×
Ad

ಕಲಬುರಗಿ ಮೃಗಾಲಯ ಲೋಗೋ ಬಿಡುಗಡೆ

ಮೇ 12ರಂದು ಲೋಕಾರ್ಪಣೆ,ತಿಂಗಳೊಳಗೆ ಮೃಗಾಲಯಕ್ಕೆ ಸಿಂಹ ಆಗಮನ : ಪ್ರಿಯಾಂಕ್ ಖರ್ಗೆ

Update: 2026-05-09 20:50 IST

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಸುಮಾರು 43 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕಲಬುರಗಿ ಮೃಗಾಲಯವನ್ನು ಇದೇ ಮೇ 12ಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಚೇರಿಯಲ್ಲಿ ಕಲಬುರಗಿ ಮೃಗಾಲಯದ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ಅವರು, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 38(1) ಅಡಿಯಲ್ಲಿ ಮೃಗಾಲಯ ಸ್ಥಾಪನೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಮತ್ತು ದೆಹಲಿಯ ಸೆಂಟ್ರಲ್ ಝೂ ಅಥಾರಿಟಿಯಿಂದ ಅನುಮತಿ ದೊರೆತಿರುವ ಹಿನ್ನೆಲೆಯಿಂದ ವಿವಿಧ ಸ್ಥಳದಿಂದ ಕಲಬುರಗಿ ಮೃಗಾಲಯಕ್ಕೆ ಪ್ರಾಣಿಗಳ ಸ್ಥಳಾಂತರ ಪ್ರಕ್ರಿಯೆ ನಡೆದಿದೆ ಎಂದರು.

ಹುಲಿ, ಸಿಂಹ ಸೇರಿದಂತೆ ಅನೇಕ ಪ್ರಾಣಿಗಳ ವೀಕ್ಷಣೆಗೆ ಈ ಭಾಗದಲ್ಲಿ ಅವಕಾಶ ಇರಲಿಲ್ಲ. ಹಿಂದೆ ತಾವು ಪ್ರವಾಸೋದ್ಯಮ ಸಚಿವನಾಗಿದ್ದಾಗ ಮಾಡಬೂಳ ಮೃಗಾಲಯ ಮಂಜೂರು ಮಾಡಿದೆ. ಇದೀಗ ಸದರಿ ಕಾಮಗಾರಿಗೆ ವೇಗ ನೀಡಿದ ಫಲವಾಗಿ ಮೃಗಾಲಯ ಲೋಕಾರ್ಪಣೆ ಹಂತಕ್ಕೆ ಬಂದಿದೆ. ಇದರಿಂದ ಪ್ರದೇಶದ ಮಕ್ಕಳು, ಸಾರ್ವಜನಿಕರು ಪ್ರಾಣಿಗಳ ವೀಕ್ಷಣೆಗೆ ದೂರದ ಉರಿಗೆ ಹೋಗುವುದು ತಪ್ಪಿದಲ್ಲದೆ ಸ್ಥಳೀಯವಾಗಿ ಪ್ರವಾಸೋದ್ಯಮ ಚೇತರಿಕೆಗೂ ಇದು ಕಾರಣವಾಗಲಿದೆ ಎಂದರು.

ಹೊಸ ಮೃಗಾಲಯದಲ್ಲಿ ನಿಶಾಚರ ಪ್ರಾಣಿಗಳಿಗೆ 6, ಭಾರತೀಯ ಪಕ್ಷಿಗಳಿಗೆ 10, ಸಣ್ಣ ಪಕ್ಷಿಗಳಿಗೆ 6, ಫೀಸಂಟ್‌ಗಳಿಗೆ 6, ಸಸ್ತನಿಗಳಿಗೆ 10, ಪ್ರೈಮೇಟ್‌ಗಳಿಗೆ 4 ಶಾಖಾಹಾರಿ ಪ್ರಾಣಿಗಳಿಗೆ 6 ಹಾಗೂ ಉಭಯಚರ/ ಸರೀಸೃಪ ಪ್ರಾಣಿಗಳಿಗೆ 8 ಸೇರಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣಗಳು ನಿರ್ಮಾಣವಾಗಲಿದ್ದು, ಆಮೆ, ಘರಿಯಾಲ್, ಮೊಸಳೆ, ಚುಕ್ಕೆ ಜಿಂಕೆ, ಗೋಲ್ಡನ್ ಜಾಕಲ್, ಹುಲಿ, ಸಿಂಹ, ಸ್ತೋತ್ ಕರಡಿ, ಜೀಬ್ರಾ, ಬಬೂನ್, ಲಂಗೂರು ಹಾಗೂ ವಿವಿಧ ಪಕ್ಷಿಗಳಿಗಾಗಿ ಒಟ್ಟು 23 ಆವರಣಗಳು ಈಗಾಗಲೆ ಪೂರ್ಣಗೊಂಡಿವೆ ಎಂದರು.

ಮೃಗಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ, ಶೆಡ್‌ಗಳು, ಬೆಂಚ್‌ಗಳು, ಉದ್ಯಾನ, ಮಕ್ಕಳ ಆಟದ ಪ್ರದೇಶ ಹೀಗೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ಇದಲ್ಲದೆ ಮೃಗಾಲಯಕ್ಕೆ ಸುತ್ತ ಕಲ್ಲಿನ ಗೋಡೆ ಹಾಗೂ ಮುಳ್ಳು ತಂತಿ ಬೇಲಿ ನಿರ್ಮಾಣ ಮಾಡಿ ರಕ್ಷಿಸಲಾಗಿದೆ. ಟಿಕೇಟ್ ಕೌಂಟರ್ ಸಹಿತ ಪ್ರವೇಶದ್ವಾರ, ಮೃಗಾಲಯವನ್ನು ಮುಖ್ಯ ಹೆದ್ದಾರಿಗೆ ಸಂಪರ್ಕಿಸುವ 20 ಮೀಟರ್ ಅಗಲದ ರಸ್ತೆ, 2.5 ಕಿ.ಮೀ ಸೇವಾ ರಸ್ತೆ ಹಾಗೂ 1.3 ಕಿ.ಮೀ ಪೇಮ್ಸ್ ಪ್ರವಾಸಿಗರ ಮಾರ್ಗ, ವಾಹನ ನಿಲುಗಡೆ ವ್ಯವಸ್ಥೆ, ಭೂಗತ ಒಳಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ ಪೂರ್ಣಗೊಂಡಿದೆ. ಆಸ್ಪತ್ರೆ ಹಾಗೂ ಅಡುಗೆಮನೆ ಕಟ್ಟಡಗಳು ಅಗತ್ಯ ಔಷಧಿ ಮತ್ತು ಸ್ಟೆಚರ್, ಫ್ರೀಜರ್ ಮುಂತಾದ ಉಪಕರಣಗಳೊಂದಿಗೆ ಸಜ್ಜುಗೊಳಿಸಿದೆ. ಮರಣೋತ್ತರ ಪರೀಕ್ಷಾ ಕೊಠಡಿ, ಪ್ರಾಣಿಗಳ ಅವಶೇಷ ವಿಲೇವಾರಿ ಘಟಕ ಹಾಗೂ ಕ್ಯಾರಂಟೈನ್ ಕೊಠಡಿ, ಆಡಳಿತ ಕಟ್ಟಡ ಹೀಗೆ ಎಲ್ಲಾ ರೀತಿಯಿಂದ ಮೂಲಸೌಕರ್ಯ ಇಲ್ಲಿ ಕಲ್ಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ತಿಂಗಳೊಳಗೆ ಸಿಂಹ ಸೇರ್ಪಡೆ :

ಮುಂದಿನ ಒಂದು ತಿಂಗಳೊಳಗೆ ಮಾಡಬೂಳ ಮೃಗಾಲಯಕ್ಕೆ ಕಾಡಿನ ರಾಜ “ಸಿಂಹ” ಸೇರಿದಂತೆ ಸಾಂಬರ್, ರೆಡ್ ಜಂಗಲ್ ಫೌಲ್, ಪೈಥಾನ್ ಸ್ಥಳಾಂತರಿಸಲಾಗುತ್ತಿದೆ. 3 ತಿಂಗಳಲ್ಲಿ ಹುಲಿ, ಬಬೂನ್, ಸ್ತೋತ್ ಕರಡಿ, ಕಿಂಗ್ ಕೋಬ್ರಾ ಹಾಗೂ 6 ತಿಂಗಳಲ್ಲಿ ಜೀಬ್ರಾ, ಘರಿಯಾಲ್ ಹಾಗೂ ಇತರೆ ಪಕ್ಷಿ ಮತ್ತು ಸರೀಸೃಪ ಪ್ರಭೇಧಗಳು ಮೃಗಾಲಯಕ್ಕೆ ಸೇರಲಿವೆ ಎಂದರು.

ಬೆಳಿಗ್ಗೆ 9.30 ರಿಂದ ಸಂಜೆ 5.30 ವೀಕ್ಷಣೆಗೆ ಲಭ್ಯ :

ಮೃಗಾಲಯವು ಬೆಳಿಗ್ಗೆ 9.30 ರಿಂದ ಸಂಜೆ 5.30 ವರೆಗೆ ತೆರೆಯಲಿದ್ದು, ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಲಭ್ಯವಾಗಿರಲಿದೆ. ಪ್ರತಿ ಮಂಗಳವಾರ ರಜೆ ಇರಲಿದೆ. 12 ವರ್ಷ ಮೇಲ್ಪಟ್ಟವರಿಗೆ 75 ರೂ., 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 40 ರೂ. ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 25 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಮೃಗಾಲಯದ ಟಿಕೆಟ್ ಕೌಂಟರ್‌ನಲ್ಲಿಯೆ ಟಿಕೆಟ್ ಪಡೆದು ವೀಕ್ಷಣೆ ಮಾಡಬಹುದಾಗಿದೆ ಎಂದರು.

ಕಾಫಿ ಟೇಬಕ್‌ ಪುಸ್ತಕ ಬಿಡುಗಡೆ :

ಜಿಲ್ಲೆಯ ಪ್ರವಾಸಿ ತಾಣಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ವಿಶೇಷ ಆಸಕ್ತಿ ವಹಿಸಿ ಇದೇ ಮೊದಲ ಬಾರಿಗೆ ಜಿಲ್ಲೆಯ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಬಿಂಬಿಸುವ ಮತ್ತು ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಇತರೆ ಪ್ರವಾಸಿ ತಾಣಗಳ ಕುರಿತ ಮಾಹಿತಿ ನೀಡುವ ಕಾಫಿ ಟೇಬಲ್ ಪುಸ್ತಕ ಹೊರತಂದಿದ್ದು, ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೇರಾ ಇದ್ದರು.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಿಕಾ ಪರಮೇಶ್ವರ, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್ ಸುಮಿತ್ ಪಾಟೀಲ, ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News