ಚಿಟಗುಪ್ಪ: ನನೆಗುದಿಗೆ ಬಿದ್ದ ಗ್ರಂಥಾಲಯ ಕಟ್ಟಡ ಕಾಮಗಾರಿ
ಬೀದರ್: ಹೊಸ ತಾಲೂಕು ಆಗಿರುವ ಚಿಟಗುಪ್ಪ ಪಟ್ಟಣದಲ್ಲಿ ಸುಮಾರು ಎರಡು ವರ್ಷಕ್ಕಿಂತಲೂ ಹೆಚ್ಚು ದಿನಗಳ ಕಾಲದಿಂದ ತಾಲೂಕು ಗ್ರಂಥಾಲಯ ಕಟ್ಟಡ ನಿರ್ಮಾಣದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಓದುಗರು ಹಾಗೂ ವಿದ್ಯಾರ್ಥಿಗಳು ಓದುವುದಕ್ಕೆ ಸ್ಥಳ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
2022-23ನೇ ಸಾಲಿನ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ ಮಂಜೂರಾದ ಚಿಟಗುಪ್ಪ ತಾಲೂಕು ಗ್ರಂಥಾಲಯ ಕಟ್ಟಡ ಮಂಜೂರಾಗಿತ್ತು. 2024ರಲ್ಲಿ ಚಿಟಗುಪ್ಪ ಪಟ್ಟಣದ ಸರ್ವೆ ನಂ.190ರಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ ಭೂಮಿಯನ್ನು ನಿಗದಿ ಮಾಡಲಾತ್ತು. ಆದರೆ ಗ್ರಂಥಾಲಯ ಕಟ್ಟಡದಕಾಮಗಾರಿಯನ್ನು ದೇವಸ್ಥಾನದ ಆವರಣದಲ್ಲಿ ಬರುತ್ತದೆ ಎಂದು ಅಲ್ಲಿನ ಸ್ಥಳಿಯರು ಕಟ್ಟಡ ನಿರ್ಮಾಣದ ಕೆಲಸಕ್ಕೆ ವಿರೋಧಿಸಿದಾಗ ಅಲ್ಲಿನ ಆ ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.
ಅನಂತರ ಎರಡನೇ ಬಾರಿಗೆ ಮತ್ತೊಂದು ಬೇರೆ ಸ್ಥಳದಲ್ಲಿ ಭೂಮಿಯನ್ನು ಗುರುತಿಸಿ ಕಟ್ಟಡದ ಅಡಿಪಾಯಕ್ಕಾಗಿ ಭೂಮಿ ಅಗೆದಾಗ ಆ ಜಾಗವೂ ಕೂಡ ದೇವಸ್ಥಾನಕ್ಕೆ ಸೇರಿದೆ ಎಂದು ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರದಲ್ಲಿ ಮೂರನೇ ಸ್ಥಳದಲ್ಲಿ ಭೂಮಿಯನ್ನು ಗುರತು ಮಾಡಲಾಗಿತ್ತು. ಈ ಮೂರನೇ ಸ್ಥಳದಲ್ಲಿ ಅಡಿಪಾಯಕ್ಕಾಗಿ ಭೂಮಿ ಅಗೆದು ಪಿಲ್ಲರ್ಗಳು ಹಾಕಲಾಗಿದೆ. ಆದರೆ, ಈ ಸ್ಥಳ ಕೂಡ ವಕ್ಫ್ ಆಸ್ತಿ ಎಂದು ವಿರೋಧ ಬಂದಿದ್ದರಿಂದ ಗ್ರಂಥಾಲಯ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಈ ಎಲ್ಲದರ ಪರಿಣಾಮವಾಗಿ ಚಿಟಗುಪ್ಪದಲ್ಲಿ ತಾಲೂಕು ಸಾರ್ವಜನಿಕ ಗ್ರಂಥಾಲಯ ಇಲ್ಲದಂತಾಗಿದೆ. ಇದೀಗ ಒಂದು ಚಿಕ್ಕ ಕೋಣೆಯಲ್ಲಿ ಹೆಸರಿಗೆ ಮಾತ್ರ ಗ್ರಂಥಾಲಯ ನಡೆಸಲಾಗುತ್ತಿದೆ. ಅಲ್ಲಿ ಮೂಲಭೂತ ಸೌಕರ್ಯಗಳದ್ದು ದೂರದ ಮಾತು, ಕುಳಿತುಕೊಂಡು ಓದುವುದಕ್ಕೆ ಸ್ಥಳದ ವ್ಯವಸ್ಥೆ ಕೂಡ ಇಲ್ಲ.
2010ರಲ್ಲೇ ಸ್ಥಳ ನಿಗದಿಯಾಗಿತ್ತು: ಚಿಟಗುಪ್ಪ ತಾಲೂಕು ಎಂದು ಘೋಷಣೆಯಾಗುವ ಮೊದಲು ಹುಮನಾಬಾದ್ ತಾಲೂಕಿನಲ್ಲಿತ್ತು. 2010ರಲ್ಲಿ ಸಮೀರ್ ಶುಕ್ಲಾ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಚಿಟಗುಪ್ಪ ಪಟ್ಟಣದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾಡುವುದಕ್ಕಾಗಿ ಭೂಮಿಯನ್ನು ನಿಗದಿಗೊಳಿಸಲಾಗಿತ್ತು. ಪಟ್ಟಣದಿಂದ ಕೂಡಂಬಲ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸರಕಾರಿ ಸರ್ವೇ ನಂ.190/1ರಲ್ಲಿ 100x100 ಅಡಿ ಭೂಮಿಯನ್ನು ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಟ್ಟಲು ಭೂಮಿಯನ್ನು ಕಾಯ್ದಿರಿಸಾಲಾಗಿತ್ತು. ಆದರೆ ಇದೀಗ ಸರಕಾರಿ ಜಮೀನು ಇದ್ದರೂ ಗ್ರಂಥಾಲಯ ನಿರ್ಮಾಣ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುತ್ತಿಗೆದಾರರ ಹಣವೂ ಪಾವತಿಸಿಲ್ಲ: ಇದೀಗ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕಾಗಿ ಒಂದು ಕಡೆಗೆ ಅಡಿಪಾಯಕ್ಕಾಗಿ ಭೂಮಿ ಅಗೆದು, ಇನ್ನೊಂದು ಕಡೆಗೂ ಭೂಮಿ ಅಗೆದು ಪಿಲ್ಲರ್ ಗಳನ್ನು ಹಾಕಲಾಗಿದೆ. ಇದೆಲ್ಲದರ ಖರ್ಚು ವೆಚ್ಚವೆಲ್ಲ ಆ ಗ್ರಂಥಾಲಯದ ಕಟ್ಟಡ ಕಾಮಗಾರಿಯ ಗುತ್ತಿಗೆದಾರರು ಸಾಲ ಮಾಡಿ ಲಕ್ಷಾಂತರ ರೂ. ಭರಿಸಿದ್ದಾರೆ. ಆದರೆ, ಅವರಿಗೆ ಬಿಲ್ಲಿನ ಹಣ ಮಂಜೂರು ಮಾಡಲಿಲ್ಲ. ಇದರಿಂದಾಗಿ ಓದುಗರ ಜೊತೆಗೆ ಗುತ್ತಿಗೆದಾರರು ಕೂಡ ಸಂಕಷ್ಡಕ್ಕೆ ಸಿಲುಕಿದ್ದಾರೆ.
ಈ ಬಗ್ಗೆ ಗುತ್ತಿಗೆದಾರರು ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದು, ಸಾಲ ಮಾಡಿ ಈ ಕಾಮಗಾರಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಕಾಮಗಾರಿ ಮಾಡಿದ ಬಿಲ್ಲಿನ ಹಣ ಬಿಡುಗಡೆಯಾಗಿಲ್ಲ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಕಾಮಗಾರಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಆದ್ದರಿಂದ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಈ ಗ್ರಂಥಾಲಯದ ಸಮಸ್ಯೆಗೆ ಪರಿಹಾರ ಹುಡುಕಿ ಗ್ರಂಥಾಲಯ ನಿರ್ಮಾಣ ಮಾಡಬೇಕಾಗಿದೆ. ಇದರ ಬಗ್ಗೆ ಚಿಟಗುಪ್ಪ ತಹಶೀಲ್ದಾರ್ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
ನಮಗೆ ಪಿಡಿಒ, ತಹಶೀಲ್ದಾರ್ ಅವರು ಸ್ಥಳ ತೋರಿಸಿದ ಜಾಗದಲ್ಲಿಯೇ ಗ್ರಂಥಾಲಯ ಕಟ್ಟಡ ಕೆಲಸ ಪ್ರಾರಂಭಿಸಿದ್ದೆವು. ಆದರೆ, ಸ್ಥಳೀಯರು ಆ ಕಾಮಗಾರಿಯನ್ನು ತಡೆದಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಯಿತು. ಇದರ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದೇವೆ. ನಾವು ಕಾಮಗಾರಿ ಮುಂದುವರಿಸಲು ತಯಾರಿದ್ದೇವೆ. ಆದರೆ, ಜಾಗದ ಸಮಸ್ಯೆ ಎದುರಾಗುತ್ತಿದೆ. ಅಪೂರ್ಣ ಕಾಮಗಾರಿ ನಡೆದಿದ್ದರಿಂದ ಗುತ್ತಿಗೆದಾರರ ಹಣವನ್ನು ಕೂಡ ನೀಡಲು ಬರುತ್ತಿಲ್ಲ.
-ಅಭಿಷೇಕ್ ಪೋಲಾ
ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಲೋಕೋಪಯೋಗಿ ಇಲಾಖೆಚಿಟಗುಪ್ಪ ಪಟ್ಟಣದಲ್ಲಿ ಸಾರ್ವಜನಿಕ ಗ್ರಂಥಾಲಯದ ಕಟ್ಟಡವಿಲ್ಲದೇ ಓದುಗರು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆದಷ್ಟು ಬೇಗ ಅರ್ಧಕ್ಕೆ ನಿಂತ ಗ್ರಂಥಾಲಯ ಕಟ್ಟಡ ಕಾಮಗಾರಿಯು ಪೂರ್ಣಗೊಳಿಸಿ ಓದುಗರಿಗೆ ಅನುಕೂಲ ಮಾಡಿ ಕೊಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು.
-ಗಗನ್, ಪ್ರಜಾಪ್ರಭುತ್ವ ಸಂರಕ್ಷಣಾ
ಸಮಿತಿ ಸಂಸ್ಥಾಪಕ ಅಧ್ಯಕ್ಷ
ಸಾಲ ಮಾಡಿ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಹಣ ಹಾಕಿದ್ದೇನೆ. ಆದರೆ ನನಗೆ ಇಲ್ಲಿಯವರೆಗೆ ಆ ಕಾಮಗಾರಿಯ ಹಣ ನೀಡಲಿಲ್ಲ. ಹಾಗೆಯೇ ಕಾಮಗಾರಿಯು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ನನಗೆ ತುಂಬಾ ಆರ್ಥಿಕ ನಷ್ಟವಾಗಿದೆ. ಮುಂದಿನ ಕಾಮಗಾರಿ ಮಾಡಲು ನಾನು ತಯಾರಿದ್ದು, ಅದೆಷ್ಟೇ ಸಲ ಅಧಿಕಾರಿಗಳಿಗೆ ಪತ್ರ ಬರೆದರು ಕೂಡ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ನಮಗೆ ನ್ಯಾಯ ದೊರಕಿಸಬೇಕು.
-ಜೈಶೀಲಕುಮಾರ್
ಗ್ರಂಥಾಲಯ ಕಟ್ಟಡದ ಗುತ್ತಿಗೆದಾರ ಗ್ರಂಥಾಲಯ ಕಟ್ಟಡದ ಗುತ್ತಿಗೆದಾರ