ಸಿಎಂಗೆ ನೀಡಿದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆ!
Photo:fb/Siddaramaiah
ಚಾಮರಾಜನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಆಗಮಿಸಿದ್ದ ವೇಳೆ ರೈತ ಸಂಘ ಸೇರಿದಂತೆ ಇತರೆ ಸಂಘ-ಸಂಸ್ಥೆಗಳು ನೀಡಿದ್ದ ಮನವಿ ಪತ್ರಗಳನ್ನು ಅಲ್ಲಿಯೇ ಬೀಸಾಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಜು.10ರಂದು ನಗರದ ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆ ಆಯೋಜಿಸಲಾಗಿತ್ತು. ಸಭೆಗೆ ಸಿಎಂ ಸೇರಿದಂತೆ ಸಚಿವರು, ಶಾಸಕರು, ಸಂಸದರು ಭಾಗವಹಿಸಿದ್ದರು. ಈ ವೇಳೆ ಹಲವು ಸಂಘ-ಸಂಸ್ಥೆಗಳು ತಮ್ಮ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಸಿಎಂಗೆ ಸಲ್ಲಿಸಲು ಆಗಮಿಸಿದ್ದರು.
ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಈ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಲ್ಲಿಸಿ ತೆರಳಿದ್ದರು. ಆದರೆ, ಸ್ವೀಕರಿಸಿದ್ದ ಮನವಿ ಪತ್ರಗಳನ್ನು ವೇದಿಕೆ ಬಳಿಯ ಕಸದ ರಾಶಿಯಲ್ಲಿ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ.
ತಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ಉದ್ದೇಶದಿಂದ ಮನವಿ ಪತ್ರಗಳನ್ನು ನೀಡಿದರೆ, ಅದನ್ನು ಅಲ್ಲಿಯೇ ಎಸೆದು ಹೋದರೆ ಹೇಗೆ? ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.