Kalaburagi | ಜೂ.27-28ರಂದು ಮಹಾದೇವಿಯಕ್ಕಗಳ 16ನೇ ಸಮ್ಮೇಳನ
ಕಲಬುರಗಿ: ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಕಳೆದ 16 ವರ್ಷಗಳಿಂದ ನಿರಂತರವಾಗಿ ಆಯೋಜಿಸಲಾಗುತ್ತಿರುವ ಮಹಾದೇವಿಯಕ್ಕಗಳ ಸಮ್ಮೇಳನದ 16ನೇ ಆವೃತ್ತಿಯು ಜೂನ್ 27 ಮತ್ತು 28ರಂದು ನಗರದ ಜಯನಗರದ ಅನುಭವ ಮಂಟಪದಲ್ಲಿ ನಡೆಯಲಿದೆ ಎಂದು ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಹಾಗೂ ಸಂಚಾಲಕಿ ಡಾ. ಜಯಶ್ರೀ ದಂಡೆ ತಿಳಿಸಿದರು.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕಿ ಹಾಗೂ ನಿವೃತ್ತ ಪ್ರಾಧ್ಯಾಪಕಿ ಡಾ. ನೀಲಮ್ಮ ಕತ್ನಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದ ಅಂಗವಾಗಿ ಪ್ರತಿಷ್ಠಿತ ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ–2026 ಅನ್ನು ಹಿರಿಯ ಲೇಖಕಿ ಪ್ರೊ. ಗಂಗಮ್ಮ ಸತ್ಯಂಪೇಟೆ ಅವರಿಗೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 35ರಿಂದ 50 ವರ್ಷಗಳ ಕಾಲ ಶಿಕ್ಷಕಿಯರಾಗಿ ಹಾಗೂ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಶಾರದಾ ರಾಂಪೂರ, ಶಶಿಕಲಾ ಸಾಲೋಕ್ಯ, ಶಾಂತಾ ಪಾಟೀಲ, ಉಮಾ ಪಾಟೀಲ ಹಾಗೂ ನಂದಾ ಪಾಟೀಲ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ 200ಕ್ಕೂ ಹೆಚ್ಚು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅನುಭವ, ಚಿಂತನೆ ಹಾಗೂ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲಿದ್ದಾರೆ.
ಜೂನ್ 27ರಂದು ಬೆಳಿಗ್ಗೆ ಭಾಲ್ಕಿಯ ಡಾ. ಗೀತಾ ಖಂಡ್ರೆ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಐದು ಸಾಹಿತ್ಯಿಕ ಗೋಷ್ಠಿಗಳು, ವಿಶೇಷ ಉಪನ್ಯಾಸಗಳು ಹಾಗೂ ವಿವಿಧ ವಿಷಯಾಧಾರಿತ ಚರ್ಚಾಸತ್ರಗಳು ಏಳು ವಿಭಾಗಗಳಲ್ಲಿ ನಡೆಯಲಿವೆ.
ಸಮ್ಮೇಳನಕ್ಕೂ ಮುನ್ನ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಸಮ್ಮೇಳನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅನಸೂಯಾ ನಡಕಟ್ಟಿ, ಪುಷ್ಪಾ ವಾಲಿ, ಮಂಜುಳಾ ಹೊಟ್ಟಿ ಹಾಗೂ ಅನುರಾಧ ಹಡಗಲಿಮಠ ಉಪಸ್ಥಿತರಿದ್ದರು.