×
Ad

ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಬಳಿಕ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ರಜನಿಕಾಂತ್

Update: 2023-08-20 13:19 IST

Photo credit : ANI

ಲಕ್ನೊ: ರವಿವಾರದಂದು ಹಿರಿಯ ನಟ ಹಾಗೂ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಭೇಟಿಯ ವಿಡಿಯೊವನ್ನು ANI ಸುದ್ದಿ ಸಂಸ್ಥೆ ಹಂಚಿಕೊಂಡಿದ್ದು, ಅದರಲ್ಲಿ ರಜನಿಕಾಂತ್ ನಾವಿಬ್ಬರೂ ಒಂಬತ್ತು ವರ್ಷಗಳ ನಂತರ ಭೇಟಿಯಾಗುತ್ತಿದ್ದೇವೆ ಎಂದು ಹೇಳುತ್ತಿರುವುದನ್ನು ನೋಡಬಹುದಾಗಿದೆ. ಅಖಿಲೇಶ್ ಯಾದವ್ ಕೂಡಾ ರಜನಿಕಾಂತ್ ರೊಂದಿಗಿನ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್, “ನಾನು ಅಖಿಲೇಶ್ ಯಾದವ್ ರನ್ನು ಒಂಬತ್ತು ವರ್ಷಗಳ ಹಿಂದೆ ಮುಂಬೈನ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ ಹಾಗೂ ಅಂದಿನಿಂದ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ನಾವಿಬ್ಬರೂ ಫೋನ್ ನಲ್ಲಿ ಮಾತನಾಡುತ್ತಿರುತ್ತೇವೆ. ಐದು ವರ್ಷಗಳ ಹಿಂದೆ ನಾನಿಲ್ಲಿಗೆ ಚಿತ್ರೀಕರಣಕ್ಕಾಗಿ ಬಂದಿದ್ದೆನಾದರೂ, ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈಗವರು ಇಲ್ಲಿರುವುದರಿಂದ ನಾನು ಭೇಟಿಯಾಗುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರೊಂದಿಗಿನ ಭೇಟಿ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, “ತುಂಬಾ ಅದ್ಭುತವಾಗಿತ್ತು, ಇಷ್ಟವಾಯಿತು” ಎಂದು ರಜನಿಕಾಂತ್ ಉತ್ತರಿಸಿದ್ದಾರೆ.

“ಇದು ಸ್ನೇಹಪೂರ್ವಕ ಭೇಟಿಯಾಗಿತ್ತು. ಅವರು ನನ್ನ ಸ್ನೇಹಿತರು” ಎಂದೂ ಹೇಳಿರುವ ರಜನಿಕಾಂತ್, ರಾಮನ ಆಶೀರ್ವಾದ ಪಡೆಯಲು ನಾನು ರವಿವಾರ ಲಕ್ನೋದಿಂದ ಅಯೋಧ್ಯೆಗೆ ಪ್ರಯಾಣಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನೀವೇನಾದರೂ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಯನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂದು ನಗುತ್ತಾ ಉತ್ತರಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News