Kalaburagi | ವಚನಗಳು ಬದುಕಿನ ಜೀವಾಳ : ಡಾ.ಸಿದ್ಧು ಪಾಟೀಲ
ಕಲಬುರಗಿ: ಆ.30ರಂದು ನಡೆಯಲಿರುವ ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಅವರ ಸಾರಥ್ಯದ ಶರಣ ಸಂಸ್ಕೃತಿ ದೃಶ್ಯಕಲಾ ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಬಸವಾದಿ ಶರಣರ ವಚನಗಳನ್ನು ಆಧರಿಸಿದ ಚಿತ್ರಕಲಾ ಪ್ರದರ್ಶನ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ನಡೆಯಿತು.
ವಚನಗಳ ಆಶಯಗಳನ್ನು ಕುಂಚದ ಮೂಲಕ ಬಣ್ಣಗಳ ರೂಪದಲ್ಲಿ ಕಟ್ಟಿಕೊಟ್ಟಿರುವ ಚಿತ್ರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು. ವಚನಗಳಲ್ಲಿನ ಸಮಾನತೆ, ಮಾನವೀಯತೆ, ಪ್ರೀತಿ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶಗಳನ್ನು ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲಾಗಿತ್ತು.
ಪ್ರದರ್ಶನಕ್ಕೆ ಚಾಲನೆ ನೀಡಿದ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ಮಾತನಾಡಿ, ಜಾತಿ, ಮತ, ಲಿಂಗದ ಬೇಧವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದನ್ನು ವಚನಗಳು ಕಲಿಸುತ್ತವೆ. ‘ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂಬ ವಚನ ಇಂದಿನ ಸಮಾಜದಲ್ಲಿ ಪ್ರೀತಿ ಹಾಗೂ ಸಾಮರಸ್ಯವನ್ನು ಬೆಳೆಸುವ ಸಂದೇಶವನ್ನು ಸಾರುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬಸವಾದಿ ಶರಣರ ವಚನಗಳು ಕನ್ನಡದ ನಿಜವಾದ ಅಸ್ಮಿತೆಗಳಾಗಿವೆ. ಅವು ನಮ್ಮ ಬದುಕನ್ನು ಮತ್ತಷ್ಟು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ನೆರವಾಗುವ ಮಾರ್ಗಸೂಚಿಗಳಾಗಿವೆ. ಆಧುನಿಕ ಸಂದರ್ಭದಲ್ಲಿಯೂ ಅನೇಕ ಲೇಖಕರು ವಚನಗಳ ಮಾದರಿಯನ್ನು ಅನುಸರಿಸಿ ಅತ್ಯಮೂಲ್ಯ ಸಾಹಿತ್ಯ ರಚಿಸಿದ್ದಾರೆ. ವಚನಗಳು ಆದರ್ಶ ಬದುಕಿಗೆ ಪೂರಕವಾಗಿವೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಮಾತನಾಡಿ, ಶರಣರ ವಚನಗಳು ಬದುಕಿನ ಸತ್ಯಗಳನ್ನು ಎತ್ತಿಹಿಡಿಯುತ್ತವೆ. ವಚನಗಳು ಕೇವಲ ಕಾವ್ಯವಲ್ಲ, ಮನುಷ್ಯ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ತಿಳಿಸುವ ಜೀವನ ಸಂದೇಶಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ. ಗಣಪತಿ ಸಿಂಧೆ, ರೈತಪರ ಹೋರಾಟಗಾರ ದಯಾನಂದ ಪಾಟೀಲ ಕಮಲಾನಗರ, ವಚನಪ್ರಿಯ ಜಗದೀಶ ಮರಪಳ್ಳಿ, ಮಹಿಳಾಪರ ಸಂಘಟಕಿ ಸರೋಜಿನಿ ಎಸ್ ಮಯೂರ, ಕಲಾ ಸೌಧ ಸಂಚಾಲಕ ಡಾ. ರೆಹಮಾನ್ ಪಟೇಲ್, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ, ಕಸಾಪ ಜಿಲ್ಲಾ ಕಾರ್ಯದರ್ಶಿ ಶಿವರಾಜ ಅಂಡಗಿ, ಜಯಶ್ರೀ ಜಮಾದಾರ ಮಾತನಾಡಿದರು. ಶಿವಲೀಲಾ ಕಲಗುರ್ಕಿ, ರಾಜೇಂದ್ರ ಮಾಡಬೂಳ, ಸೋಮಶೇಖರಯ್ಯ ಹೊಸಮಠ, ರೇವಣಸಿದ್ಧ ಹೊಟ್ಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.