×
Ad

ಕಲಬುರಗಿ| ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Update: 2026-05-19 18:07 IST

ಅಫಜಲಪುರ: ಕಲಬುರಗಿಯ ಅಫಜಲಪುರ ತಾಲೂಕಿನ ರೈತರಿಗೆ ಹಗಲು ವೇಳೆ ನಿರಂತರವಾಗಿ 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ತಾಲೂಕು ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಪದಾಧಿಕಾರಿಗಳು ಪಟ್ಟಣದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಜೆಸ್ಕಾಂ ಇಲಾಖೆಯ ಅಧಿಕಾರಿ ನಾಗರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, “ಅಫಜಲಪುರ ತಾಲೂಕು ಹಲವು ವರ್ಷಗಳಿಂದ ಬರಗಾಲದ ಸಂಕಷ್ಟ ಅನುಭವಿಸುತ್ತಿದೆ. ರೈತರು ಭೀಮಾ ನದಿ ಹಾಗೂ ಬೋರ್‌ವೆಲ್‌ಗಳ ಮೂಲಕ ನೀರಾವರಿ ಮಾಡಿಕೊಂಡು ಕಬ್ಬು, ಹತ್ತಿ, ಬಾಳೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಎರಡು ಗಂಟೆಗೊಮ್ಮೆ ವಿದ್ಯುತ್ ಟ್ರಿಪ್ ಆಗುತ್ತಿರುವುದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ತಕ್ಷಣವೇ ಹಗಲು ವೇಳೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಹೋರಾಟಗಾರ ಶ್ರೀಮಂತ ಬಿರಾದಾರ, ರೈತ ಮುಖಂಡರಾದ ಗುರು ಚಾಂದಕವಟೆ, ರಮೇಶ ಶೆಟ್ಟಿ, ರಮೇಶ ಪಾಟೀಲ, ಲತೀಪ್ ಬೋಗನಳ್ಳಿ, ಶಿವಶಂಕರ ಪಾಟೀಲ, ಅರ್ಜುನ ಸೋಮಜಾಳ, ರಾಜಕುಮಾರ ಬಡದಾಳ, ಭೀಮಾಶ್ಯಾ ವಡಗೇರ, ಶರಣ ಪ್ರಸಾದ ನೂಲಾ, ಅಣ್ಣರಾಯ ಪಾಟೀಲ, ಧಾನು ನೂಲ, ಮಹಾಂತಗೌಡ ಪಾಟೀಲ, ಶರಣು ದಿವಾಣಜಿ, ವಿಠಲ ಪೂಜಾರಿ, ಯಶವಂತ ಪಟ್ಟೇದಾರ್, ಮಲ್ಲಿಕಾರ್ಜುನ್ ಪಾಟೀಲ್, ಅಣ್ಣರಾಯಗೌಡ್ ಪಾಟೀಲ್, ಬಸವರಾಜ್ ಪಾಟೀಲ್, ಸುರೇಶ್ ಗೌಡ ಪಾಟೀಲ್, ಸಂಗಣ್ಣ ನಾರಸೆರ, ಅಡೆಪ್ಪ ಹೂಗಾರ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News