×
Ad

Chincholi | ನಿಡಗುಂದ ಕೆರೆ ಅಂಗಳದಲ್ಲಿ ಹಸಿರು ಕ್ರಾಂತಿ: ಧರ್ಮಸ್ಥಳ ಯೋಜನೆಯಿಂದ ಗಿಡ ನಾಟಿ

Update: 2026-07-09 18:56 IST

ಚಿಂಚೋಳಿ: ಪರಿಸರ ಸಂರಕ್ಷಣೆ ಹಾಗೂ ಜಲ ಸಂಪನ್ಮೂಲಗಳ ಉಳಿವಿಗೆ ಒತ್ತು ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ನಿಡಗುಂದ ಗ್ರಾಮದ ಕೆರೆ ಅಂಗಳದಲ್ಲಿ ಗುರುವಾರ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ರಾಮಗಿರಿ ಮಠದ ಪರಮಪೂಜ್ಯ ಶ್ರೀ ಉಮೇಶ್ವರ ಮಹಾಸ್ವಾಮಿಗಳು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರ ಉಳಿಸಬೇಕು ಎಂದು ಕರೆ ನೀಡಿದರು.

ತಾಲೂಕು ಯೋಜನಾಧಿಕಾರಿ ಕೇಶವ್ ಮಾತನಾಡಿ, 2019-20ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿಡಗುಂದ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ. ಕೆರೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಬೋರ್‌ವೆಲ್ ಹಾಗೂ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ವರ್ಷಪೂರ್ತಿ ನೀರು ಲಭ್ಯವಾಗುತ್ತಿದೆ ಎಂದು ತಿಳಿಸಿದರು.

ಕೆರೆಯ ಪುನಶ್ಚೇತನದಿಂದ ಜಾನುವಾರು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಆಗಿದೆ. ಕಳೆದ ವರ್ಷ ಶುದ್ಧಗಂಗಾ ಘಟಕ ಸ್ಥಾಪಿಸಲಾಗಿದ್ದು, ಈ ವರ್ಷ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಕೆರೆ ಅಂಗಳದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು.

ಕೆರೆ ಸಮಿತಿ ಸದಸ್ಯ ಗೌಸ್ ಕುರೇಶಿ, ಗ್ರಾಮದ ಮುಖಂಡ ಮುಕುಂದ ದೇಶಪಾಂಡೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷ ಸೋಮಶೇಖರ ಹಿರೇಮಠ್, ಸಂತೋಷ್ ಹೂಗಾರ್, ಸಂತೋಷ್ ಬೆನಕನಹಳ್ಳಿ, ಸಂಪತ್ ಕುಮಾರ್, ಮೊಹಮ್ಮದ್ ಟಪ್ಪ, ಅಂಬರೀಷ್ ಮಡಿವಾಳ, ಮುಖ್ಯಗುರು ವೀರಶೆಟ್ಟಿ, ಕೆರೆ ಅಭಿಯಂತರ ಆನಂದ್ ಸ್ವಾಮಿ, ಸೇವಾ ಪ್ರತಿನಿಧಿಗಳಾದ ರೇಣುಕಾ ಹಾಗೂ ಸಾವಿತ್ರಮ್ಮ, ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಗಿಡ ನಾಟಿಗೆ ಅಗತ್ಯವಾದ ಗುಂಡಿಗಳನ್ನು ತೋಡಿ ಸಹಕರಿಸಿದ ಗ್ರಾಮದ ನಿಸರ್ಗ ಏಜೆನ್ಸಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಕೃಷಿ ಮೇಲ್ವಿಚಾರಕ ಸತೀಶ್ ಕೆ.ಎಚ್. ಕಾರ್ಯಕ್ರಮ ನಿರೂಪಿಸಿ, ಮೇಲ್ವಿಚಾರಕಿ ವಿದ್ಯಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News