತ್ ಅಲಿ, ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನಾ, ಪ್ರಭು ತಗಣಿಕರ್, ಮೌಲಾನಾ ಖುರೇಷಿ, ಶೀಲಾ ಸಾಗರ್, ಬಸವರಾಜ್ ಪಾಟೀಲ್‌, ಜೈಶೀಲಕುಮಾರ್‌, ವೀರಶೆಟ್ಟಿ ವಟ್ಟಂಬೆ, ಘಾಳೆಪ್ಪಾ ಟಿ. ಮಿರ್ಜಾಪೂರ ಗ್ರಾಮದ ಮನ್ಸೂರಮಿಯ್ಯಾ, ಭಾಗಮ್ಮ, ಖೈಸರ್‌ಬೀ, ಲಕ್ಷ್ಮೀ ಹಾಗೂ ಖಮರ್‌ಬೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News