ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ.ರವಿ ಅವರ ನಿವಾಸಕ್ಕೆ ನೋಟಿಸ್ ನೀಡಲು ಆಗಮಿಸಿದ ಪೊಲೀಸರು
ನೋಟಿಸ್ ಪಡೆಯಲು ನಿರಾಕರಿಸಿದ ಸಿ.ಟಿ.ರವಿ
ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ನಿವಾಸಕ್ಕೆ ನೋಟಿಸ್ ನೀಡಲು ಆಗಮಿಸಿದ್ದ ಪೊಲೀಸರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ನೋಟಿಸ್ ಪಡೆಯಲು ಸ್ಪಷ್ಟವಾಗಿ ನಿರಾಕರಿಸಿದ ಸಿ.ಟಿ.ರವಿ, ಎಫ್ಐಆರ್ ಪ್ರತಿಯನ್ನು ನೀಡುವಂತೆ ಪಟ್ಟು ಹಿಡಿದು ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.
"ನನ್ನ ಭಾಷಣದಲ್ಲಿ ಧರ್ಮ ಎಂಬ ಒಂದೇ ಒಂದು ಪದವಿದೆಯೇ? 'ಮುಲ್ಲಾ' ಎಂದರೆ ಮುಸ್ಲಿಂ ಸಮುದಾಯ ಎಂದರ್ಥವೇ?'' ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅವರು, ತಾನು ಮಾತನಾಡಿದ್ದು ಬೆಂಕಿ ಹಾಕಲು ಬಂದವರ ಬಗ್ಗೆಯೇ ಹೊರತು ಯಾವುದೇ ಸಮುದಾಯದ ವಿರುದ್ಧವಲ್ಲ ಎಂದು ತಿಳಿಸಿದರು.
ರಾಜಕಾರಣಿಗಳ ಕೈಗೊಂಬೆಯಾಗಬೇಡಿ ಎಂದು ಎಚ್ಚರಿಸಿದ ಅವರು, "ದೂರು ಕೊಟ್ಟ ತಕ್ಷಣ ಪರಿಶೀಲಿಸದೆ ಕೇಸ್ ದಾಖಲಿಸುತ್ತೀರಾ? ನಾವು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ನೀಡಿದ ದೂರುಗಳ ಮೇಲೆ ಎಷ್ಟು ಎಫ್ಐಆರ್ ಮಾಡಿದ್ದೀರಿ?" ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಸಿ.ಟಿ.ರವಿ ಅವರ ನಿವಾಸದಲ್ಲಿ ಇಬ್ಬರು ವಕೀಲರು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸರ ವೈಖರಿಯನ್ನು ಖಂಡಿಸಿದ ಕಾರ್ಯಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಸಿ.ಟಿ.ರವಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವರ ಮೇಲೆ ನೀಡಿದ ದೂರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಕಾಲ ಸದಾ ಒಂದೇ ರೀತಿ ಇರುವುದಿಲ್ಲ ಎಂದು ಎಚ್ಚರಿಸಿದ ಬೆಂಬಲಿಗರು, ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.