ವಿವಾದದ ಮಧ್ಯೆಯೇ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸಂಜಯ್ ಕೆ.ಅಗರವಾಲ್ ಹೆಸರು ಶಿಫಾರಸು
Credit: Websites/Rajasthan and Chhattisgarh HCs
ಹೊಸದಿಲ್ಲಿ: ರಾಜಸ್ಥಾನ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಛತ್ತೀಸ್ಗಢ ಹೈಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಕೆ. ಅಗರವಾಲ್ ಅವರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಕೊಲಿಜಿಯಂ ಈ ಶಿಫಾರಸು ಮಾಡಿದೆ. ರಾಜಸ್ಥಾನ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶರ್ಮಾ ಅವರ ಆಡಳಿತಾತ್ಮಕ ಅಧಿಕಾರಗಳ ಬಳಕೆ ಮತ್ತು ಪ್ರಕರಣಗಳ ಪಟ್ಟಿಗೆ ಸಂಬಂಧಿಸಿದಂತೆ ಆರೋಪಗಳು ಕೇಳಿಬಂದಿರುವ ಸಂದರ್ಭದಲ್ಲೇ ಕೊಲಿಜಿಯಂ ಈ ನಿರ್ಧಾರ ಕೈಗೊಂಡಿದೆ.
ನ್ಯಾಯಮೂರ್ತಿ ಮೆಹ್ತಾ ಅವರು ಸಿಜೆಐಗೆ ಬರೆದ ಪತ್ರಗಳಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶರ್ಮಾ ಆಡಳಿತಾತ್ಮಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ನ್ಯಾಯಮೂರ್ತಿ ಶರ್ಮಾ ಅವರನ್ನು ರಾಜಸ್ಥಾನ ಹೈಕೋರ್ಟ್ನಿಂದ ವರ್ಗಾಯಿಸಿ, ಬೇರೆ ಹೈಕೋರ್ಟ್ನಿಂದ ನಿಯಮಿತ ಮುಖ್ಯ ನ್ಯಾಯಮೂರ್ತಿಯನ್ನು ನೇಮಿಸುವಂತೆಯೂ ಅವರು ಕೋರಿದ್ದರು.
ಈ ಬೆಳವಣಿಗೆಗಳ ನಡುವೆಯೇ ಸೋಮವಾರ ಜೈಪುರ ಪೀಠದ ನ್ಯಾಯಾಲಯದ ಹೊರಗೆ ಕೆಲವು ವಕೀಲರು ಪ್ರತಿಭಟನೆ ನಡೆಸಿದರು. ಜೋಧ್ಪುರದ ಪ್ರಧಾನ ಪೀಠದ ವಕೀಲರು ನ್ಯಾಯಮೂರ್ತಿ ಶರ್ಮಾ ಅವರನ್ನು ಶಾಶ್ವತ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬಾರದು ಎಂದು ಒತ್ತಾಯಿಸಿ ಮಂಗಳವಾರದಿಂದ ಒಂದು ವಾರ ಮುಷ್ಕರ ನಡೆಸುವುದಾಗಿ ಘೋಷಿಸಿದ್ದರು.
ರಾಜಸ್ಥಾನ ಹೈಕೋರ್ಟ್ ವಕೀಲರ ಸಂಘದ ಜೋಧ್ಪುರ ಘಟಕದ ಅಧ್ಯಕ್ಷ ರಂಜೀತ್ ಜೋಶಿ ಅವರು, ಈ ಮೊದಲು ಘೋಷಿಸಿದಂತೆ ಮಂಗಳವಾರ ಮುಷ್ಕರ ನಡೆಸಲಾಗುವುದು. ಆದರೆ, ಮುಂದಿನ ನಡೆ ನಿರ್ಧರಿಸಲು ಮಂಗಳವಾರ ಸಭೆ ನಡೆಸಲಾಗುವುದು ಎಂದು ಹೇಳಿದ್ದರು.
“ನ್ಯಾಯಮೂರ್ತಿ ಮೆಹ್ತಾ ಅವರು ಎತ್ತಬೇಕಾದ ಸಮಸ್ಯೆಗಳನ್ನು ಎತ್ತಿದ್ದಾರೆ. ಈ ಕುರಿತು ನಾನು ಈ ಹಿಂದೆಯೇ ಸಿಜೆಐಗೆ ಪತ್ರ ಬರೆದಿದ್ದೆ. ನ್ಯಾಯಮೂರ್ತಿ ಶರ್ಮಾ ಅವರನ್ನು ಶಾಶ್ವತ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಬಾರದು ಎಂದು ನಾವು ಒತ್ತಾಯಿಸಿದ್ದೆವು” ಎಂದು ಜೋಶಿ ಅವರು ಹೇಳಿದ್ದರು.