×
Ad

ಸಚಿವ ಸಂಪುಟ ವಿಸ್ತರಣೆ ನಾಯಕರ ನಿರ್ಧಾರ: ದಿನೇಶ್ ಗುಂಡೂರಾವ್

Update: 2025-11-01 12:54 IST

ಮಂಗಳೂರು, ನ.1: ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ, ಹೇಗಾಗಬೇಕು ಎಂಬ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಅಧ್ಯಕ್ಷರು ಸೇರಿ ಮಾಡುತ್ತಾರೆ. ಸದ್ಯದಲ್ಲಿ ಅಂತಹ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಕನ್ನಡ ರಾದಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ, ದಲಿತ ಸಿಎಂ ನೇಮಕದ ಚರ್ಚೆಗಳು ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಇದ್ದಾರೆ. ಅವರು ಮುಂದುವರಿಯುತ್ತಾರೆ. ನಮ್ಮಲ್ಲಿ ಈ ಬಗ್ಗೆ ಇನ್ನೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಕಾರಣವಾಗಲಿ, ಅವಕಾಶವಾಗಲೀ ಇಲ್ಲ. ನಮ್ಮದು ಶಿಸ್ತಿನ ಪಕ್ಷ. ಪಕ್ಷದ ವರಿಷ್ಟರು ತೀರ್ಮಾನದ ಪ್ರಕಾರ ಮಾಡುವುದಾಗಿ ಸಿಎಂ ಕೂಡಾ ಹೇಳಿದ್ದಾರೆ ಎಂದರು.

ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿಯೇ ಆರೆಸ್ಸೆಸ್ ಪಥ ಸಂಚಲನದ ವಿಷಯ ಚರ್ಚೆಯಾಗುತ್ತಿರುವುದು. ಆರೆಸ್ಸೆಸ್ ಅಥವಾ ಇನ್ಯಾರೇ ಆಗಲಿ,  ಏನೇ ಮಾಡುವಂತಿದ್ದರೂ ಅದು ಕಾನೂನಿನ ಚೌಕಟ್ಟಿನಲ್ಲಿ ಇತರರಿಗೆ ತೊಂದರೆ ಆಗದಂತೆ ಮಾಡಬೇಕು. ಅರೆಸ್ಸೆಸ್ ಎಂಬುವುದು ಕಾನೂನಿಗಿಂತ ಮೇಲೆ ಇಲ್ಲ. ಅವರೂ ದೇಶದ ಕಾನೂನಿನಡಿ ಕೆಲಸ ಮಾಡಬೇಕು ಎಂದು ಹೇಳಿದರು.

ಆರೆಸ್ಸೆಸನ್ನು ಟಾರ್ಗೆಟ್ ಮಾಡುವ ಸರಕಾರದಿಂದ ಪಿಎಫ್‌ಐ, ಎಸ್‌ಡಿಪಿಐ ಯಂತಹ ಸಂಘಟನೆಗಳನ್ನು ಬೆಂಬಲಿಸಲಾಗುತ್ತಿದೆ ಎಂದು ಬಿಜೆಪಿಯವರು ಆರೋಪಿಸುತ್ತಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, "ಪಿಎಫ್‌ಐ ನಿಷೇಧಿಸಲ್ಪಟ್ಟಿದೆ. ನಾವು ಯಾರನ್ನೂ ಬೆಂಬಲಿಸಿಲ್ಲ. ಎಸ್‌ಡಿಪಿಐ ಯಾವುದೇ ಕಾರ್ಯಕ್ರಮ ಮಾಡಬೇಕೆಂದಿದ್ದರೆ ಅವರೂ ಅನುಮತಿ ಪಡೆಯಬೇಕು. ಆರೆಸ್ಸೆಸ್ ಎಂಬುವುದು ಬಿಜೆಪಿ ಜತೆ ಇರುವ ರಾಜಕೀಯ ಸಂಘಟನೆ. ರಾಜಕೀಯೇತರ ಸಂಘಟನೆ ಆಗಿದ್ದರೆ ಅದೊಂದು ರೀತಿ. ಅದು ರಾಜಕೀಯ, ಮತೀಯ ಸಂಘಟನೆ. ಹಾಗಾಗಿ ಸ್ವಾಭಾವಿಕವಾಗಿ ಅವರ ಮೇಲೆ ಇಂತಹ ಅನುಮಾನ ಬರುತ್ತದೆ. ಆರೆಸ್ಸೆಸ್‌ನಲ್ಲಿ ರಾಜಕೀಯ ಇಲ್ಲದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಹೇಳಿದರು.

ಸ್ಪೀಕರ್ ಕಚೇರಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಕಾಗೇರಿಯವರು ಸ್ಪೀಕರ್ ಆಗಿ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರೆ ಅವರ ಬಗ್ಗೆ ಏನು ಹೇಳಬೇಕೆಂದು ಅರ್ಥವಾಗುತ್ತಿಲ್ಲ. ಜವಾಬ್ಧಾರಿ ಸ್ಥಾನದಲ್ಲಿ ಇದ್ದವರು ಈಗ ಸ್ಪೀಕರ್ ಬಗ್ಗೆ ಮಾತನಾಡುವಾಗ ಆಧಾರ ಸಹಿತ ಲಿಖಿತವಾಗಿ ತಿಳಿಸಲಿ. ಸುಮ್ಮನೆ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.

ಭರತ್ ಶೆಟ್ಟಿ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಲಿ. ತನಿಖೆಯಾಗಬೇಕು ಎಂದರೆ ಅನೇಕ ಸಮಿತಿಗಳಿವೆ ಅಲ್ಲಿ ಕೇಳಲಿ. ಪ್ರಚಾರಕ್ಕಾಗಿ ಈ ರೀತಿ ಸ್ಪೀಕರ್ ವಿರುದ್ದ ಅತ್ಯಂತ ಕೀಳು ಮಟ್ಟದ ರಾಜಕಾರಣವನ್ನು ಕಾಗೇರಿ ಹಾಗೂ ಭರತ್ ಶೆಟ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಲ್ಲಿ ಕೆಲಸ ಆಗಿಲ್ಲ ಎಂದು ಹೇಳುವುದನ್ನು ನಾನು ಒಪ್ಪಲಾರೆ. ಮಹತ್ವವಾದ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಕಾಂಗ್ರೆಸ್‌ನವರಿಗೆ ಮಾತ್ರ ನೀವು ಈ ಪ್ರಶ್ನೆಗಳನ್ನು ಕೇಳುತ್ತೀರಿ. ಆದರೆ, ಬಿಜೆಪಿಯವರಿಗೆ ಅವರ ಪ್ರಣಾಳಿಕೆಯಲ್ಲಿ ಏನಿತ್ತು ಎಂಬುದೇ ಗೊತ್ತಿರುವುದಿಲ್ಲ. ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ನಾವು ಪ್ರಣಾಳಿಕೆ ನೀಡಿದ್ದೇವೆ. ಅದರ ಪ್ರಕಾರ ಮಾಡುತ್ತಿದ್ದೇವೆ ಎಂದು ನಾವು ಪದೇ ಪದೇ ಹೇಳುತ್ತೇವೆ. ನಮಗೆ ಹೊಣೆಗಾರಿಕೆ ಇದೆ ಎಂದು ಹೇಳಿದರು.

‘ಎಸ್‌ಐಟಿ ತನಿಖೆ ಕುರಿತಂತೆ ನ್ಯಾಯಾಲಯದ ತೀರ್ಮಾನದ ಬಗ್ಗೆ ನಾನು ಏನೂ ಹೇಳಲಾಗದು. ಕೋರ್ಟ್ ನಿಂದ ಈ ರೀತಿಯ ತಡೆಯಾಜ್ಞೆ ಬಗ್ಗೆ ನನಗೂ ಆಶ್ಚರ್ಯ ಆಗಿದೆ. ಅದೇನಿದ್ದರೂ ನ್ಯಾಯಾಲಯದಲ್ಲಿ ವಕೀಲರು ವಾದ ಮಂಡಿಸುತ್ತಾರೆ. ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸುತ್ತಾರೆ. ಎಸ್‌ಐಟಿಯವರು ತಮ್ಮ ಜವಾಬ್ಧಾರಿ ನಿರ್ವಹಿಸಲು ಎಲ್ಲಾ ಪ್ರಯತ್ನ ಪಟ್ಟಿದ್ದಾರೆ. ಕೋರ್ಟ್ ರದ್ದು ಮಾಡಿರುವುದಲ್ಲ, ತಡೆಯಾಜ್ಞೆ ನೀಡಿರುವುದು. ಮುಂದೆ ಏನಾಗುತ್ತದೋ ನೋಡೋಣ. ಇನ್ನೊಂದು ದಿನಾಂಕ ನೀಡಿದ್ದಾರೆ. ಎಸ್‌ಐಟಿ ತನಿಖೆ ಮುಂದುವರಿಸಬೇಕೆಂಬುದನ್ನು ಸರಕಾರದ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ’ಎಂದು ಸುದ್ದಿಗಾರರ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News