×
Ad

Kalaburagi | ಸೋಲಾಪುರ–ವಾಡಿ ರೈಲು ಮಾರ್ಗದಲ್ಲಿ ಮೊದಲ ಬಾರಿಗೆ ‘ಕವಚ್’ ಸುರಕ್ಷತಾ ವ್ಯವಸ್ಥೆ ಜಾರಿ

149.476 ಕಿ.ಮೀ. ಮಾರ್ಗದಲ್ಲಿ ಸ್ವಯಂಚಾಲಿತ ರೈಲು ರಕ್ಷಣಾ ತಂತ್ರಜ್ಞಾನ ಅನುಷ್ಠಾನ

Update: 2026-07-09 19:08 IST

ಕಲಬುರಗಿ: ಭಾರತೀಯ ರೈಲ್ವೆಯ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು ಸೋಲಾಪುರ–ವಾಡಿ ರೈಲು ಮಾರ್ಗದಲ್ಲಿ ಮೊದಲ ಬಾರಿಗೆ ‘ಸ್ಟ್ಯಾಂಡರ್ಡ್ ಕವಚ್’ (KAVACH) ಸ್ವಯಂಚಾಲಿತ ರೈಲು ರಕ್ಷಣಾ (ATP) ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.

149.476 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಕವಚ್ ವ್ಯವಸ್ಥೆ ಕಾರ್ಯಾರಂಭಗೊಂಡಿದ್ದು, ರೈಲ್ವೆ ಸುರಕ್ಷತೆಯ ಆಧುನೀಕರಣದ ಮಹತ್ವದ ಮೈಲಿಗಲ್ಲಾಗಿದೆ ಎಂದು ಮಧ್ಯ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

‘ಆತ್ಮನಿರ್ಭರ ಭಾರತ್’ ಉಪಕ್ರಮದಡಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕವಚ್ ವ್ಯವಸ್ಥೆಯು ರೈಲುಗಳ ಮುಖಾಮುಖಿ ಹಾಗೂ ಹಿಂಬದಿಯ ಡಿಕ್ಕಿಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಬ್ಲಾಕ್ ವಿಭಾಗದಲ್ಲಿ ರೈಲು ಅಸಹಜವಾಗಿ ನಿಂತರೆ ಲೋಕೋ ಪೈಲಟ್‌ಗೆ ಸ್ವಯಂಚಾಲಿತ ಎಸ್‌ಒಎಸ್ (SOS) ಎಚ್ಚರಿಕೆ ರವಾನಿಸುವುದರ ಜೊತೆಗೆ, ಅಗತ್ಯವಿದ್ದಲ್ಲಿ ಲೋಕೋ ಪೈಲಟ್‌ನಿಂದಲೂ ಎಸ್‌ಒಎಸ್ ಸಂದೇಶ ಕಳುಹಿಸುವ ವ್ಯವಸ್ಥೆ ಇದರಲ್ಲಿ ಅಳವಡಿಸಲಾಗಿದೆ.

ಕವಚ್ ವ್ಯವಸ್ಥೆಯು ಸಿಗ್ನಲಿಂಗ್ ಆಧಾರಿತವಲ್ಲದ ತಂತ್ರಜ್ಞಾನವಾಗಿದ್ದು, ಕವಚ್ ಅಳವಡಿಸಿರುವ ಲೋಕೋಮೋಟಿವ್ ಮತ್ತು ರೈಲ್ವೆ ಮೂಲಸೌಕರ್ಯದ ನಡುವೆ ನಿರಂತರ ಸಂವಹನದ ಮೂಲಕ ಕಾರ್ಯನಿರ್ವಹಿಸುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನ ಬಳಸಿ ರೈಲಿನ ನಿಖರ ಸ್ಥಾನವನ್ನು ಗುರುತಿಸಿ ಸುರಕ್ಷಿತ ಸಂಚಾರವನ್ನು ಖಚಿತಪಡಿಸುತ್ತದೆ.

ಯೋಜನೆಯಡಿ ಸೋಲಾಪುರ–ವಾಡಿ ಮಾರ್ಗದಲ್ಲಿ ಒಟ್ಟು 1,234 RFID ಟ್ಯಾಗ್‌ಗಳನ್ನು ಅಳವಡಿಸಿ ಪ್ರೋಗ್ರಾಮ್ ಮಾಡಲಾಗಿದೆ. ವ್ಯವಸ್ಥೆ ಜಾರಿಗೂ ಮುನ್ನ ಹೆಡ್-ಆನ್ ಡಿಕ್ಕಿ ತಡೆ, ಹಿಂಬದಿ ಡಿಕ್ಕಿ ತಡೆ ಹಾಗೂ ಎಸ್‌ಒಎಸ್ ಕಾರ್ಯವಿಧಾನ ಸೇರಿದಂತೆ ವಿವಿಧ ಕಾರ್ಯಾಚರಣಾ ಪರೀಕ್ಷೆಗಳನ್ನು ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (RDSO) ಮಾರ್ಗಸೂಚಿಯಂತೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಸೋಲಾಪುರ ವಿಭಾಗದ ಯೋಜನಾ ಘಟಕದ ಸಿಗ್ನಲ್ ಮತ್ತು ದೂರಸಂಪರ್ಕ ಇಲಾಖೆ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಸ್ಥಳೀಯ ತಂತ್ರಜ್ಞಾನ ಆಧಾರಿತ ಕವಚ್ ವ್ಯವಸ್ಥೆಯು ರೈಲು ಸಂಚಾರದ ಸುರಕ್ಷತೆ, ಕಾರ್ಯಾಚರಣೆಯ ವಿಶ್ವಾಸಾರ್ಹತೆ ಹಾಗೂ ಪ್ರಯಾಣಿಕರು ಮತ್ತು ಸರಕು ಸಾಗಣೆ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News