×
Ad

Kalaburagi | ಹಾವು ಕಚ್ಚಿದರೆ ನಾಟಿ ಚಿಕಿತ್ಸೆ ಬೇಡ; ತಕ್ಷಣ ಆಸ್ಪತ್ರೆಗೆ ತೆರಳಿ: ಆರೋಗ್ಯ ಇಲಾಖೆಯಿಂದ ಮನವಿ

Update: 2026-06-25 20:06 IST

ಕಲಬುರಗಿ : ವಿಷಪೂರಿತ ಹಾವುಗಳ ಕಚ್ಚುವಿಕೆಯಿಂದ ಜೀವಹಾನಿಯ ಸಂಭವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಹಾವು ಕಚ್ಚಿದ ಸಂದರ್ಭದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಪ್ಪ ಖ್ಯಾತನಾಳ, ಹಾವು ಕಡಿತದ ಪ್ರಕರಣಗಳನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 2026ರ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 89 ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಹಾವುಗಳ ಚಲನವಲನ ಹೆಚ್ಚಾಗುವ ಕಾರಣ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದರು.

ಹಾವು ಕಚ್ಚಿದ ಸಂದರ್ಭದಲ್ಲಿ ಗಾಬರಿಯಾಗದೆ ವ್ಯಕ್ತಿಯನ್ನು ಶಾಂತವಾಗಿರಿಸಬೇಕು. ಕಚ್ಚಿದ ಅಂಗವನ್ನು ಅಲುಗಾಡಿಸದೆ ಸ್ಥಿರವಾಗಿ ಇರಿಸಿ, ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು. ಕಚ್ಚಿದ ಭಾಗದಲ್ಲಿರುವ ಉಂಗುರ, ಗಡಿಯಾರ, ಬೆಲ್ಟ್ ಅಥವಾ ಬಿಗಿಯಾದ ವಸ್ತುಗಳನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದರು.

ಗಾಯವನ್ನು ಕತ್ತರಿಸುವುದು, ವಿಷವನ್ನು ಬಾಯಿಯಿಂದ ಹೀರಲು ಪ್ರಯತ್ನಿಸುವುದು, ಬಿಗಿಯಾಗಿ ಬಟ್ಟೆ ಅಥವಾ ರಕ್ತಬಂಧಕ ಪಟ್ಟಿ ಕಟ್ಟುವುದು, ಗಾಯದ ಮೇಲೆ ಯಾವುದೇ ಔಷಧಿ ಅಥವಾ ಪದಾರ್ಥಗಳನ್ನು ಹಚ್ಚುವುದು ಅಪಾಯಕಾರಿ. ಇಂತಹ ಕ್ರಮಗಳು ರೋಗಿಯ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು ಎಂದು ಎಚ್ಚರಿಸಿದರು.

ಗಿಡಗಂಟಿಗಳು, ಪೊದೆಗಳು ಹಾಗೂ ಎತ್ತರದ ಹುಲ್ಲುಗಳಿರುವ ಪ್ರದೇಶಗಳಲ್ಲಿ ಬರಿಗಾಲಿನಲ್ಲಿ ಓಡಾಡಬಾರದು. ಹೊಲಗಳಲ್ಲಿ ಹಾಗೂ ಹಾವುಗಳ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ರಬ್ಬರ್ ಬೂಟುಗಳನ್ನು ಧರಿಸುವುದು, ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಹಾವು ಕಚ್ಚುವಿಕೆ ತಡೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ವೈಜ್ಞಾನಿಕ ಚಿಕಿತ್ಸೆ ನೀಡುವುದು ಮಾತ್ರ ಸುರಕ್ಷಿತ ಮಾರ್ಗವಾಗಿದೆ. ನಾಟಿ ಔಷಧಿ, ಮಂತ್ರ-ತಂತ್ರ ಅಥವಾ ಯಾವುದೇ ಆಧಾರರಹಿತ ಚಿಕಿತ್ಸಾ ಪದ್ಧತಿಗಳನ್ನು ಅವಲಂಬಿಸಬಾರದು. ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸುವುದರಿಂದ ಅಮೂಲ್ಯ ಸಮಯ ವ್ಯರ್ಥವಾಗುವುದಲ್ಲದೆ ಮತ್ತಷ್ಟು ಅಪಾಯ ಎದುರಾಗಬಹುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ (ಎಎಸ್‌ವಿ) ಔಷಧ ಉಚಿತವಾಗಿ ಲಭ್ಯವಿದ್ದು, ಹಾವು ಕಚ್ಚಿದ ತಕ್ಷಣ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಇದೇ ವೇಳೆ ಹಾವು ಕಚ್ಚಿದವರಿಗೆ ವೈಜ್ಞಾನಿಕ ಆಧಾರವಿಲ್ಲದ ನಾಟಿ ಚಿಕಿತ್ಸೆ ನೀಡುವವರು ಅಥವಾ ಜನರನ್ನು ತಪ್ಪುದಾರಿಗೆಳೆಯುವವರ ವಿರುದ್ಧ ಸಂಬಂಧಿತ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News