×
Ad

ಚಿಕಿತ್ಸಾ ಲೋಪ ಆರೋಪ: ಕಾಸರಗೋಡು ಜನರಲ್ ಆಸ್ಪತ್ರೆಗೆ ಡಿವೈಎಫ್‌ಐ ಮುತ್ತಿಗೆ; ಪೊಲೀಸ್-ಪ್ರತಿಭಟನಾಕಾರರ ಮಧ್ಯೆ ಘರ್ಷಣೆ

Update: 2026-07-16 13:48 IST

ಕಾಸರಗೋಡು: ಇಲ್ಲಿನ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಬುಧವಾರ ಒಂಬತ್ತು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆಗೆ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿತನ ಮತ್ತು ಚಿಕಿತ್ಸಾ ಲೋಪವೇ ಕಾರಣ ಎಂದು ಆರೋಪಿಸಿ ಡಿವೈಎಫ್‌ಐ ಸಂಘಟನೆಯು ಆಸ್ಪತ್ರೆಗೆ ನಡೆಸಿದ ಜಾಥಾ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ನೂಕಾಟ-ತಳ್ಳಾಟ ನಡೆದಿರುವ ಬಗ್ಗೆ ವರದಿಯಾಗಿದೆ.

ಪ್ರತಿಭಟನಾಕಾರರು ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆ ಉಂಟಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಓರ್ವ ಪೊಲೀಸ್ ಹಾಗೂ ಐವರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕಾಸರಗೋಡು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ಮೃತದೇಹವನ್ನು ಹೆಚ್ಚಿನ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಇದರೊಂದಿಗೆ ಕೇರಳ ಆರೋಗ್ಯ ಇಲಾಖೆಯೂ ಕೂಡ ಉನ್ನತ ಮಟ್ಟದ ಪ್ರತ್ಯೇಕ ತನಿಖೆಗೆ ಈಗಾಗಲೇ ಆದೇಶಿಸಿದೆ.

ಮೃತ ಬಾಲಕನನ್ನು ಬೇಡಡ್ಕ ನಿವಾಸಿ ಅಶ್ರಫ್ ಮುಸ್ಲಿಯಾರ್ ಅವರ ಪುತ್ರಮೊಹಮ್ಮದ್ ಇಯಾಸ್ (9) ಎಂದು ಗುರುತಿಸಲಾಗಿದೆ. ಉದರ ಸಂಬಂಧಿ ಸಮಸ್ಯೆಯಿಂದಾಗಿ ಬಾಲಕನನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News