ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ | ಸದನ, ಸಂಸತ್ ನಲ್ಲಿ ಧ್ವನಿ ಎತ್ತದ ಜನಪ್ರತಿನಿಧಿಗಳಿಗೆ ಘೇರಾವ್, ಮಲೆನಾಡು ಬಂದ್
ರೈತ ಹೋರಾಟ ಸಮಿತಿ, ಬೆಳೆಗಾರರ ಒಕ್ಕೂಟ ಎಚ್ಚರಿಕೆ
ಚಿಕ್ಕಮಗಳೂರು : ಪಶ್ಚಿಮಘಟ್ಟಗಳ ಸಾಲಿನಲ್ಲಿ ಸ್ಯಾಟಲೈಟ್ ಮೂಲಕ ಗುರುತಿಸಿರುವ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್ಎ) ಕರಡು ಅಧಿಸೂಚನೆಯಿಂದ ಮಲೆನಾಡಿನ ಜನ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಂಸತ್ ಹಾಗೂ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು. ಈ ಬಗ್ಗೆ ಮಾತನಾಡದ ಜನಪ್ರತಿನಿಧಿಗಳಿಗೆ ಘೇರಾವ್ ಹಾಕುವುದರೊಂದಿಗೆ ಮಲೆನಾಡು ಬಂದ್ಗೆ ಕರೆ ನೀಡಲಾಗುವುದು ಎಂದು ಜಿಲ್ಲಾ ನಾಗರಿಕ, ರೈತ ಹೋರಾಟ ಸಮಿತಿ ಮತ್ತು ಜಿಲ್ಲಾ ಬೆಳೆಗಾರರ ಒಕ್ಕೂಟ ಎಚ್ಚರಿಕೆ ನೀಡಿವೆ.
ಈ ಸಂಬಂಧ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ನಾಗರಿಕ, ರೈತ ಹೋರಾಟ ಸಮಿತಿ ಸಂಚಾಲಕ ಎಸ್.ವಿಜಯ್ಕುಮಾರ್, ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿರುವ 137 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಇದಕ್ಕೆ ಜಿಲ್ಲೆಯ ಜನತೆ ಮತ್ತು ವಿವಿಧ ಸಂಘಟನೆಗಳು ಆಕ್ಷೇಪವನ್ನೂ ಸಲ್ಲಿಸಿದೆ. ಆದರೆ, ಈ ಆಕ್ಷೇಪಗಳನ್ನು ಪರಿಗಣಿಸದೆ ಕೇಂದ್ರ ಸರಕಾರ ನಿಯೋಜಿಸಿದ್ದ ಸಂಜಯ್ಕುಮಾರ್ ಕುಮಾರ್ ನೇತೃತ್ವದ ಸಮಿತಿ ಕರ್ನಾಟಕದ ಯಾವುದೇ ಬಾಧಿತ ಪ್ರದೇಶಗಳಿಗೆ ಭೇಟಿ ನೀಡದೆ, ಜನರ ಅಹವಾಲು ಆಲಿಸಿ ಪರಿಶೀಲನೆಯನ್ನೂ ಮಾಡದೆ 7ನೇ ಬಾರಿಗೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಪರಿಣಾಮ ಜಿಲ್ಲೆಯ ಮಲೆನಾಡು ಭಾಗದ 137 ಗ್ರಾಮಗಳ ಜನತೆ ತೀವ್ರ ಆತಂಕದಲ್ಲಿ ಬದುಕುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲಾದ್ಯಂತ ಶೇ.42ರಷ್ಟು ಅಧಿಕೃತ ಅರಣ್ಯ ಪ್ರದೇಶವಿದ್ದು, ಸುಮಾರು 56,200 ಹೆಕ್ಟರ್ ಡೀಮ್ಸ್ ಪ್ರದೇಶ ಸಮಸ್ಯೆಯಲ್ಲಿದೆ. ಇದರೊಂದಿಗೆ ಸುಮಾರು 1 ಲಕ್ಷಕ್ಕೂ ಹೆಕ್ಟೇರ್ಗೂ ಹೆಚ್ಚು ಸೆಕ್ಷನ್ 4(1) ಮೀಸಲು ಅರಣ್ಯ ಅಧಿಸೂಚನೆ ಪ್ರಗತಿಯಲ್ಲಿದೆ. ಒಂದಲ್ಲಾ ಒಂದು ರೀತಿಯ ಅರಣ್ಯ ಮತ್ತು ಕಂದಾಯ ಸಮಸ್ಯೆಗಳಿಂದ ನರಳುತ್ತಿರುವ ಜಿಲ್ಲೆಯ ಜನರಿಗೆ ಪರಿಸರ ಸೂಕ್ಷ್ಮ ಪ್ರದೇಶ ವರದಿಯು ಮತ್ತಷ್ಟು ಆತಂಕ ತಂದೊಡ್ಡಿದೆ ಎಂದ ವಿಜಯ್ಕುಮಾರ್, ಈ ಕರಡು ವರದಿ ಸಂಬಂಧ ಜಿಲ್ಲೆಯ ಜನರ ಆಕ್ಷೇಪಗಳನ್ನು ಪರಿಗಣಿಸಿ ಕಸ್ತೂರಿ ರಂಗನ್ ವರದಿ (ಪರಿಸರ ಸೂಕ್ಷ್ಮ ಪ್ರದೇಶ) ವ್ಯಾಪ್ತಿಯಿಂದ ಆಗಬಹುದಾದ ಸಮಸ್ಯೆಗಳನ್ನು ಸರಕಾರ ಮತ್ತು ಜನಪ್ರತಿನಿಧಿಗಳು ಬಗೆಹರಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರಕಾರ ಕೇರಳ ಮಾದರಿಯಲ್ಲಿ ನಮ್ಮ ರಾಜ್ಯದ ಸುಮಾರು 20,658 ಚ.ಕಿ.ಮೀ. ಪ್ರದೇಶಗಳಲ್ಲಿ ಇರುವ ಜನವಸತಿಗಳನ್ನು ಮತ್ತು ಸ್ವಾಭಾವಿಕ ಅರಣ್ಯವನ್ನು ಭೌತಿಕ ಸರ್ವೇ ಮಾಡಿಸಿ ಅರಣ್ಯ ಮತ್ತು ಗ್ರಾಮಗಳ ಗಡಿ ಗುರುತು ಮಾಡಿಕೊಡುವ ಹೊಣೆ ಹೊತ್ತುಕೊಳ್ಳಬೇಕು. ಅಲ್ಲಿಯವರೆಗೂ ಕರಡು ಅಧಿಸೂಚನೆ ಜಾರಿಯಾಗದಂತೆ ಸಮಯಾವಕಾಶ ಕೋರಿ ಕಾಲಾವಕಾಶ ಪಡೆಯಬೇಕು. ಪಶ್ಚಿಮಘಟ್ಟ ವ್ಯಾಪ್ತಿಯ ಎಲ್ಲಾ ಚುನಾಯಿತ ಶಾಸಕರು ವಿಧಾನ ಪರಿಷತ್ ಸದಸ್ಯರು, ಲೋಕಾಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಸೇರಿದಂತೆ ಸಭೆ ಆಯೋಜಿಸಿ ಸಾಧಕ-ಭಾದಕಗಳನ್ನು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಬೇಕೆಂದು ಆಗ್ರಹಿಸಿದರು.
ಪರಿಸರ ಸೂಕ್ತ ವಲಯ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿರುವ ನಕ್ಷೆಯು ಉಪಗ್ರಹ ಆಧಾರಿತವಾಗಿದ್ದು, ಇದರಿಂದ ಇಲ್ಲಿನ ಕಾಫಿ ತೋಟ, ಅಡಿಕೆ ತೋಟ, ರಬ್ಬರ್ ತೋಟ ಸೇರಿದಂತೆ ತೋಟಗಾರಿಕೆ ಬೆಳೆಗಳು ಇರುವ ಭೂಮಿ ಅರಣ್ಯ ವ್ಯಾಪ್ತಿಯ ನಕಾಶೆಯೊಳಗಿದೆ. ಇದನ್ನು ಸರಿಪಡಿಸಲು ಭೌತಿಕವಾಗಿ ಭೂ ಮಾಪನ ಅಧಿಕಾರಿಗಳನ್ನು ನಿಯೋಜಿಸಿ ಅರಣ್ಯ ಮತ್ತು ಗ್ರಾಮದ ಗಡಿ, ಅರಣ್ಯ ಮತ್ತು ತೋಟಗಳ ಗಡಿ ಹಾಗೂ ಅಧಿಕೃತ ಸ್ವಾಭಾವಿಕ ಅರಣ್ಯದ ಗಡಿ ಗುರುತು ಮಾಡುವ ಕೆಲಸವನ್ನು ಮಾಡಿಸಿ ರೈತರ ಜಮೀನು, ಗ್ರಾಮಗಳು, ಶಾಲೆ, ಆಟದ ಮೈದಾನ, ಸ್ಮಶಾನಗಳನ್ನು ಗುರುತಿಸಿದ ನಂತರ ಸೀಮಿತ ಪ್ರದೇಶಗಳಿಗೆ ಮಾತ್ರ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಹೊರಡಿಸಬೇಕೆಂದು ವಿಜಯ್ಕುಮಾರ್ ಹೇಳಿದರು.
ಕೆಜಿಎಫ್ ಸಂಘಟನೆಯ ಜಿಲ್ಲಾಧ್ಯಕ್ಷ ರತೀಶ್ ಮಾತನಾಡಿ, ಸರಕಾರ ಭೂಹೀನರಿಗಾಗಿ ಮಂಜೂರು ಮಾಡಲಾಗುವ ನಮೂನೆ 50, 53, 57ರಲ್ಲಿ ಸಲ್ಲಿಕೆಯಾಗಿರುವ ರೈತರ ಅರ್ಜಿಗಳು ಮತ್ತು 94(ಸಿ)ರಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಕ್ರಮಗೊಳಿಸಿದ ನಂತರವೇ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಹೊರಡಿಸಬೇಕು. ಸ್ವಾಭಾವಿಕ ಅರಣ್ಯದ ಗಡಿಯಿಂದ ಬಫರ್ ರೆನ್ ಅನ್ನು ಝೀರೋ (0) ಕಿ.ಮೀ. ಗೆ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಪರಿಸರ ಸೂಕ್ಷ್ಮ ವಲಯದ ಅಕ್ಕ-ಪಕ್ಕದಲ್ಲಿ ಬರುವ ಹಳ್ಳಿಗಳಿಗೆ ಮತ್ತು ರೈತರ ಬೆಳೆಗಳಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಧಿಷ್ಟ ನಿರ್ಬಂಧ ಹೇರದಂತೆ ರೈತರಿಗೆ ಮತ್ತು ಹಳ್ಳಿಯ ಅಭಿವೃದ್ಧಿಗೆ ಸ್ವಾಯತ್ತತೆ ನೀಡಬೇಕು. ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷವಾಗದಂತೆ ಅಧಿಕೃತ ಅರಣ್ಯ ಪ್ರದೇಶ (ಸ್ವಾಭಾವಿಕ ಅರಣ್ಯ)ಗಳಿಗೆ ಸೋಲಾರ್ ಬೇಲಿ, ಆನೆ ಟ್ರಂಚ್ಗಳು, ರೈಲ್ವೆ ಬ್ಯಾರಿಕೇಡ್ಗಳಂತಹ ಬೇಲಿಗಳನ್ನು ರಚಿಸಿ ರೈತರ ಮತ್ತು ಗ್ರಾಮಸ್ಥರನ್ನು ಪ್ರಾಣ ಭಯ ಮತ್ತು ಬೆಳೆ ಹಾನಿಯ ಆತಂಕದಿಂದ ರಕ್ಷಿಸಬೇಕು. ಇನಾಂ ಭೂಮಿ, ಸೊಪ್ಪಿನಬೆಟ್ಟ ಭೂಮಿಗಳ ಸಮಸ್ಯೆ, ಭದ್ರಾ ಹಿನ್ನೀರಿನ ರೈತರ ಪುನರ್ವಸತಿ ಸಮಸ್ಯೆ, ಮಸಗಲಿ ಅರಣ್ಯ ಭೂಮಿ ಸಮಸ್ಯೆಗಳಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿದ ನಂತರ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಹೊರಡಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಮಹೇಶ್, ಕೆ.ಕೆ.ರಘು, ಮೋಹನ್ಕುಮಾರ್, ರವಿ ಕಾಮೇನಹಳ್ಳಿ, ಕುಮಾರಸ್ವಾಮಿ, ಕುಮಾರ್, ಸುಪ್ರೀತ್, ರಚನ್ ಮತ್ತಿತರರು ಉಪಸ್ಥಿತರಿದ್ದರು.
ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯಿಂದ ಮಲೆನಾಡಿನ ಜನ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಲೆನಾಡು ಭಾಗದ ಶಾಸಕರು, ಸಂಸದರು ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಬೇಕು. ಈ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದ ಜನಪ್ರತಿನಿಧಿಗಳಿಗೆ ಘೇರಾವ್ ಹಾಕುವುದರೊಂದಿಗೆ ಬಾಧಿತ ಮಲೆನಾಡು ಪ್ರದೇಶಗಳಲ್ಲಿ ಬಂದ್ಗೆ ಕರೆ ನೀಡಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು.
-ಕೆ.ಮಹೇಶ್, ಬೆಳೆಗಾರರ ಸಂಘದ ಸದಸ್ಯ