×
Ad

ಸರಿ, ತಪ್ಪುಗಳನ್ನು ತಿಳಿಸುವುದೇ ನೈಜ ಶಿಕ್ಷಣ : ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.

Update: 2025-07-10 14:38 IST

ಮಂಗಳೂರು, ಜು.10: ಬದುಕಿನಲ್ಲಿ ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನು ತಿಳಿಸುವುದೇ ನಿಜವಾದ ಶಿಕ್ಷಣ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮ ದಲ್ಲಿ ಮುಸ್ಲಿಂ ವಿದ್ಯಾಸಂಸ್ಥೆಗಳ ಒಕ್ಕೂಟ (ಮೀಫ್ ) ಇದರ ಆಯ್ದ ವಿದ್ಯಾ ಸಂಸ್ಥೆಗಳ ಪ್ರೌಢ ಶಾಲೆ ಮತ್ತು ಪಿಯುಸಿ ತರಗತಿಗಳಲ್ಲಿ ಈ ವರ್ಷದಿಂದ ಅಳವಡಿಸಲಾಗುವ ನಾಗರಿಕ ಸೇವಾ ಪರೀಕ್ಷೆಗೆ ತಯಾರಿಗೆ ಸಂಬಂಧಿಸಿದ ಪಠ್ಯಪುಸ್ತಕ ‘ನ್ಯಾವಿಗೇಟರ್ ಆ್ಯಂಡ್ ಪಾತ್‌ಫೈಂಡರ್ ’ನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ನೈತಿಕ ಶಿಕ್ಷಣವು ನಮ್ಮ ಬೆಳವಣಿಗೆಯ ಪ್ರಮುಖ ಭಾಗವಾಗಿದೆ. ನೈತಿಕ ಶಿಕ್ಷಣ ಎಂದರೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ತಿಳಿಸುವುದು. ನಾವು ಸಮಾಜದಲ್ಲಿ ಇತರರೊಂದಿಗೆ ಗೌರವಯುತವಾಗಿ ಮತ್ತು ಪ್ರಾಮಾಣಿಕ ರೀತಿಯಲ್ಲಿ ಹೇಗೆ ಮುಂದುವರಿಯಬೇಕು ಎಂಬುದನ್ನು ಕಲಿಸುವುದು ಆಗಿದೆ. ಹೀಗಾಗಿ ಮಕ್ಕಳ ಭವಿಷ್ಯ ಸುಂದರವಾಗಲು ನೈತಿಕ ಶಿಕ್ಷಣ ಅಗತ್ಯ ಎಂದು ನುಡಿದರು.

ಯುಪಿಎಸ್ಸಿ ತಯಾರಿಗೆ ಅವಕಾಶ, ಸೌಲಭ್ಯ ಎಲ್ಲ ಕಡೆ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರೌಢ, ಪಿಯು ಹಂತದಲ್ಲೇ ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ಮಾಹಿತಿ ಒದಗಿಸಿ, ಆ ನಿಟ್ಟಿನಲ್ಲಿ ತಯಾರಿಗೆ ವೇದಿಕೆ ಕಲ್ಪಿಸಿಕೊಡುವ ಮೀಫ್ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದರು.

‘ನನಗೆ ಶಾಲಾ ದಿನಗಳಲ್ಲಿ ಯುಪಿಎಸ್ಸಿ ಬಗ್ಗೆ ಏನು ಗೊತ್ತಿರಲಿಲ್ಲ. ಪ್ರತಿವರ್ಷ 11 -12 ಲಕ್ಷ ಜನರು ನಾಗರಿಕ ಸೇವಾ ಪರೀಕ್ಷೆ ಬರೆಯುತ್ತಾರೆ. ಅವರಲ್ಲಿ 1000-1100 ಜನರು ಆಯ್ಕೆಯಾಗುತ್ತಾರೆ. ನಾವು ಗುರಿ ಮುಟ್ಟುವ ತನಕ ನಮ್ಮ ಪ್ರಯತ್ನ ಮುಂದುವರಿಸಬೇಕು ನಾನು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿ ಸತತ ಮೂರು ಬಾರಿ ವಿಫಲವಾದರೂ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಐಎಎಸ್ ಅಧಿಕಾರಿಯಾಗಿದ್ದೇನೆ. ನಾವು ಯಾವತ್ತೂ ನಮ್ಮನ್ನು ರೂಪಿಸಿದ ಹೆತ್ತವರನ್ನು , ಗುರುಹಿರಿಯರನ್ನು ಮರೆಯಬಾರದು. ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ನುಡಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ಬಿಎಂಟಿಸಿ ಸೆಕ್ಯುರಿಟಿ ಆ್ಯಂಡ್ ವಿಜಿಲೆನ್ಸ್ ವಿಭಾಗದ ನಿರ್ದೇಶಕರಾದ ಅಬ್ದುಲ್ ಅಹದ್ ಪುತ್ತಿಗೆ ಅವರು ಮಾತನಾಡಿ ಗುರುವಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ಗುರುವಿನ ಮಾತನ್ನು ಕೇಳುವುದು ಮತ್ತು ಪಾಲಿಸುವುದು ಗುರುವಿಗೆ ಸಲ್ಲಿಸುವ ಗೌರವವಾಗಿದೆ. ಗುರುವಿಗೆ ಗೌರವ ಕೊಡದಿದ್ದರೆ , ಅವರ ಅನುಗ್ರಹ ಇಲ್ಲದಿದ್ದರೆ ನಮಗೆ ಬದುಕಿನಲ್ಲಿ ಏನನ್ನು ಸಾಧಿಸಲು ಅಸಾಧ್ಯ, ತಂದೆ- ತಾಯಿ ನಮ್ಮ ಮೊದಲ ಗುರು, ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಇದೇ ವೇಳೆ ಮೀಫ್‌ನ 40 ವಿದ್ಯಾ ಸಂಸ್ಥೆಗಳಿಂದ ಆಯ್ಕೆಯಾಗಿರುವ 240 ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಪರೀಕ್ಷೆಗಳ ಕುರಿತು ಅಬ್ದುಲ್ ಅಹದ್ ಪುತ್ತಿಗೆ ಪ್ರೇರಣಾ ತರಗತಿಯೊಂದಿಗೆ ಸಂವಾದ ನಡೆಸಿದರು.

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ವಿವಿಧ ಕಾಲೇಜುಗಳಲ್ಲಿ ನೀಡಲು ಉದ್ದೇಶಿಸಿರುವ ಉಚಿತ ಸೀಟುಗಳನ್ನು ಕರ್ನಾಟಕ ನ್ಯಾಶನಲ್ ಕಮಿಶನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಯು.ಟಿ. ಇಫ್ತಿಕಾರ್ ಅಲಿ ಅವರು ಸಾಂಕೇತಿಕವಾಗಿ 8 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉಚಿತ ಸೀಟ್‌ಗಳನ್ನು ವಿತರಿಸಿದರು. ಶಿಕ್ಷಣಕ್ಕೆ ಯಾವುದೇ ಮಿತಿಯಿಲ್ಲ. ಕಷ್ಟಪಟ್ಟು ಶಿಕ್ಷಣ ಪಡೆದು ಯಾವುದೇ ಹುದ್ದೆಯನ್ನು ಗಿಟ್ಟಿಸಿಕೊಳ್ಳಬಹುದು. ಉನ್ನತ ಚಿಂತನೆ ನಮ್ಮನ್ನು ಎತ್ತರಕ್ಕೆ ಏರಿಸುತ್ತದೆ ಎಂದು ಯು.ಟಿ.ಇಫ್ತಿಕಾರ್ ಅಲಿ ನುಡಿದರು.

ಮೀಫ್ ಸಂಸ್ಥೆಯ ಮಾಸಿಕ ನ್ಯೂಸ್ ಬುಲೆಟಿನ್ ಅನ್ನು ಬ್ಯಾರೀಸ್ ಗ್ರೂಪ್‌ನ ಸ್ಥಾಪಕರು ಮತ್ತು ಸಿಎಂಡಿ ಸೈಯದ್ ಮುಹಮ್ಮದ್ ಬ್ಯಾರಿ ಬಿಡುಗಡೆಗೊಳಿಸಿದರು. ‘ನಮ್ಮಲ್ಲಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಂಕಲ್ಪ ಅಗತ್ಯ. ಸಂಕಲ್ಪವು ಗುರಿಯ ಮೇಲಿನ ಏಕಾಗ್ರತೆಯನ್ನು ಸಾಧಿಸಲು ನೆರವಾಗುತ್ತದೆ ’ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಶಿಕ್ಷಕರಿಗೆ ಏರ್ಪಡಿಸಲಾದ ಕಾರ್ಯಗಾರದಲ್ಲಿ ಪಿ.ಎ. ಕಾಲೇಜಿನ ಡೀನ್ ಡಾ. ಸೈಯದ್ ಅಮಿನ್ ಅಹ್ಮದ್ ತರಬೇತಿ ನೀಡಿದರು.

ಐಎಎಸ್ ಪರೀಕ್ಷೆ ಎದುರಿಸಿರುವ ಮುಹಮ್ಮದ್ ಸಬೀರ್ ಮತ್ತು ಮುಹಮ್ಮದ್ ರುಮಾನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಯೆನೆಪೋಯ ವಿವಿ ಆಡಳಿತ ಅಧಿಕಾರಿ ನಸೀಮಾ ಬಾನು , ಮೀಫ್ ಉಪಾಧ್ಯಕ್ಷರಾದ ಕೆ.ಎಂ. ಮುಸ್ತಫಾ ಮತ್ತು ಶಾಬಿಹ್ ಅಹ್ಮದ್ ಕಾಝಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೀಫ್ ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ರಿಯಾದ್ ಅಹ್ಮದ್ ಕೆಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪಾಧ್ಯಕ್ಷ ಪರ್ವೇಝ್ ಅಲಿ ವಂದಿಸಿದರು. ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.































































Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News