ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ ಎಚ್.ವಿಶ್ವನಾಥ್
"50 ಕೋಟಿ ರೂ. ಖರ್ಚು ಮಾಡಿ ಚುನಾವಣೆ ಎದುರಿಸುವ ಶಕ್ತಿ ನನಗಿಲ್ಲ"
Update: 2026-05-07 17:41 IST
ಬೆಂಗಳೂರು : ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಘೋಷಿಸಿದ್ದಾರೆ.
ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಚುನವಾಣೆಗೆ ನಿಲ್ಲಬೇಕು ಎಂದರೆ 50 ರಿಂದ 100 ಕೋಟಿ ರೂ. ಬೇಕು. ಅಷ್ಟೊಂದು ಹಣ ಕೊಟ್ಟು ಚುನಾವಣೆ ಎದುರಿಸಲು ಆಗವುದಿಲ್ಲʼ ಎಂದು ಹೇಳಿದರು.
ನಾನು ಹಿಂದೆ ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೆ ಜನರೇ ಹಣ ಕೊಡುತ್ತಿದ್ದರು. ರಿಯಲ್ ಎಸ್ಟೇಟ್ ನಡೆಸುವವರು ನಿವೇಶನಗಳನ್ನಾದರೂ ಮಾರಾಟ ಮಾಡಿ ಚುನಾವಣೆ ಎದುರಿಸುತ್ತಾರೆ. ನನಗಿರುವುದು ಒಂದು ಮನೆ, ಒಂದು ನಿವೇಶನ. 50 ಕೋಟಿ ರೂ. ಖರ್ಚು ಮಾಡಿ ಚುನಾವಣೆ ಎದುರಿಸುವ ಶಕ್ತಿ ನನಗಿಲ್ಲ. ನನ್ನ ಮಕ್ಕಳು ಕೂಡ ಚುನಾವಣೆ ಎದುರಿಸುವುದಿಲ್ಲ, ಅವರ ಶಕ್ತಾನುಸಾರ ರಾಜಕೀಯದಲ್ಲಿ ಮುಂದುವರೆಯುತ್ತಾರೆ. ನಾನು ಕೂಡ ಮುಂದೆ ಬರುವ ಯಾವ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ. ಆದರೆ ರಾಜಕಾರಣದಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.