ಮಲಪ್ಪುರಂನಲ್ಲಿ ಭೀಕರ ಭೂಕುಸಿತ; ಲೈವ್ ವರದಿ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ಮಾಧ್ಯಮ ಸಿಬ್ಬಂದಿ, ಪೊಲೀಸರು

ಸಚಿವ ಕುಂಞಾಲಿಕುಟ್ಟಿ ಮನೆ ಸಮೀಪವೇ ಉರುಳಿದ ಗುಡ್ಡ!

Update: 2026-08-03 12:34 IST

ಮಲಪ್ಪುರಂ : ಕೇರಳದಾದ್ಯಂತ ವರದಿಯಾಗುತ್ತಿರುವ ಭಾರಿ ಮಳೆಯ ಬೆನ್ನಲ್ಲೇ, ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪರಪ್ಪನಂಗಾಡಿ-ನಾಡುಕಾಣಿ ರಾಜ್ಯ ಹೆದ್ದಾರಿಯಲ್ಲಿ ಇಂದು (ಆಗಸ್ಟ್ 3) ಭೀಕರ ಭೂಕುಸಿತ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ರಾಜ್ಯ ಹೆದ್ದಾರಿಯ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.

ಬೆಳಗ್ಗೆ ಹೆದ್ದಾರಿಯ ಪಕ್ಕದ ಬೆಟ್ಟದ ಒಂದು ಭಾಗ ಕುಸಿದ ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳು ಧಾವಿಸಿದ್ದರು. ಮಾಧ್ಯಮವೊಂದರ ವರದಿಗಾರರು ಸ್ಥಳದಿಂದ ನೇರ ಪ್ರಸಾರ ಮಾಡುತ್ತಿದ್ದಾಗ, ಅವರ ಕಣ್ಣೆದುರೇ ಇಡೀ ಬೆಟ್ಟದ ಬೃಹತ್ ಭಾಗವೊಂದು ಭೀಕರವಾಗಿ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಸುದ್ದಿಗಾರರು ಮತ್ತು ಸಾರ್ವಜನಿಕರು ಕ್ಷಣಾರ್ಧದಲ್ಲಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಚಿವ ಕುಂಞಾಲಿಕುಟ್ಟಿ ಮನೆ ಸಮೀಪವೇ ದುರಂತ:

ಈ ಭೂಕುಸಿತವು ಮುಸ್ಲಿಂ ಲೀಗ್ ನಾಯಕ ಹಾಗೂ ರಾಜ್ಯ ಕೈಗಾರಿಕಾ ಸಚಿವ ಪಿ.ಕೆ. ಕುಂಞಾಲಿಕುಟ್ಟಿ ಅವರ ಮನೆಯಿಂದ ಕೇವಲ 200 ರಿಂದ 300 ಮೀಟರ್ ದೂರದಲ್ಲಿ ನಡೆದಿದೆ. ಬೆಟ್ಟದ ಮಣ್ಣು, ಕಲ್ಲು ಹಾಗೂ ಬೃಹತ್ ಮರಗಳು ಹೆದ್ದಾರಿಗೆ ಬಿದ್ದಿದ್ದರಿಂದ ರಸ್ತೆ ಸಂಪೂರ್ಣ ಬಂದ್ ಆಗಿದೆ. ಪ್ರಸ್ತುತ ವಾಹನಗಳನ್ನು ಕೋನಂಪಾರ ಮಾರ್ಗವಾಗಿ ಪರ್ಯಾಯ ರಸ್ತೆಗಳಿಗೆ ತಿರುಗಿಸಲಾಗಿದೆ.

ಅವೈಜ್ಞಾನಿಕ ಕಾಮಗಾರಿಯೇ ಕಾರಣ; ಸಚಿವಸ್ಥಳೀಯರ ಆರೋಪ:

ಖಾಸಗಿ ಆಸ್ಪತ್ರೆ ಅಥವಾ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಜೆಸಿಬಿ ಯಂತ್ರ ಬಳಸಿ ಬೆಟ್ಟದ ತಳಭಾಗದ ಮಣ್ಣನ್ನು ಅವೈಜ್ಞಾನಿಕವಾಗಿ ಅಗೆದು ತೆಗೆದಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಮತ್ತು ಸಚಿವ ಕುಂಞಾಲಿಕುಟ್ಟಿ ಆರೋಪಿಸಿದ್ದಾರೆ. ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಜಂಟಿಯಾಗಿ ರಸ್ತೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News