Afzalpur | ಮೂಲ ಕೃತಿಯ ಆಶಯ ಉಳಿಯಲು ಭಾಷಾಂತರಕಾರನಿಗೆ ಎರಡೂ ಭಾಷೆಗಳ ಜ್ಞಾನ ಅಗತ್ಯ: ಡಾ. ಸೂರ್ಯಕಾಂತ ಸುಜ್ಯಾತ್
ಅಫಜಲಪುರ: ಯಾವುದೇ ಭಾಷೆಯ ಸಾಹಿತ್ಯ ಕೃತಿಯು ಜಾಗತಿಕ ಮಟ್ಟದಲ್ಲಿ ಪರಿಚಯವಾಗಲು ಭಾಷಾಂತರ ಅತ್ಯವಶ್ಯಕ. ಮೂಲ ಕೃತಿಯನ್ನು ಭಾಷಾಂತರಿಸುವ ವ್ಯಕ್ತಿಗೆ ಮೂಲ ಭಾಷೆ ಹಾಗೂ ಭಾಷಾಂತರಿಸುವ ಭಾಷೆಯ ಬಗ್ಗೆ ಸಮಗ್ರ ಜ್ಞಾನವಿರಬೇಕು. ಆಗ ಮಾತ್ರ ಕೃತಿಯ ಮೂಲ ಆಶಯ ಮತ್ತು ಮೌಲ್ಯವನ್ನು ಸಮರ್ಪಕವಾಗಿ ಉಳಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ಭಾಷಾಂತರಕಾರ ಡಾ. ಸೂರ್ಯಕಾಂತ ಸುಜ್ಯಾತ್ ಹೇಳಿದರು.
ಪಟ್ಟಣದ ಮದರ್ ತೆರೆಸಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಕೃತಿ ಕುರಿತು ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮರಾಠಿ ಮೂಲದ ಈ ಕೃತಿ ಸಮಾಜದ ಜಾಗೃತಿಗೆ ಪೂರಕವಾಗಿದೆ. ಖ್ಯಾತ ಚಿಂತಕ ಪ್ರಬೋಧನಕರ ಠಾಕ್ರೆ ಅವರ ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದ್ದು, ವಿದ್ಯಾರ್ಥಿಗಳು ಅದರ ಮೂಲ ಆಶಯವನ್ನು ಅರಿತುಕೊಳ್ಳಬೇಕು ಎಂದರು.
ವೀರೇಂದ್ರ ಪಾಟೀಲ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಕೆ. ನಾರಾಯಣ ಮಾತನಾಡಿ, ದೇಗುಲಗಳಿಗೆ ಅನ್ನ ನೀಡುವುದಕ್ಕಿಂತ ಹಸಿದವರಿಗೆ ಅನ್ನ ನೀಡಿದಾಗ ನಿಜವಾದ ದೈವತ್ವವನ್ನು ಕಾಣಬಹುದು. ಪ್ರತಿಯೊಬ್ಬರೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ನಾಮದೇವ ಕಡಕೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತರಾಗದೆ ಸಾಹಿತ್ಯ ಲೋಕದ ಮಹತ್ವವನ್ನು ಅರಿತುಕೊಳ್ಳಬೇಕು. ನಾಡಿನ ಪ್ರಸಿದ್ಧ ಲೇಖಕರ ಕೃತಿಗಳ ಕುರಿತು ಆಯೋಜಿಸುವ ಸಂವಾದ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾಹಿತಿ ಡಿ.ಎಂ. ನದಾಫ ಅವರು ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಕೃತಿ ಕುರಿತು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು.
ಚಿಂತಕ ಡಾ. ಸಂಗಣ್ಣ ಸಿಂಗೆ ಮಾತನಾಡಿ, ಪುಸ್ತಕಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಪ್ರಮುಖ ಸಾಧನಗಳಾಗಿವೆ. ವಿದ್ಯಾರ್ಥಿಗಳು ಮೌಲಿಕ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕವಾಗಿ ಆಲೋಚಿಸುವ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದರ್ ತೆರೆಸಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಲೀಂ ಶೇಖ ವಹಿಸಿದ್ದರು. ಪಂಕಜ ನಾಯೋಡಿ ಸ್ವಾಗತಿಸಿದರು. ಶಿವಲೀಲಾ ಪಾಟೀಲ ನಿರೂಪಿಸಿದರು. ಸುಮೀತ್ ಶಿಂಧೆ ವಂದಿಸಿದರು.
ಉಪನ್ಯಾಸಕ ಶಿವಾನಂದ ಮುಗಳಿ, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದು, ಸಂವಾದದಲ್ಲಿ ಭಾಗವಹಿಸಿದರು.