ಕಲಬುರಗಿ : ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಯಾವುದೇ ತಾಲೂಕು ಸೇರ್ಪಡೆಯಾಗದಿರುವುದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಜಿಲ್ಲೆಯಲ್ಲಿ ಮಳೆಯ ಕೊರತೆ, ಕಡಿಮೆ ಬಿತ್ತನೆ, ಕೆರೆಗಳು ಬರಿದಾಗಿರುವುದು, ಮಣ್ಣಿನ ತೇವಾಂಶ ಕುಸಿತ ಹಾಗೂ ಬೆಳೆಗಳ ಹಸಿರು ಸೂಚ್ಯಂಕದಲ್ಲಿ ಇಳಿಕೆ ಸೇರಿದಂತೆ ಬರದ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿದ್ದರೂ ಯಾವುದೇ ತಾಲೂಕನ್ನು ಬರಪೀಡಿತವೆಂದು ಘೋಷಿಸದಿರುವುದು ದುರದೃಷ್ಟಕರ ಎಂದು ಸಮಿತಿ ಹೇಳಿದೆ.

ಈ ಕುರಿತು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಸಿಪಿಐ(ಎಂ) ಮುಖಂಡರು, ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಕೊರತೆ ಶೇ.60ಕ್ಕಿಂತಲೂ ಹೆಚ್ಚಾಗಿದೆ. ಜೂನ್‌ನಲ್ಲಿ ಶೇ.36 ಹಾಗೂ ಜುಲೈನಲ್ಲಿ ಶೇ.84ರಷ್ಟು ಮಳೆ ಕೊರತೆಯಾಗಿದ್ದು, ತಿಂಗಳುಗಳ ಕಾಲ ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮವಾಗಿ ಬಿತ್ತನೆ ಪ್ರಮಾಣವೂ ಶೇ.30ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಡ್ರಾಟ್ ಮ್ಯಾನುವಲ್–2016 ಹಾಗೂ ರಾಜ್ಯ ಕಂದಾಯ ಇಲಾಖೆಯ ಮಾರ್ಗಸೂಚಿಗಳ ಆಧಾರದಲ್ಲಿ ಬರ ಪರಿಸ್ಥಿತಿಯನ್ನು ನಿರ್ಧರಿಸಲಾಗುತ್ತಿದ್ದು, ಪ್ರಸ್ತುತ ಮಾನದಂಡಗಳನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ವಿಚಾರದಲ್ಲಿ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ಕಲಬುರಗಿ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ 200 ದಿನಗಳ ಉದ್ಯೋಗ ಒದಗಿಸುವುದರ ಜೊತೆಗೆ ವಿಬಿಗ್ರಾಮಜಿ ಯೋಜನೆಯನ್ನು 200 ದಿನಗಳವರೆಗೆ ನಿರಂತರವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೇಂದ್ರಗಳನ್ನು ಆರಂಭಿಸಿ, ‘ಕೂಲಿಗಾಗಿ ಕಾಳು’ ಯೋಜನೆ ಜಾರಿಗೊಳಿಸಬೇಕು. ಬರ ಕಾಮಗಾರಿಗಳನ್ನು ತಕ್ಷಣ ಆರಂಭಿಸಿ, ಮಧ್ಯವರ್ತಿಗಳು ಹಾಗೂ ಗುತ್ತಿಗೆದಾರರ ಬದಲಿಗೆ ದುಡಿಯುವ ಕಾರ್ಮಿಕರಿಗೆ ನೇರವಾಗಿ ಕೂಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೃದ್ಧಾಪ್ಯ, ವಿಧವಾ, ಅಂಗವಿಕಲ ಹಾಗೂ ದೇವದಾಸಿ ಮಾಸಾಶನವನ್ನು ಪ್ರತಿ ತಿಂಗಳು ಪಾವತಿಸಬೇಕು. ಬೆಲೆ ಏರಿಕೆ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ಕಾಯ್ದೆಯ ವ್ಯಾಪ್ತಿಗೆ ತರಬೇಕು ಹಾಗೂ ಮನರೇಗಾ ಯೋಜನೆಯಡಿ ಸಲ್ಲಿಸುವ ಅರ್ಜಿಗಳಿಗೆ ಕಡ್ಡಾಯವಾಗಿ ಸ್ವೀಕೃತಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಬೆಳೆ ನಷ್ಟಕ್ಕೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.

ಪ್ರತಿಭಟನೆ ವೇಳೆಯಲ್ಲಿ ಮುಖಂಡರಾದ ಸುಧಾಮ ಧನ್ನಿ, ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಟಾರೆ, ಸಾಬಯ್ಯ ಗುತ್ತೇದಾರ್, ಹಣಮಂತ ದೇಶಪಾಂಡೆ, ಹಣಮಂತ ಚಂದರನಗರ, ದುರ್ಗಪ್ಪ ಚಂದರನಗರ, ಗುರುಪುತ್ರ ಭೋಪಾಲ ತೆಗನೂರು, ಶಿವಕುಮಾರ ಕಮಲಾಕರ, ನಾಗಮ್ಮ ಹಾಗೂ ಶುಭಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor