Koppal | ದಲಿತರ ಮೇಲೆ ಗುಂಪು ಹಲ್ಲೆ ಆರೋಪ : 39 ಜನರ ವಿರುದ್ಧ ಪ್ರಕರಣ ದಾಖಲು
ಕೊಪ್ಪಳ : ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ನಡೆದ ಸಣ್ಣ ಗಲಾಟೆಯ ಬಳಿಕ ದಲಿತ ಕುಟುಂಬಗಳ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಳವಂಡಿ ಪೊಲೀಸ್ ಠಾಣೆಯಲ್ಲಿ 39 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂ.26ರಂದು ಮೊಹರಂ ಹಬ್ಬದ ಅಂಗವಾಗಿ ಅಲಾವಿ ಕುಣಿಯುವ ವೇಳೆ ಯಮನಪ್ಪ ಹರಿಜನ್ ಅವರ ಕಾಲನ್ನು ಶೇಖರಪ್ಪ ಉಪ್ಪಾರ್ ತುಳಿದ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಯಮನಪ್ಪ ಅವರು ಶೇಖರಪ್ಪ ಅವರನ್ನು ತಳ್ಳಿದ್ದು, ಕೆಳಗೆ ಬಿದ್ದ ಶೇಖರಪ್ಪ ಅವರು ಚಪ್ಪಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಗಲಾಟೆ ಬಿಡಿಸಲು ಮುಂದಾದ ಯುವಕನ ಮೇಲೂ ಗಣಿಸಾಬ್ ನದಾಫ್ ಹಾಗೂ ಶೇಖರಪ್ಪ ಉಪ್ಪಾರ್ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ..
ಘಟನೆಯ ಬಳಿಕ ಗ್ರಾಮದ ಹಿರಿಯರು ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸಿದ್ದರು. ಆದರೆ, ಮರುದಿನ ದಲಿತ ಸಮುದಾಯದ ವ್ಯಕ್ತಿಯೊಬ್ಬರು “ಈ ಬಾರಿ ರಾಜಿ ಬೇಡ, ಕಾನೂನು ಕ್ರಮ ಆಗಬೇಕು” ಎಂದು ಹೇಳಿದ ನಂತರ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಕೆಲವರು ಗುಂಪಾಗಿ ದಲಿತ ಕುಟುಂಬಗಳ ಮನೆಗಳ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯರು ಹಾಗೂ ಯುವಕರು ಸೇರಿದಂತೆ ಮನೆಯವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯಲ್ಲಿ ಮಹಿಳೆಯರು ಸೇರಿದಂತೆ ಹಲವರು ಗಾಯಗೊಂಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಈ ಸಂಬಂಧ ಬೋಚನಹಳ್ಳಿ ಗ್ರಾಮದ ಮಂಜುಳಾ ಮೈಲಪ್ಪ ಹಿರೇಮನಿ ಅವರು 39 ಜನರ ವಿರುದ್ಧ ದೂರು ದಾಖಲಿಸಿದ್ದು, ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಅಳವಂಡಿ ಪೊಲೀಸರು ಮುಂದುವರಿಸಿದ್ದಾರೆ.
ಈ ಕುರಿತು 39 ಜನರ ವಿರುದ್ಧ ಪ್ರತಿ ದೂರು ಕೂಡ ದಾಖಲಾಗಿದೆ.