ಕೊಪ್ಪಳ: ಬಿಜೆಪಿ-ಜೆಡಿಎಸ್ ನಲ್ಲಿ ಸಮನ್ವಯದ ಕೊರತೆ ಇರುವುದು ನಿಜ. ಈ ಹಿಂದೆಯೇ ಇದಕ್ಕೊಂದು ಸಮನ್ವಯ ಸಮಿತಿ ಮಾಡಿ ಎಂದು ನಮ್ಮ ನಾಯಕರಿಗೆ ಮನವಿ ಮಾಡಿದ್ದೆವು ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯ ವಿಚಾರ ಲೋಕಲ್ ವಿಷಯ. ಕುಮಾರಸ್ವಾಮಿ ದೇಶದ ಸಚಿವರು, ಸ್ಥಳೀಯ ನಾಯಕತ್ವದವರು ಇದನ್ನು ನಮ್ಮ ಜೊತೆ ಚರ್ಚೆ ಮಾಡಬೇಕು. ನಮ್ಮಲ್ಲಿ ಸಮನ್ವಯತೆಯ ಕೊರತೆಯಿದೆ. ಸಮಿತಿ ರಚನೆಯಾಗಲಿ ಎಂದು ಹೇಳಿದರು.

ಹಿಂದುತ್ವದ ವಿರುದ್ಧ ಮಾತನಾಡುವುದು ನೀಚತನ

ಬೇರೆ ಧರ್ಮಕ್ಕಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂದಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರ ಹೇಳಿಕೆ ಕೀಳುಮಟ್ಟದಿಂದ ಕೂಡಿದ್ದು, ಹಿಂದುತ್ವದ ವಿರುದ್ಧ ಮಾತನಾಡುವುದು ನೀಚತನ ಎಂದು ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ನನ್ನ ಧರ್ಮವೇ ಮೇಲು ಎಂಬ ಭಾವನೆ ಇರಲಿ. ಆದರೆ ಬೇರೊಂದು ಧರ್ಮವೇ ಮೇಲು ಎಂದು ಹೇಳುವುದು ಕೀಳು ಅಭಿರುಚಿ. ಯಾರನ್ನು ಓಲೈಸಲು ಇಂತಹ ಹೇಳಿಕೆ ನೀಡಬೇಕು ? ರಾಜಕೀಯಕ್ಕಾಗಿ ಓಟ್ ಬ್ಯಾಂಕ್ ಓಲೈಕೆ ಮಾಡುವ ಅಗತ್ಯವೇನಿದೆ ? ಎಂದು ಪ್ರಶ್ನಿಸಿದರು.

ನಾವು ಹಿಂದೂಗಳು ಎಂದು ಹೇಳಿಕೊಂಡ ಮಾತ್ರಕ್ಕೆ ಇಸ್ಲಾಂ ಅಥವಾ ಕ್ರೈಸ್ತ ಧರ್ಮದ ವಿರೋಧಿಗಳಲ್ಲ. ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು. ಆದರೆ ರಾಜಕೀಯ ತೆವಲಿಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ರಾಜಕೀಯ ತಂತ್ರಗಾರಿಕೆಯ ಭಾಗವಾಗಿದೆ ಎಂದರು.

ರಾಯರೆಡ್ಡಿ ತಮ್ಮ ಹೇಳಿಕೆಗೆ ಹಿಂದೂ ಸಮಾಜದ ಕ್ಷಮೆ ಕೇಳಬೇಕು. ಇಲ್ಲವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂದರ್ಭಕ್ಕೆ ತಕ್ಕಂತೆ ಏನು ಬೇಕಾದರೂ ಮಾತನಾಡಬಹುದೇ ? ಇಂತಹ ಹೇಳಿಕೆಗಳನ್ನು ಸಮರ್ಥಿಸುವುದು ಕೂಡ ಸರಿಯಲ್ಲ. ರಾಯರೆಡ್ಡಿಗೆ ವಯಸ್ಸಾಗಿದೆ. ಅವರ ಹೇಳಿಕೆಗಳಲ್ಲಿ ಸ್ಥಿಮಿತ ಕಾಣುತ್ತಿಲ್ಲ. ಅರ್ಧ ನಾಲಿಗೆ ಬಿದ್ದಂತೆ ಕಾಣುತ್ತಿದೆ, ಅರ್ಧ ಮಾತ್ರ ಹೊರಳಾಡುತ್ತಿರುವಂತಿದೆ. ರಾಯರೆಡ್ಡಿ ಅವರು ತಮ್ಮ ಧರ್ಮದ ವಿಚಾರದಲ್ಲಿ ಸ್ಪಷ್ಟತೆ ಹೊಂದಿರಬೇಕು. ಅವರು ಹಿಂದೂ ಅಲ್ಲ ಎಂದಾದರೆ ಅವರ ತಂದೆ-ತಾಯಿ ಅದನ್ನು ಹೇಳಲಿ. ಅವರದ್ದು ಅನುಕೂಲ ಸಿಂಧು ರಾಜಕಾರಣ ಎಂದು ಟೀಕಿಸಿದರು.

ಮುಸ್ಲಿಮರು ಕಾಂಗ್ರೆಸ್ ನ್ನು ನಂಬಬಾರದು :

ರಾಯರೆಡ್ಡಿಯವರ ನಾಟಕವನ್ನು ಮುಸ್ಲಿಮ್ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಮರು ಕಾಂಗ್ರೆಸ್ ಅನ್ನು ನಂಬಬಾರದು. ಕಾಂಗ್ರೆಸ್ ಇರುವವರೆಗೂ ಮುಸ್ಲಿಮರಿಗೆ ಭವಿಷ್ಯವಿಲ್ಲ. ಈ ರೀತಿಯ ರಾಜಕೀಯ ನಾಟಕದ ಮೂಲಕ ಮುಸ್ಲಿಮ್ ಸಮುದಾಯದ ಸರ್ವನಾಶ ಮಾಡಲಾಗುತ್ತದೆ. ಇದು ಬ್ರಿಟಿಷರ ಬಳುವಳಿಯ ರಾಜಕಾರಣ ಎಂದರು.

ಮುಸ್ಲಿಮರಿಗೆ ಬಿಜೆಪಿ ಚುನಾವಣಾ ಟಿಕೆಟ್ ನೀಡುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಛಲವಾದಿ, ಜಾತಿ, ಧರ್ಮದ ಹೆಸರಿನಲ್ಲಿ ಟಿಕೆಟ್ ನೀಡುವ ಸಂಸ್ಕೃತಿ ನಮ್ಮದಲ್ಲ. ಯೋಗ್ಯ ಸ್ಥಾನಕ್ಕೆ ಯೋಗ್ಯ ವ್ಯಕ್ತಿಗಳು ಸಿಗುವ ವರೆಗೂ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ ಎಂದರು.

ಬಿಜೆಪಿ ಪಾದಯಾತ್ರೆ 10 ಅಂಶಗಳ ಕಾರ್ಯಕ್ರಮ :

ಲಿಂಗಸಗೂರು-ಬಳ್ಳಾರಿ ವರೆಗಿನ ಬಿಜೆಪಿ ಪಾದಯಾತ್ರೆಯು ಒಂದು ಅಂಶದ ಕಾರ್ಯಕ್ರಮವಲ್ಲ. ಅದು 10 ಅಂಶಗಳ ಕಾರ್ಯಕ್ರಮ. ನಮಗೆ ಈಗ ಮೊದಲ ಅಂಶಕ್ಕೆ ಸಚಿವರ ರಾಜೀನಾಮೆಯ ಉತ್ತರ ಸಿಕ್ಕಿದೆ. ಇದು ಸಮುದಾಯಕ್ಕೆ ಸಿಕ್ಕಿರುವ ಗೆಲುವು. ಇನ್ನು ಒಂಬತ್ತು ಅಂಶಗಳಲ್ಲಿ ಗೆಲುವು ಸಾಧಿಸಬೇಕಿದೆ ಎಂದರು.

ಹಿಂದೆ ಪ್ರಿಯಾಂಕ್ ಖರ್ಗೆ ಆರ್ ಡಿಪಿಆರ್ ನಲ್ಲಿ ಸಚಿವರಾಗಿದ್ದ ವೇಳೆ ಇಲಾಖೆಯ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor