ಬೀದಿ ನಾಯಿಗಳ ದಾಳಿಗೆ ಬೆಚ್ಚಿ ಬಿದ್ದ ರಾಯಚೂರು

‌ ►ಬಾಲಕನ ಮೇಲೆ ಭೀಕರ ದಾಳಿ ►6 ತಿಂಗಳಲ್ಲಿ 1650 ಪ್ರಕರಣಗಳು ವರದಿ

Update: 2026-07-22 15:27 IST

ರಾಯಚೂರು: ಜಿಲ್ಲಾದ್ಯಂತ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ತೊಟ್ಟಿಲಿನಲ್ಲಿದ್ದ ಮಗುವಿನ ಮೇಲೆರಗಿ ಬಲಿ ಪಡೆದ ಘಟನೆ ಮಾಸುವ ಮುನ್ನವೇ ಸೋಮವಾರ ರಾಯಚೂರಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಬಾಲಕನ ಮೇಲೆ ಭೀಕರ ದಾಳಿ ಮಾಡಿರುವ ಬೀದಿನಾಯಿಗಳ ಕೃತ್ಯದಿಂದ ಬಾಲಕ ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಹಾಗೂ ವಯೋವೃದ್ಧರು ಗಾಯಗೊಳ್ಳುತ್ತಿರುವುದು ಹಾಗೂ ಕೆಲ ಪ್ರಕರಣಗಳಲ್ಲಿ ಸಾವನ್ನಪ್ಪಿರುವ ಘಟನೆಗಳು ಆತಂಕಕ್ಕೆ ಕಾರಣವಾಗಿದೆ. ಇಂತಹ ಪ್ರಕರಣಗಳು ತಿಂಗಳಿಗೆ 250-300 ದಾಟುತ್ತಿದ್ದು, ಹತೋಟಿಗೆ ತರುವುದು ಸವಾಲಾಗಿದೆ.

ಒಂಟಿಯಾಗಿ ವಾಯು ವಿಹಾರಕ್ಕೆ ಹೋಗಲು ಹಾಗೂ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆ ಸೇರಲು ಭಯ ಪಡುವಂತಾಗಿದೆ. ಪ್ರಮುಖ ಬೀದಿಗಳಲ್ಲಿ ಹಿಂಡು ಹಿಂಡಾಗಿ ನಾಯಿಗಳು ಓಡಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದೆ.

ಇತ್ತೀಚಿಗೆ ಸಿಂಧನೂರಿನಲ್ಲಿ ಮನೆಯ ಮುಂದೆ ಪಾಲಕರೊಂದಿಗೆ ಜೋಳಿಗೆಯಲ್ಲಿ ಮಲಗಿದ್ದ ಒಂದುವರೆ ವರ್ಷದ ಹೆಣ್ಣು ಮಗುವಿನ ಮೇಲೆ ನಾಯಿ ದಾಳಿ ಮಾಡಿ ಬಲಿ ಪಡೆದಿತ್ತು. ಸೋಮವಾರವೂ ರಾಯಚೂರಿನ ಮಲಿಯಾಬಾದ್ ಗ್ರಾಮದ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದ್ದು, ನವೋದಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ.

ಕಳೆದ 6 ತಿಂಗಳಲ್ಲಿ ಜಿಲ್ಲೆಯಲ್ಲಿ 1650ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ರಿಮ್ಸ್ ಆಸ್ಪತ್ರೆಗೆ ತಿಂಗಳಿಗೆ ಅಂದಾಜು 250-300 ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆಗೆ ಬರುತ್ತಿದ್ದಾರೆ. ಜನವರಿಯಲ್ಲಿ 285, ಫೆಬ್ರುವರಿ 232, ಮಾರ್ಚ್ 257 ಹಾಗೂ ಏಪ್ರಿಲ್‌ನಲ್ಲಿ ಅತಿ ಹೆಚ್ಚು 365 ಪ್ರಕರಣಗಳು ಹಾಗೂ ಮೇ, ಜೂನ್ ನಲ್ಲಿ ತಲಾ 250 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ರಿಮ್ಸ್ ಬೋಧಕ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ತಪ್ಪಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ನಾಯಿಗಳು ಜನರಲ್ಲದೆ ಕುರಿ, ಹಸು ಹಾಗೂ ಕೋಳಿಗಳ ಮೇಲೂ ದಾಳಿ ನಡೆಸುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

2025ರ ಜೂ.10ರಂದು ರಾಯಚೂರು ನಗರದ ಆಮ್ ತಲಾಬ್ ಬಳಿ ಒಂದೇ ದಿನ 17 ಜನರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಅನೇಕರಿಗೆ ಗಾಯಗೊಳಿಸಿತ್ತು. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡಿದ್ದ ಎಸ್‌ಡಿಪಿಐ ಪಾಲಿಕೆಯ ಮುಂದೆ ಪ್ರತಿಭಟನೆ ನಡೆಸಿ ಕಚೇರಿ ಮುತ್ತಿಗೆ ಹಾಕಿತ್ತು. ಬಳಿಕ ಪಾಲಿಕೆಯ ಆಯುಕ್ತರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಇದರಿಂದ ಕೆಲಕಾಲ ನಾಯಿ ಕಡಿತ ಪ್ರಕರಣ ನಿಯಂತ್ರಣದಲ್ಲಿದ್ದವು. ಮಳೆಯಾಗುತ್ತಿದ್ದಂತೆ ಮತ್ತೆ ದಾಳಿಗಳು ನಡೆಯುತ್ತಿವೆ.

ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಷಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು, ಮಂಗಳವಾರ ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆಯನ್ನು ಒಳಗೊಂಡ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ.

ಬೀದಿ ನಾಯಿ ದಾಳಿ ಪ್ರಕರಣಗಳನ್ನು ತಡೆಗಟ್ಟಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಕಟ್ಟು ನಿಟ್ಟಾಗಿ ಸೂಚಿಸಿದ್ದಾರೆ.

ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕ್ರೂರ ಹಾಗೂ ಅಕ್ರಮಣಕಾರಿ ನಾಯಿಗಳು ಕಂಡುಬಂದರೆ ತಕ್ಷಣ ಸಂಬಂಧಿತ ನೋಡಲ್ ಅಧಿಕಾರಿಗಳು ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರತಿ ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿಯು ಸಭೆ ನಡೆಸಿ ಬೀದಿ ನಾಯಿಗಳನ್ನು ಗುರುತಿಸುವುದು. ಶಾಲೆಗಳು, ಆಸ್ಪತ್ರೆಗಳು, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು, ಮಟನ್ ಅಂಗಡಿಗಳು ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ನಿರಂತರ ನಿಗಾ ವಹಿಸುವುದರ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು ಎಂದರು.

ಬೀದಿ ನಾಯಿಗಳನ್ನು ಹಿಡಿಯುವ ಹಾಗೂ ಅವುಗಳ ನಿರ್ವಹಣೆಯ ಎಲ್ಲಾ ಕ್ರಮಗಳನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತ ರೀತಿಯಲ್ಲಿ ಮಾಡಬೇಕು. ಸಾರ್ವಜನಿಕರು ಬೀದಿ ನಾಯಿಗಳಿಗೆ ಯಾವುದೇ ರೀತಿಯಲ್ಲಿ ಆಹಾರ ನೀಡಬಾರದು ಮತ್ತು ಸುಪ್ರೀಂಕೋರ್ಟ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಬೀದಿನಾಯಿಗಳಿಗೆ ಆಹಾರ ಹಾಕುವವರು ಹಾಗೂ ಮಟನ್ ಅಂಗಡಿಗಳ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ನಿಯಮ ಬಾಹಿರವಾಗಿ ವಿಲೇವಾರಿ ಮಾಡುವವರ ವಿರುದ್ಧ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಮಟನ್ ತ್ಯಾಜ್ಯ ಸಾಗಿಸುವ ವಾಹನಗಳ ಮೇಲೂ ನಿಯಮ ಉಲ್ಲಂಘನೆ ಕಂಡು ಬಂದರೆ ದಂಡಾನಾತ್ಮಕ ಕ್ರಮ ಜರುಗಿಸಲಾಗುವುದು.

-ಪೂವಿತಾ ಎಸ್.

ಜಿಲ್ಲಾಧಿಕಾರಿ ರಾಯಚೂರು

ಜಿಲ್ಲೆಯಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದ್ದು ಮಕ್ಕಳೇ ಟಾರ್ಗೆಟ್ ಆಗುತ್ತಿದ್ದಾರೆ. ಕಳೆದ ವರ್ಷ ನಗರದಲ್ಲಿ ನಡೆದ ಬೀದಿ ನಾಯಿಗಳ ದಾಳಿಗೆ ಒಳಗಾದ ಕುಟುಂಬಸ್ಥರ ಜೊತೆ ಹೋರಾಡಿ 10 ಕುಟುಂಬಗಳಿಗೆ ತಲಾ 5000 ರೂ. ಪರಿಹಾರ ಒದಗಿಸಲಾಗಿತ್ತು. ಈಗಲೂ ನಾಯಿಕಡಿತ ಪ್ರಕರಣ ವರದಿಯಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.

-ಮುಹಮ್ಮದ್ ಅತೀಕ್, ಮುಷ್ತಾಕ್ ಅಹ್ಮದ್

ಎಸ್‌ಡಿಪಿಐ ಜಿಲ್ಲಾ ಮುಖಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News