ಜನಬಳಕೆಯ ಕಾರಂಜಾ ನದಿಗೆ ಗುರುಕುಲದ ಮಲಿನ ನೀರು ಸೇರ್ಪಡೆ

Update: 2026-08-22 14:50 IST

ಬೀದರ್: ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ಸಮೀಪದ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ, ಕಾಲೇಜು ಹಾಗೂ ವಸತಿ ನಿಲಯದಿಂದ ಪ್ರತಿದಿನ ಬಿಡುಗಡೆಯಾಗುವ ಸಾವಿರಾರು ಲೀಟರ್ ಕೊಳಚೆ ನೀರು ಕಾಲುವೆ ಮೂಲಕ ಹರಿದು ಕಾರಂಜಾ ನದಿಗೆ ಸೇರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಗುರುಕುಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದು, ಅವರಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದಾರೆ. ನೂರಾರು ಶಿಕ್ಷಕರು ಹಾಗೂ ಸಿಬ್ಬಂದಿಯೂ ಇಲ್ಲಿದ್ದಾರೆ. ಇವರೆಲ್ಲ ಬಳಸುವ ನೀರು ಸೂಕ್ತ ಸಂಸ್ಕರಣೆಯಿಲ್ಲದೆ ಹೊರಗೆ ಹರಿದು ಬರುತ್ತಿರುವುದರಿಂದ ಭಾಲ್ಕಿ-ಬೀದರ್ ರಸ್ತೆಯ ಸಮೀಪ ಹಾಗೂ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕೊಳಚೆ ನೀರು ಹರಿಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವವರು ದುರ್ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ಗುರುಕುಲದಲ್ಲಿ ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣಾಘಟಕ) ವ್ಯವಸ್ಥೆ ಇದ್ದರೂ, ಅದರ ಸಾಮರ್ಥ್ಯಕ್ಕೆ ಹೋಲಿಸಿದರೆ ತ್ಯಾಜ್ಯ ನೀರಿನ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಕಾಲುವೆ ಮೂಲಕ ಕಾರಂಜಾ ನದಿಗೆ ಸೇರುವ ಕೊಳಚೆ ನೀರು

ಗುರುಕುಲದಿಂದ ಹೊರಬರುವ ಕೊಳಚೆ ನೀರು ಕಾಲುವೆ ಮೂಲಕ ತಳವಾಡ ಗ್ರಾಮದ ಹಳ್ಳವನ್ನು ಸೇರುತ್ತದೆ. ಅಲ್ಲಿಂದ ಚಿಕ್ಕಲಚೆಂದಾ ಗ್ರಾಮದ ಪ್ರಮುಖ ಹಳ್ಳದ ಮೂಲಕ ಹರಿದು ಕುಂಟೆಸಿರ್ಸಿ ಗ್ರಾಮದ ಸಮೀಪ ಕಾರಂಜಾ ನದಿಗೆ ಸೇರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಿಕ್ಕಲಚೆಂದಾ ಗ್ರಾಮದ ಬಳಿ ಹರಿಯುವ ಈ ಹಳ್ಳದ ನೀರನ್ನು ಮಹಿಳೆಯರು ಬಟ್ಟೆ ತೊಳೆಯಲು ಬಳಸುತ್ತಾರೆ. ಯುವಕರು ಇದರಲ್ಲೇ ಈಜಾಡುತ್ತಾರೆ. ಜಾನುವಾರುಗಳೂ ನೀರು ಕುಡಿಯುತ್ತವೆ. ಹೀಗಾಗಿ, ಕೊಳಚೆ ನೀರು ಮಿಶ್ರಣವಾಗುತ್ತಿರುವುದರಿಂದ ಜನರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಸೋಪು ಸೇರಿದಂತೆ ಗೃಹಬಳಕೆಯ ತ್ಯಾಜ್ಯ ಹಾಗೂ ಇತರ ಕೊಳಚೆ ನೀರು ನದಿಗೆ ಸೇರುವುದರಿಂದ ಜಲಚರಗಳ ಮೇಲೂ ಪರಿಣಾಮ ಬೀರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾಲ್ಕಿ ನಗರಕ್ಕೂ ಕಾರಂಜಾ ನೀರು ಪೂರೈಕೆ

ಕಾರಂಜಾ ನದಿಯ ನೀರನ್ನು ಶುದ್ಧೀಕರಿಸಿ ಭಾಲ್ಕಿ ನಗರಕ್ಕೆ ಕುಡಿಯುವ ನೀರಾಗಿ ಪೂರೈಸಲಾಗುತ್ತದೆ. ದಾಡಗಿ ಗ್ರಾಮದ ಸಮೀಪದಿಂದ ನೀರನ್ನು ಪಡೆದು ನಗರಕ್ಕೆ ಸರಬರಾಜು ಮಾಡಲಾಗುತ್ತದೆ.

ಭಾಲ್ಕಿ ನಗರದ ಬಹುತೇಕ ಜನರು ಈ ನೀರನ್ನೇ ಅವಲಂಬಿಸಿರುವ ಹಿನ್ನೆಲೆಯಲ್ಲಿ, ಕೊಳಚೆ ನೀರು ಕಾರಂಜಾ ನದಿಗೆ ಸೇರುತ್ತಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನದಿಗೆ ಸೇರುವ ತ್ಯಾಜ್ಯ ನೀರನ್ನು ತಡೆದು ನೀರಿನ ಮೂಲವನ್ನು ಸಂರಕ್ಷಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸೇತುವೆಗಳಿಗೂ ಹಾನಿಯಾಗುವ ಆತಂಕ

ಗುರುಕುಲದಿಂದ ನಿರಂತರವಾಗಿ ಕೊಳಚೆ ನೀರು ಹರಿಯುತ್ತಿರುವುದರಿಂದ ಭಾಲ್ಕಿ-ಬೀದರ್ ರಸ್ತೆಯ ಸಣ್ಣ ಸೇತುವೆ ಹಾಗೂ ರೈಲ್ವೆ ಸೇತುವೆ ಸುತ್ತಮುತ್ತ ನೀರು ನಿಲ್ಲುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ನಿರಂತರವಾಗಿ ಕೊಳಚೆ ನೀರು ಹರಿಯುವುದರಿಂದ ಸೇತುವೆಗಳ ರಚನೆಗೆ ಹಾನಿಯಾಗುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹೊಲಗಳಿಗೆ ತೆರಳಲೂ ರೈತರಿಗೆ ತೊಂದರೆ

ಕೊಳಚೆ ನೀರು ಹರಿಯುವ ಕಾಲುವೆಯ ಎರಡೂ ಬದಿಗಳಲ್ಲಿ ಕೃಷಿ ಜಮೀನುಗಳಿವೆ. ದುರ್ವಾಸನೆ ಹಾಗೂ ಕೊಳಚೆ ನೀರಿನ ಹರಿವಿನಿಂದ ರೈತರು ತಮ್ಮ ಹೊಲಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಹಲವು ದಿನಗಳಿಂದ ಮುಂದುವರಿದಿದ್ದರೂ ಪರಿಹಾರ ಕಾಣುತ್ತಿಲ್ಲ ಎಂದು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವು ಗ್ರಾಮಗಳ ಮೇಲೆ ಪರಿಣಾಮದ ಆತಂಕ

ಕಾರಂಜಾ ನದಿ ಹರನಾಳ, ದಾಡಗಿ, ನೀಡೆಬನ್, ಆನಂದವಾಡಿ, ಇಂಚೂರ್, ಖುದಾಂಪುರ, ವಾಗಲಗಾಂವ್ ಹಾಗೂ ಭಾಟಸಾಂಗವಿ ಸೇರಿದಂತೆ ಹಲವು ಗ್ರಾಮಗಳ ಮೂಲಕ ಹರಿದು ಸಂಗಮ್ ಗ್ರಾಮದ ಸಮೀಪ ಮಾಂಜ್ರಾ ನದಿಯನ್ನು ಸೇರುತ್ತದೆ.

ಈ ಗ್ರಾಮಗಳ ಜನರು ಕೃಷಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಕಾರಂಜಾ ನದಿಯ ನೀರನ್ನು ಬಳಸುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ. ನದಿಯ ನೀರನ್ನು ಕೃಷಿಗೆ ಬಳಸುವುದರ ಜತೆಗೆ ರೈತರು ಹೊಲಗಳಲ್ಲಿ ಕೆಲಸ ಮಾಡುವಾಗ ಕುಡಿಯಲು ಬಳಸುವ ಸಾಧ್ಯತೆಯೂ ಇರುವುದರಿಂದ, ಗುರುಕುಲದ ಕೊಳಚೆ ನೀರು ನದಿಗೆ ಸೇರುವ ಆರೋಪದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪರಿಶೀಲಿಸಿ ಕಾನೂನು ಕ್ರಮ: ಮಾಲಿನ್ಯ ನಿಯಂತ್ರಣ ಇಲಾಖೆ

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಯನ್ನು ಸಂಪರ್ಕಿಸಿದಾಗ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ನಾವು ಹಲವು ಬಾರಿ ನೋಟಿಸ್ ನೀಡಿದ್ದೇವೆ. ಕೆಲ ದಿನ ನೀರು ಬಿಡುವುದನ್ನು ನಿಲ್ಲಿಸಿದ್ದರು. ನಂತರ ಮತ್ತೆ ನೀರು ಬಿಡುತ್ತಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಗುರುಕುಲದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಎಸ್‌ಟಿಪಿ ಮಂಜೂರಾಗಿದೆ ಎಂಬ ಮಾಹಿತಿಯೂ ಇದೆ.

-ಪ್ರಭುಶೆಟ್ಟಿ ತಳವಾಡ ಗ್ರಾಪಂ ಪಿಡಿಒ

ಮಳೆಗಾಲದಲ್ಲಿ ಮಾತ್ರ ಹೆಚ್ಚು ನೀರು ಹೊರಗೆ: ಗುರುಕುಲ ಆಡಳಿತ ಶಾಲೆಯಲ್ಲಿ 1.25 ಲಕ್ಷ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ಇದ್ದು, ಎರಡು ಯೂನಿಟ್‌ಗಳಿವೆ. ಮಳೆ ಬಂದಾಗ ನೀರಿನ ಪ್ರಮಾಣ ಹೆಚ್ಚಾಗಿ ಹೊರಗೆ ಬರುತ್ತದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಕಡಿಮೆ ಪ್ರಮಾಣದ ನೀರು ಹೊರಗೆ ಹೋಗುತ್ತದೆ. ಇದನ್ನು ತಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

-ಮೋಹನ್ ರೆಡ್ಡಿ

ಗುರುಕುಲ ವಸತಿ ಶಾಲೆಯ ಆಡಳಿತ ಅಧಿಕಾರಿ

ಕರಡ್ಯಾಳ ಗುರುಕುಲ ವಸತಿ ಶಾಲೆಯ ಕೊಳಚೆ ನೀರು ತಳವಾಡ, ಚಿಕ್ಕಲಚೆಂದಾ ಹಾಗೂ ಕುಂಟೆಸಿರ್ಸಿ ಗ್ರಾಮಗಳ ಮೂಲಕ ಕಾರಂಜಾ ನದಿಗೆ ಸೇರುತ್ತಿದೆ. ಈ ನೀರನ್ನು ಜನರು, ಜಾನುವಾರುಗಳು ಹಾಗೂ ಪ್ರಾಣಿ-ಪಕ್ಷಿಗಳು ಬಳಸುತ್ತವೆ. ಭಾಲ್ಕಿ ನಗರಕ್ಕೂ ಕಾರಂಜಾ ನದಿಯ ನೀರು ಪೂರೈಕೆಯಾಗುತ್ತದೆ. ಹೀಗಾಗಿ ಸಾರ್ವಜನಿಕರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕವಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಗುರುಕುಲದಿಂದ ಕಾರಂಜಾ ನದಿಗೆ ಕೊಳಚೆ ನೀರು ಸೇರುವುದನ್ನು ತಡೆಯಬೇಕು.

-ಗಗನ್, ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ, ಭಾಲ್ಕಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor

Similar News