ಜಂತರ್ ಮಂತರ್ ನಲ್ಲಿ ವೀಡಿಯೋಗ್ರಫಿ ಸುರಕ್ಷತೆಗಾಗಿ, ಕಣ್ಗಾವಲಿಗಾಗಿ ಅಲ್ಲ: ಹೈಕೋರ್ಟ್‌ ಗೆ ತಿಳಿಸಿದ ಕೇಂದ್ರ

Update: 2026-07-21 11:10 IST

Photo Credit : PTI 

ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ನಡೆಯುವ ಪ್ರತಿಭಟನೆಗಳ ವೇಳೆ ವೀಡಿಯೋಗ್ರಫಿ ನಡೆಸುವುದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುರಕ್ಷತೆಗಾಗಿ ಮಾತ್ರವೇ ಹೊರತು, ಪ್ರತಿಭಟನಾಕಾರರ ಮೇಲೆ ಕಣ್ಗಾವಲು ಅಥವಾ ಗೂಢಚಾರಿಕೆ ನಡೆಸಲು ಅಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್‌ ಗೆ ತಿಳಿಸಿತು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಐಷೆ ಘೋಷ್ ಅವರು ಕೇಂದ್ರ ಸರ್ಕಾರ ಮತ್ತು ದಿಲ್ಲಿ ಪೊಲೀಸರ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಾದ ಮಂಡಿಸಿದರು.

ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ನಿರಂತರವಾಗಿ ವೀಡಿಯೋಗ್ರಫಿ ನಡೆಸುತ್ತಿರುವುದು ಪ್ರತಿಭಟನಾಕಾರರ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತಿದೆ. ಇಂತಹ ಮೇಲ್ವಿಚಾರಣೆಗೆ ಕಟ್ಟುನಿಟ್ಟಾದ ಕಾನೂನು ನಿಯಮಗಳು ಇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಪ್ರತಿಭಟನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಮಾರ್ಗಸೂಚಿಗಳ ಅನುಸಾರ ದೆಹಲಿ ಪೊಲೀಸರು ಯಾವುದೇ ನಿಯಮಗಳನ್ನು ರೂಪಿಸಿರುವರೇ ಎಂಬುದನ್ನು ತಿಳಿಸುವಂತೆ ಕೇಂದ್ರಕ್ಕೆ ಸೂಚಿಸಿತು.

ಅರ್ಜಿದಾರರ ಪರ ಹಿರಿಯ ವಕೀಲೆ ನಂದಿತಾ ರಾವ್ ವಾದ ಮಂಡಿಸಿ, ಶಾಂತಿಯುತವಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳ ಮೇಲೆ ನಿರಂತರ ಕಣ್ಗಾವಲು ನಡೆಸುವುದು ಅತಿಕ್ರಮಣಕಾರಿ ಹಾಗೂ ಕಾನೂನುಬಾಹಿರ ಎಂದು ಹೇಳಿದರು. ಸಾರ್ವಜನಿಕ ಸ್ಥಳದಲ್ಲಿದ್ದರೂ ನಾಗರಿಕರು ತಮ್ಮ ಗೌಪ್ಯತೆಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ, ಜಂತರ್ ಮಂತರ್ ನಲ್ಲಿ ನಡೆಯುವ ಎಲ್ಲ ಪ್ರತಿಭಟನೆಗಳ ವೀಡಿಯೋಗ್ರಫಿ ಸಾಮಾನ್ಯ ಕ್ರಮವಾಗಿದೆ ಎಂದು ತಿಳಿಸಿದರು.

"ಜಂತರ್ ಮಂತರ್ ನಲ್ಲಿ ಪ್ರತಿದಿನ ಯಾವುದಾದರೂ ಪ್ರತಿಭಟನೆ ನಡೆಯುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅವುಗಳ ವೀಡಿಯೋಗ್ರಫಿ ಮಾಡಲಾಗುತ್ತದೆ. ಇದರಲ್ಲಿ ಗೂಢಚಾರಿಕೆ ಅಥವಾ ಕಣ್ಗಾವಲು ಎಂಬ ಪ್ರಶ್ನೆಯೇ ಇಲ್ಲ" ಎಂದು ಅವರು ಹೇಳಿದರು.

"ಪ್ರತಿಭಟನೆಯಲ್ಲಿ ಭಾಗವಹಿಸುವ ನೂರಾರು ಜನರು ಪ್ರತಿದಿನ ಮೊಬೈಲ್ ಗಳಲ್ಲಿ ವೀಡಿಯೋ ಮತ್ತು ರೀಲ್ಸ್ ಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಸರ್ಕಾರದ ವೀಡಿಯೋಗ್ರಫಿಯನ್ನು ಕಣ್ಗಾವಲು ಎಂದು ಕರೆಯಲು ಸಾಧ್ಯವಿಲ್ಲ" ಎಂದೂ ಅವರು ವಾದಿಸಿದರು.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅವರು ಈ ಅರ್ಜಿ ಅಗತ್ಯವಿಲ್ಲದ, ಕೇವಲ ತಾತ್ವಿಕ ಅಥವಾ ಅನಗತ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಎಂದೂ ಅಭಿಪ್ರಾಯಪಟ್ಟರು.

ಜಂತರ್ ಮಂತರ್ ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (CJP)ಯು ಜೂನ್ 20ರಿಂದ ಪ್ರತಿಭಟನೆ ನಡೆಸುತ್ತಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ. ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜೂನ್ 28ರಂದು ಪ್ರತಿಭಟನೆಯಲ್ಲಿ ಸೇರಿದ್ದು, ಅಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ವಕೀಲ ಸುಭಾಷ್ ಚಂದ್ರನ್ ಕೆ.ಆರ್. ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ಶಾಂತಿಯುತ ಪ್ರತಿಭಟನಾಕಾರರ ಮೇಲೆ "ನಿರಂತರ ಮತ್ತು ಸಾಮೂಹಿಕ ಕಣ್ಗಾವಲು" ಸಂವಿಧಾನಬಾಹಿರವಾಗಿದೆ ಎಂದು ಘೋಷಿಸುವಂತೆ ಕೋರಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ನೈಜ ಮತ್ತು ಸನ್ನಿಹಿತ ಅಪಾಯವಿಲ್ಲದಿದ್ದರೆ ಜಂತರ್ ಮಂತರ್ ನಲ್ಲಿ ಸಾಮೂಹಿಕ ಛಾಯಾಗ್ರಹಣ, ವೀಡಿಯೋಗ್ರಫಿ ಮತ್ತು ಕಣ್ಗಾವಲನ್ನು ತಕ್ಷಣ ನಿಲ್ಲಿಸುವಂತೆ ಆದೇಶ ನೀಡಬೇಕೆಂದೂ ಮನವಿ ಮಾಡಲಾಗಿದೆ.

ಅರ್ಜಿಯೊಂದಿಗೆ ಶಾಶ್ವತ ಕಣ್ಗಾವಲು ಗೋಪುರ ಹಾಗೂ ಪೊಲೀಸ್ ಸಿಬ್ಬಂದಿ ನಿರಂತರವಾಗಿ ಛಾಯಾಚಿತ್ರ ಮತ್ತು ವೀಡಿಯೋಗಳನ್ನು ದಾಖಲಿಸುತ್ತಿರುವ ಚಿತ್ರಗಳನ್ನು ಸಲ್ಲಿಸಲಾಗಿದೆ. ಪ್ರತಿಭಟನಾ ಸ್ಥಳದಲ್ಲಿರುವ ಪ್ರತಿಯೊಬ್ಬರನ್ನೂ ಯಾವುದೇ ಅನುಮಾನವಿಲ್ಲದೆ ನಿರಂತರವಾಗಿ ಚಿತ್ರೀಕರಿಸಲಾಗುತ್ತಿದೆ. ಪ್ರತಿಭಟನೆಯಷ್ಟೇ ಅಲ್ಲದೆ, ಊಟ, ವಿಶ್ರಾಂತಿ, ವೈದ್ಯಕೀಯ ನೆರವು ಪಡೆಯುವುದು ಸೇರಿದಂತೆ ವೈಯಕ್ತಿಕ ಚಟುವಟಿಕೆಗಳನ್ನೂ ದಾಖಲಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಪ್ರಕರಣದ ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದೆ. ಜಂತರ್ ಮಂತರ್ ನಲ್ಲಿ ವೀಡಿಯೋಗ್ರಫಿ ಸುರಕ್ಷತೆಗಾಗಿ ನಡೆಸುವ ಸಾಮಾನ್ಯ ಕ್ರಮ ಎಂಬ ಕೇಂದ್ರದ ವಾದ ಮತ್ತು ಅದು ಶಾಂತಿಯುತ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ಅತಿಕ್ರಮಣಕಾರಿ ಕಣ್ಗಾವಲು ಎಂಬ ಅರ್ಜಿದಾರರ ಆಕ್ಷೇಪವನ್ನು ಹೈಕೋರ್ಟ್ ಪರಿಶೀಲಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News