Afzalpur | ಅಕ್ರಮ ದಾಸ್ತಾನು : ಗೋಲ್ಲಾಳೇಶ್ವರ ಆಗ್ರೋ, ನಿಂಬಾಳ ಕಮಿಷನ್ ಏಜೆಂಟ್ ಪರವಾನಗಿ ಅಮಾನತು
ಎಸ್.ಎಚ್.ಗಡಗಿಮನಿ
ಅಫಜಲಪುರ: ರಸಗೊಬ್ಬರ ದಾಸ್ತಾನು ಮತ್ತು ಮಾರಾಟ ದಾಖಲಾತಿಗಳಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಪಟ್ಟಣದ ಎರಡು ಕೃಷಿ ಪರಿಕರ ಮಳಿಗೆಗಳ ಚಿಲ್ಲರೆ ರಸಗೊಬ್ಬರ ಮಾರಾಟ ಪರವಾನಗಿಯನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ.
ಶ್ರೀ ಗೋಲ್ಲಾಳೇಶ್ವರ ಆಗ್ರೋ ಏಜೆನ್ಸಿ ಹಾಗೂ ನಿಂಬಾಳ ಕಮಿಷನ್ ಏಜೆಂಟ್ ಮತ್ತು ಜನರಲ್ ಮರ್ಚೆಂಟ್ ಮಳಿಗೆಗಳಲ್ಲಿ ಅಕ್ರಮ ಪತ್ತೆಯಾದ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗಿಮನಿ ಅವರು ಈ ಕ್ರಮ ಕೈಗೊಂಡಿದ್ದಾರೆ.
ಜೂನ್ 9ರಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟೆ, ತಹಶೀಲ್ದಾರ್ ಸಂಜೀವಕುಮಾರ ದಾಸರ ಹಾಗೂ ತಾಪಂ ಇಒ ಶಂಕರ ರಾಠೋಡ ಅವರ ನೇತೃತ್ವದ ಅಧಿಕಾರಿಗಳ ತಂಡ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಪರಿಶೀಲನೆ ವೇಳೆ ಡಿಎಪಿ ಹಾಗೂ ಯೂರಿಯಾ ರಸಗೊಬ್ಬರಗಳ ನೈಜ ದಾಸ್ತಾನು, ಪಿಒಎಸ್ (POS) ಯಂತ್ರದ ದಾಖಲೆಗಳು ಹಾಗೂ ಸ್ಟಾಕ್ ರಿಜಿಸ್ಟರ್ನಲ್ಲಿ ತೋರಿಸಿರುವ ಪ್ರಮಾಣಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಜೊತೆಗೆ ರೈತರಿಗೆ ತಪ್ಪು ಮಾಹಿತಿ ನೀಡಿರುವುದೂ ಪತ್ತೆಯಾಗಿದೆ.
ರಸಗೊಬ್ಬರ (ನಿಯಂತ್ರಣ) ಆದೇಶ-1985ರ ನಿಯಮ 35(1)(ಬಿ) ಅಡಿಯಲ್ಲಿ ನೀಡಿರುವ ಅಧಿಕಾರವನ್ನು ಬಳಸಿ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮಾನತು ಅವಧಿಯಲ್ಲಿ ಯಾವುದೇ ರಸಗೊಬ್ಬರ ಮಾರಾಟ ನಡೆಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಆದೇಶ ಉಲ್ಲಂಘನೆ ಮಾಡಿದರೆ ಅಗತ್ಯ ವಸ್ತುಗಳ ಕಾಯ್ದೆ-1955ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.