Arkalgud | ಹಳೆಯ ದ್ವೇಷಕ್ಕೆ ಜೆಸಿಬಿ ಮೂಲಕ ಮೂರು ಮನೆಗಳ ಧ್ವಂಸ; ಆರೋಪ
ಹಾಸನ : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಜೆಸಿಬಿ ಬಳಸಿ ಮೂರು ವಾಸದ ಮನೆಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ಬುಧವಾರ ನಡೆದಿರುವುದು ವರದಿಯಾಗಿದೆ.
ಗ್ರಾಮದ ಮಲ್ಲೇಗೌಡ, ಕಾಳೇಗೌಡ ಮತ್ತು ಸುಬ್ಬೇಗೌಡ ಎಂಬುವರಿಗೆ ಸೇರಿದ ವಾಸದ ಮನೆಗಳನ್ನು ಪಕ್ಕದ ಮನೆಯ ರಂಗ ಎಂಬಾತ ಮತ್ತು ಆತನ ಕುಟುಂಬಸ್ಥರು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಧ್ಯಾಹ್ನದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಜೆಸಿಬಿಯನ್ನು ಬಳಸಿ ಮೂರು ಮನೆಗಳನ್ನು ಕೆಡವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ದಿನಸಿ ಪದಾರ್ಥಗಳು, ಹೆಂಚು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಸುರಿಯುತ್ತಿರುವ ಮಳೆಯ ನಡುವೆ ಸೂರು ಕಳೆದುಕೊಂಡ ಸಂತ್ರಸ್ತರು ರಾತ್ರಿಯಿಡೀ ಮಳೆಯಲ್ಲಿ ನೆನೆಯುತ್ತಾ ಬೀದಿಗೆ ಬಿದ್ದಿದ್ದಾರೆ. ಗ್ರಾಮಸ್ಥರು ಈ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಂತ್ರಸ್ತ ಕುಟುಂಬದವರು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.