ಚಳಿಗಾಲದ ಅತಿಥಿ ಹೃದಯಾಘಾತ
ಹೃದಯಾಘಾತ ಎಂದರೆ ಹೃದಯವೆಂಬ ಯಂತ್ರದಿಂದ ರಕ್ತ ಸಂಚಾರ ಏಕಾಏಕಿ ನಿಂತು ಬಿಡುವುದು. ಲಘು ಸ್ವರೂಪದ್ದಾದರೆ ರೋಗಿ ಚೇತರಿಕೆ ಸಾಧ್ಯ. ಬಲವಾದದ್ದಾದರೆ ಸಾವು ಖಚಿತ. ಹೃದಯವೆಂಬ ಯಂತ್ರವೂ ಒಂದು ಸಜೀವ ಅವಯವ, ಅದರ ಹೊರೆಮೈಯ ರಕ್ತನಾಳಗಳಲ್ಲಿ ಅಡ್ಡಿ ಆತಂಕ ಒದಗುವುದರಿಂದ ಒಂದು ಭಾಗದ ಕಾರ್ಯಕ್ಷಮತೆ ಕುಸಿದು ಇಡೀ ಯಂತ್ರವೇ ದುಸ್ಥಿತಿಗೆ ತಲುಪುತ್ತದೆ. ಚೇತರಿಕೆ ಸಾಧ್ಯವಾಗದಿದ್ದರೆ ಸಾವು ಸನ್ನಿಹಿತ. ಹೆಚ್ಚಿನ ಹೃದಯಾಘಾತಗಳು ಚಳಿಗಾಲದಲ್ಲಿ ಅದೂ ನಸುಕಿನಲ್ಲಿ ಆಗುವುದು ಚಳಿಗಾಲದ ದೊಡ್ಡ ದುರಂತ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆಯಾಗುವುದರಿಂದ ಅಪಧಮನಿಗಳು ಪೆಡುಸಾಗುತ್ತದೆ. ರಕ್ತದೊತ್ತಡ ಹಾಗೂ ಪ್ರೊಟೀನ್ಗಳ ಪ್ರಮಾಣ ಏರುತ್ತದೆ. ಇವೆಲ್ಲವುಗಳ ಕ್ರೋಡೀಕೃತ ಪರಿಣಾಮವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಅಲ್ಲದೆ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚಿನ ಪ್ರಮಾಣದಲ್ಲಿ ಹರಡುವುದರಿಂದಾಗಿ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದಯದ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಬಹುದು. ಇದೆಲ್ಲವುಗಳಿಂದಾಗಿ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೆ ಹೃದಯಾಘಾತವಾಗುತ್ತದೆ. ಚಳಿಗಾಲದಲ್ಲಿ ಅಡ್ರಿನಾಲಿನ್ ಪಂಪಿಂಗ್ ಹೆಚ್ಚಾಗಿರುತ್ತದೆ. ಇದರಿಂದಾಗಿ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅದು ಹೆಚ್ಚು ಕಠಿಣವಾಗಿ ಕೆಲಸದಲ್ಲಿ ತೊಡಗುವಂತಾಗುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆಯುಳ್ಳ ಅಥವಾ ಈಗಾಗಲೇ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಲ್ಲಿ ಹೃದಯಾಘಾತದ ಪ್ರಮಾಣ ಇನ್ನೂ ಹೆಚ್ಚು. ಜೊತೆಗೆ ಚಳಿಗಾಲದಲ್ಲಿ ಸಂಭವಿಸುವ ಹೃದಯಾಘಾತ ಹೆಚ್ಚು ಗಂಭೀರ ಸ್ವರೂಪದ್ದಾಗಿರುತ್ತದೆ. ಚಳಿಗಾಲದ ದಿನಗಳಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವ ಸಂದರ್ಭ ಗಮನಿಸಿದ್ದೀರಿ. ರಕ್ತದ ಹರಿವು ಕಡಿಮೆಯಾಗಿ ಕೊಬ್ಬು ಅಧಿಕವಿದ್ದರೆ ಇಂಥ ಅಪಾಯ ದೇಹದೊಳಗೂ ಸಂಭವಿಸೀತು. ಬೇಸಿಗೆಗೂ ಚಳಿಗಾಲಕ್ಕೂ ಈ ವ್ಯತ್ಯಾಸ ಗಮನಾರ್ಹ. ಹೃದಯದ ಹೊರಗೆ ಗೋಡೆಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕಿರುನಾಳಗಳಲ್ಲಿ ರಕ್ತ ಪ್ರವಾಹ ನಿರಂತರ. ಇದು ಹೃದಯ ಆರೋಗ್ಯಕ್ಕೆ ಪೂರಕ. ಚಳಿ ದಿನಗಳಲ್ಲಿ ಕಿರುನಾಳಗಳ ಒಳಪದರ ಕಿರಿದಾಗಿದ್ದರೆ, ಕೊಬ್ಬಿನ ಕರಣೆ ಕಟ್ಟಿದರೆ ರಕ್ತ ಸಂಚಾರ ಕಠಿಣ. ಆಗ ಹೃದಯಾಘಾತ ಆಗಬಹುದು. 30, 20, 40 ಶೇಕಡಾಂಶ ಮುಚ್ಚಿದ ಹಾದಿ ಎಂದೆಲ್ಲಾ ವೈದ್ಯರ ಪರಿಭಾಷೆ ಬಗ್ಗೆ ಕೇಳಿರಬಹುದು. ಒಬ್ಬ ರೋಗಿಗೆ ಶೇ. 30 ಅಂಶ ಕಿರುನಾಳಗಳ ಒಳಪದರ ಕಿರಿದಾಗಿದೆ ಎಂದರೆ, ಉಳಿದ ದಿನಗಳಂತಲ್ಲ. ಚಳಿಯಲ್ಲಿ ಅದು ಶೇ. 70ಕ್ಕೆ ಸಮ! ರಕ್ತನಾಳಗಳ ಒಳಪರೆ ಹೊರಸೂಸುವ ನೈಟ್ರಿಕ್ ಆಕ್ಸೈಡ್ನಿಂದ ಮಾರ್ಗ ಸಲೀಸಾಗುತ್ತದೆ, ರಕ್ತಸಂಚಾರ ಸುಗಮವಾಗುತ್ತದೆ. ಆದರೆ ಪೆಡಸಾದ, ಕೊಬ್ಬಿನ ಕರಣೆ ತುಂಬಿದ ರಕ್ತನಾಳಗಳಲ್ಲಿ ಇಂಥ ಪ್ರಕ್ರಿಯೆ ಜರುಗುವುದೇ ಇಲ್ಲ. ಅಲ್ಲದೆ ಬೆಚ್ಚಿ ಬೀಳುವ ಅಚ್ಚರಿಯ ವಿಷಯವನ್ನು ಇತ್ತೀಚೆಗೆ ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ ಅದೆಂದರೆ ಡಿ ಜೀವಸತ್ವದ ಕೊರತೆಯೂ ಹೃದಯಾಘಾತವನ್ನುಂಟು ಮಾಡಬಹುದಂತೆ. ನಮಗೆಲ್ಲ ಗೊತ್ತಿರುವಂತೆ ಸೂರ್ಯಕಿರಣ ಡಿ ಜೀವಸತ್ವದ ಭಂಡಾರ. ಚಳಿಗಾಲದಲ್ಲಿ ಮನೆಯೊಳಗೆಯೇ ಇರಲು ಇಷ್ಟಪಡುವುದರಿಂದ, ಸೂರ್ಯಕಿರಣಕ್ಕೆ ಮೈಯೊಡ್ಡುವ ಪ್ರಮಾಣ ಕುಗ್ಗಿ ಡಿ ಜೀವಸತ್ವದ ಉತ್ಪಾದನೆಯು ಕಡಿಮೆಯಾಗುತ್ತದೆ. ವಿಜ್ಞಾನಿಗಳು ಹೊರಗೆಡವಿದ ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಎತ್ತರ ಪ್ರದೇಶಗಳಲ್ಲಿ ವಾಸಿಸುವವರಿಗೆ ಹೃದಯಾಘಾತದ ರಿಸ್ಕ್ ಕಡಿಮೆ. ಯಾಕೆಂದರೆ ಎತ್ತರಕ್ಕೆ ಹೋದಂತೆ ಸೂರ್ಯಕಿರಣಗಳಲ್ಲಿ ಅಲ್ಟ್ರಾವಯಲೆಟ್ ಪ್ರಮಾಣ ಹೆಚ್ಚಿ ಡಿ ಜೀವಸತ್ವದ ಉತ್ಪಾದನಾ ಪ್ರಮಾಣವೂ ಹೆಚ್ಚಿರುತ್ತದೆ. ಆದ್ದರಿಂದಲೇ ರಕ್ತದೊತ್ತಡ ಇಲ್ಲದವರಿಗೂ, ಕೊಲೆಸ್ಟ್ರಾಲ್ ಕಡಿಮೆ ಇದ್ದರೂ ಕೆಳ ಪ್ರದೇಶದ ಅನೇಕ ಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಂತೆ!
ಚಳಿಗಾಲವು ಆಲಸಿಗಳಿಗೆ ಮಾರಿ! ಮಧುಮೇಹ ರೋಗವು ಈ ಕಾಲದಲ್ಲಿ ಉಲ್ಬಣಿಸುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಹಸಿವು ಹೆಚ್ಚಾಗುತ್ತದೆ. ವೈರಸ್ಗಳೂ ಈ ಕಾಲದಲ್ಲಿಯೇ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜನ ಮನೆಯೊಳಗೆ ಇರಲು ಇಷ್ಟಪಡುವುದರಿಂದ ಜನರ ದೈಹಿಕ ಕಸರತ್ತು ಕಡಿಮೆಯಾಗಿ ವೈರಸ್ಗಳು ವೃದ್ಧಿಯಾಗುತ್ತವೆ. ಈ ಕಾಲದಲ್ಲಿ ಎಣೆಯಲ್ಲಿ ಕರಿದ ಕುರುಕಲು ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನುವುದು, ವ್ಯಾಯಾಮವಿಲ್ಲದಿರುವುದು, ಸೂರ್ಯನ ಎಳೆ ಬಿಸಿಲಿಗೆ ಮೈಯೊಡುದಿರುವುದು ಹೀಗೆ ವಿವಿಧ ಶತ್ರುಗಳನ್ನು ದೇಹದೊಳಗೆ ಆಮಂತ್ರಿಸಿದಾಗ, ಜವರಾಯ ಹೃದಯಾಘಾತದ ರೂಪದಲ್ಲಿ ಆಮಂತ್ರಣವಿಲ್ಲದೆ ಬಂದೆರಗುತ್ತಾೆ
ಮುನ್ನೆಚ್ಚರಿಕೆ ಕ್ರಮಗಳು
► ತೀರಾ ನಸುಕಿನಲ್ಲಿ ವಾಕಿಂಗ್ಗೆ ಹೋಗಬೇಡಿ. ಹಾಗೆಂದು ಸುಮ್ಮನೆ ಮಲಗಬೇಡಿ, ಚಳಿಗಾಲದಲ್ಲಿ ಕ್ರಿಯಾಶೀಲ ಶಿಸ್ತಿನ ಬದುಕು ನಿಮ್ಮದಾಗಲಿ.
► ಬೆಚ್ಚಗಿನ ಬಟ್ಟೆಗಳನ್ನು ಧರಿಸಲು ಮರೆಯಬೇಡಿ.
► ಮಧುಮೇಹ ಮತ್ತು ರಕ್ತದ ಏರೊತ್ತಡವನ್ನು ನಿಯಂತ್ರಣದಲ್ಲಿಡಿ.
► ಶ್ವಾಸಕೋಶದ ಸೋಂಕುಗಳಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆಯನ್ನು ತಜ್ಞ ವೈದ್ಯರ ಸಲಹೆಯಂತೆ ಪಡೆದುಕೊಳ್ಳಬೇಕು.
► ಅತಿ ಹೆಚ್ಚಿನ ಬಳಲಿಕೆ, ಉಸಿರಾಡಲು ಸಾಧ್ಯವಾಗದೆ ಇರುವುದು, ಎದೆಯುರಿ ಮುಂತಾದ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
► ಲಘು ಆಹಾರ ಸೇವಿಸಿ, ಕೊಬ್ಬು, ಮದ್ಯ, ಧೂಮಪಾನ ವರ್ಜ್ಯ.
► ವೈದ್ಯರ ಸಕಾಲಿಕ ಭೇಟಿ, ಸಮಾಲೋಚನೆ, ಸ್ಥಿತ್ಯಂತರಗಳ ಪರಾಮರ್ಶೆ.
► ತೂಕದ ಬಗ್ಗೆ ನಿಗಾ ಇರಲಿ. ಹಬ್ಬಗಳ ಸಿಹಿ ಮಿತಿಯಾಗಿರಲಿ.