ಮೀಸಲಾತಿ ಹಠಾವೊ ಎನ್ನುವವರನ್ನು ಕೇಳಬೇಕಾದ ಕೆಲವು ಪ್ರಶ್ನೆಗಳು

Update: 2026-08-08 12:00 IST

ಮೀಸಲಾತಿಯನ್ನು ತೆಗೆದುಹಾಕುವ ಮೂಲಕ ದೇಶವನ್ನು ಉಳಿಸಲು ಸಾಧ್ಯವಿಲ್ಲ. ದೇಶವನ್ನು ಉಳಿಸುವುದು ನ್ಯಾಯವನ್ನು ವಿಸ್ತರಿಸುವುದರಿಂದ, ಅವಕಾಶಗಳನ್ನು ಸಮಾನವಾಗಿ ಹಂಚುವುದರಿಂದ, ಸಂಪನ್ಮೂಲಗಳ ನ್ಯಾಯಸಮ್ಮತ ಪ್ರವೇಶವನ್ನು ಖಾತರಿಪಡಿಸುವುದರಿಂದ ಮತ್ತು ಸಂವಿಧಾನದ ಆತ್ಮವನ್ನು ಬದುಕಿಸುವುದರಿಂದ. ಆದ್ದರಿಂದ ಇಂದಿನ ಅಗತ್ಯ ಮೀಸಲಾತಿ ಹಠಾವೊ ಎಂಬ ಘೋಷಣೆಯಲ್ಲ; ‘ಅಸಮಾನತೆ ಹಠಾವೊ-ಸಂವಿಧಾನ ಉಳಿಸೋಣ’ ಎಂಬ ಪ್ರಜ್ಞಾವಂತ ರಾಷ್ಟ್ರೀಯ ಸಂವಾದ.

ದೇಶದಲ್ಲಿ ಮತ್ತೆ ‘ಮೀಸಲಾತಿ ಹಠಾವೋ-ದೇಶ ಬಚಾವೊ’ ಎಂಬ ಘೋಷಣೆಗಳು ಕೇಳಿಬರುತ್ತಿವೆ. ಇದು ಹೊಸ ರಾಜಕೀಯ ಘೋಷಣೆಯಲ್ಲ; ಭಾರತದ ಸಾಮಾಜಿಕ ಇತಿಹಾಸದಲ್ಲಿ ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿರುವ ಒಂದು ಪ್ರವೃತ್ತಿ. ಆದರೆ ಈ ಬಾರಿ ಕೂಡ ನಮ್ಮ ಗಮನ ಘೋಷಣೆಯ ಮೇಲೆ ನಿಲ್ಲದೆ, ಅದರ ಹಿಂದಿರುವ ಪ್ರಶ್ನೆಗಳತ್ತ ಹರಿಯಬೇಕು.

ಪ್ರತಿಯೊಂದು ಸಮಾಜಕ್ಕೂ ತನ್ನದೇ ಆದ ‘ಸಾರ್ವಜನಿಕ ಚರ್ಚೆಯ ಕೇಂದ್ರ’ ಇರುತ್ತದೆ. ಆ ಚರ್ಚೆ ಯಾವ ವಿಷಯದ ಸುತ್ತ ತಿರುಗುತ್ತದೆ ಎಂಬುದೇ ಆ ಸಮಾಜದ ರಾಜಕೀಯ ಮತ್ತು ನೈತಿಕ ದಿಕ್ಕನ್ನು ನಿರ್ಧರಿಸುತ್ತದೆ. ಭಾರತದಲ್ಲಿ ನಿರುದ್ಯೋಗ, ಕೃಷಿ ಬಿಕ್ಕಟ್ಟು, ಶಿಕ್ಷಣದ ಅಸಮಾನತೆ, ಆರೋಗ್ಯ ವ್ಯವಸ್ಥೆಯ ದುರ್ಬಲತೆ, ಭೂಮಿಯ ಅಸಮಾನ ಹಂಚಿಕೆ, ಸಂಪತ್ತಿನ ಕೇಂದ್ರೀಕರಣ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣದಂತಹ ಪ್ರಶ್ನೆಗಳು ಹೆಚ್ಚು ಚರ್ಚೆಗೆ ಬರಬೇಕಾದವು. ಆದರೆ ಈ ಎಲ್ಲ ಪ್ರಶ್ನೆಗಳನ್ನು ಮರೆಮಾಚುವಂತೆ ಮತ್ತೆ ಮತ್ತೆ ಮೀಸಲಾತಿಯೇ ರಾಷ್ಟ್ರೀಯ ಚರ್ಚೆಯ ಕೇಂದ್ರವಾಗುತ್ತದೆ. ಇದು ಕೇವಲ ಕಾಕತಾಳೀಯವೇ? ಅಥವಾ ಸಾರ್ವಜನಿಕ ಸಂವಾದವನ್ನು ಬೇರೆ ದಿಕ್ಕಿಗೆ ತಿರುಗಿಸುವ ರಾಜಕೀಯ ತಂತ್ರವೇ? ಈ ಪ್ರಶ್ನೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಮೀಸಲಾತಿಯ ಬಗ್ಗೆ ನಡೆಯುವ ಬಹುತೇಕ ಚರ್ಚೆಗಳು ಒಂದು ಮೂಲಭೂತ ಸಂಗತಿಯನ್ನು ಮರೆತುಬಿಡುತ್ತವೆ. ಭಾರತೀಯ ಸಂವಿಧಾನವು ಮೀಸಲಾತಿಯನ್ನು ಬಡತನ ನಿರ್ಮೂಲನದ ಯೋಜನೆಯಾಗಿ ಕಲ್ಪಿಸಿಲ್ಲ. ಅದು ಐತಿಹಾಸಿಕವಾಗಿ ಶೋಷಿತ, ಅಸ್ಪಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರ ಅನುಭವಿಸಿದ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ‘ಸಾಮಾಜಿಕ ನ್ಯಾಯದ ಸಾಂವಿಧಾನಿಕ ಸಾಧನ’ವಾಗಿದೆ. ಸಂವಿಧಾನದ 14ನೇ ವಿಧಿ ಸಮಾನತೆಯನ್ನು ಘೋಷಿಸಿದರೆ, 15 ಮತ್ತು 16ನೇ ವಿಧಿಗಳು ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ವಿಶೇಷ ಕ್ರಮಗಳನ್ನು ಅನುಮತಿಸುತ್ತವೆ. 17ನೇ ವಿಧಿ ಅಸ್ಪಶ್ಯತೆಯನ್ನು ರದ್ದುಪಡಿಸುತ್ತದೆ; 46ನೇ ವಿಧಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ರಾಜ್ಯಕ್ಕೆ ನೀಡುತ್ತದೆ. ಆದ್ದರಿಂದ ಮೀಸಲಾತಿಯು ‘ವಿಶೇಷ ಸೌಲಭ್ಯ’ ಅಲ್ಲ; ಅದು ‘ಸಮಾನತೆಯನ್ನು ಸಾಧ್ಯವಾಗಿಸುವ ಸಾಧನ’.

ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದೊಂದಿಗೆ ಸೇರದಿದ್ದರೆ ಅದು ಅಪೂರ್ಣ ಎಂದು ಎಚ್ಚರಿಸಿದ್ದರು. ಕಾನೂನಿನ ಮುಂದೆ ಸಮಾನತೆ ಘೋಷಿಸುವುದಷ್ಟೇ ಸಾಕಾಗುವುದಿಲ್ಲ; ಸಮಾನ ಅವಕಾಶಗಳ ವಾಸ್ತವಿಕ ಪರಿಸ್ಥಿತಿಯನ್ನೂ ನಿರ್ಮಿಸಬೇಕಾಗುತ್ತದೆ. ಅದಕ್ಕಾಗಿಯೇ ಅವರು ಮೀಸಲಾತಿಯನ್ನು ಶಾಶ್ವತ ಹಕ್ಕಿನಂತೆ ಅಲ್ಲ, ಐತಿಹಾಸಿಕ ಅಸಮಾನತೆಗಳನ್ನು ಸರಿಪಡಿಸುವ ಪ್ರಜಾಸತ್ತಾತ್ಮಕ ಸಾಧನವಾಗಿ ಕಂಡರು.

ಮಹಾತ್ಮಾ ಜ್ಯೋತಿರಾವ್ ಫುಲೆ ಅವರು ಶಿಕ್ಷಣವನ್ನು ಸಾಮಾಜಿಕ ವಿಮೋಚನೆಯ ಅತ್ಯಂತ ಶಕ್ತಿಯುತ ಸಾಧನವೆಂದು ಪ್ರತಿಪಾದಿಸಿದರು. ಅವಕಾಶಗಳ ಮೇಲೆ ಕೆಲವೇ ವರ್ಗಗಳ ಏಕಸ್ವಾಮ್ಯ ಮುಂದುವರಿದರೆ ಪ್ರಜಾಪ್ರಭುತ್ವ ಕೇವಲ ಘೋಷಣೆಯಾಗಿ ಉಳಿಯುತ್ತದೆ ಎಂದು ಅವರು ತೋರಿಸಿದರು. ಡಾ. ರಾಮ ಮನೋಹರ ಲೋಹಿಯಾ ಅವರು ಜಾತಿ ಆಧಾರಿತ ಅಸಮಾನತೆಯನ್ನು ಭಾರತದ ಪ್ರಗತಿಗೆ ದೊಡ್ಡ ಅಡ್ಡಿಯೆಂದು ಗುರುತಿಸಿದ್ದರು. ಅವರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯವಿಲ್ಲದ ಆರ್ಥಿಕ ಅಭಿವೃದ್ಧಿ ಅಪೂರ್ಣ.

ಇಂದು ಮತ್ತೊಂದು ಪ್ರಶ್ನೆಯನ್ನೂ ಕೇಳಬೇಕಾಗಿದೆ. ಆರ್ಥಿಕವಾಗಿ ದುರ್ಬಲ ಸಾಮಾನ್ಯ ವರ್ಗಗಳಿಗೆ ಮೀಸಲಾತಿ ಜಾರಿಯಾದ ನಂತರವೂ ‘ಮೀಸಲಾತಿ ಸಂಪೂರ್ಣ ರದ್ದು’ ಎನ್ನುವ ಧ್ವನಿ ಏಕೆ ಮುಂದುವರಿಯುತ್ತದೆ? ಮೀಸಲಾತಿ ಶತಮಾನಗಳ ಕಾಲ ವಂಚಿತ ಸಮುದಾಯಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳಲ್ಲವೇ? ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡದೆ ನಡೆಯುವ ಯಾವುದೇ ಚರ್ಚೆ ಪೂರ್ಣವಾಗುವುದಿಲ್ಲ.

ಭಾರತದಲ್ಲಿ ಆಸ್ತಿ ಮತ್ತು ಸಂಪನ್ಮೂಲಗಳ ಹಂಚಿಕೆ ಕುರಿತು ಸಾರ್ವಜನಿಕ ಚರ್ಚೆ ಏಕೆ ಅಷ್ಟಾಗಿ ನಡೆಯುವುದಿಲ್ಲ? ಭೂಮಿ ಯಾರ ಬಳಿ ಇದೆ? ಕೈಗಾರಿಕೆಗಳ ಮಾಲಕತ್ವ ಯಾರ ಕೈಯಲ್ಲಿದೆ? ದೊಡ್ಡ ಶಿಕ್ಷಣ ಸಂಸ್ಥೆಗಳು, ಮಾಧ್ಯಮ, ಬಂಡವಾಳ, ಮಾರುಕಟ್ಟೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿಯಂತ್ರಣ ಯಾರ ಬಳಿ ಕೇಂದ್ರೀಕೃತವಾಗಿದೆ? ಈ ಪ್ರಶ್ನೆಗಳು ರಾಷ್ಟ್ರೀಯ ಚರ್ಚೆಯ ಕೇಂದ್ರವಾಗಬೇಕಲ್ಲವೇ? ಏಕೆಂದರೆ ಸಾಮಾಜಿಕ ಅಸಮಾನತೆ ಕೇವಲ ಸರಕಾರಿ ಉದ್ಯೋಗಗಳಲ್ಲಿ ಮಾತ್ರ ಕಾಣಿಸುವುದಿಲ್ಲ; ಅದು ಭೂಮಿ, ಬಂಡವಾಳ, ಶಿಕ್ಷಣ ಮತ್ತು ಸಾಮಾಜಿಕ ಅಧಿಕಾರದ ಎಲ್ಲ ಕ್ಷೇತ್ರಗಳಲ್ಲೂ ಗೋಚರಿಸುತ್ತದೆ.

ಈ ಹಿನ್ನೆಲೆಯಲ್ಲೇ ದಲಿತ ಸಮುದಾಯದ ಪ್ರತಿಕ್ರಿಯೆಯ ಬಗ್ಗೆಯೂ ಯೋಚಿಸಬೇಕಾಗಿದೆ. ಪ್ರತಿಯೊಂದು ಪ್ರಚೋದನಾತ್ಮಕ ಘೋಷಣೆಗೆ ಪ್ರತಿಕ್ರಿಯಿಸುವುದೇ ರಾಜಕೀಯ ಪ್ರಬುದ್ಧತೆಯ ಲಕ್ಷಣವಲ್ಲ. ಸಂವಿಧಾನ ನೀಡಿರುವ ಹಕ್ಕುಗಳನ್ನು ಆತ್ಮವಿಶ್ವಾಸದಿಂದ ಉಳಿಸಿಕೊಳ್ಳುವುದು, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಸಮಾಜವನ್ನು ಬಲಪಡಿಸುವುದು, ವೈಚಾರಿಕ ಸಂವಾದವನ್ನು ವಿಸ್ತರಿಸುವುದು ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳಲ್ಲಿ ಸಾಮಾಜಿಕ ನ್ಯಾಯದ ಪರ ನಿಲ್ಲುವುದು ಹೆಚ್ಚು ಪರಿಣಾಮಕಾರಿ. ಪ್ರತಿಯೊಂದು ಘೋಷಣೆಯ ಹಿಂದೆ ಓಡುವುದಕ್ಕಿಂತ ಸಮಾಜದ ಮುಂದೆ ಹೊಸ ಪ್ರಶ್ನೆಗಳನ್ನು ಇಡುವುದು ಹೆಚ್ಚು ಅರ್ಥಪೂರ್ಣ.

ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಮೀಸಲಾತಿಯನ್ನು ಪ್ರಶ್ನಿಸುವವರಿಗೂ ಇದೆ. ದಲಿತರು ಕೂಡ ಪ್ರಶ್ನಿಸಲೇಬೇಕು. ಭೂಮಿಯ ಹಂಚಿಕೆಯ ಬಗ್ಗೆ ನಿಮ್ಮ ನಿಲುವೇನು? ಸಂಪತ್ತಿನ ಕೇಂದ್ರೀಕರಣದ ಬಗ್ಗೆ ಏನು ಹೇಳುತ್ತೀರಿ? ಶಿಕ್ಷಣ ಮತ್ತು ಆರೋಗ್ಯದಲ್ಲಿನ ಅಸಮಾನತೆಗಳ ಬಗ್ಗೆ ನಿಮ್ಮ ಧ್ವನಿ ಎಲ್ಲಿದೆ? ಸಾಮಾಜಿಕ ನ್ಯಾಯವನ್ನು ಕೇವಲ ಮೀಸಲಾತಿಯ ಚೌಕಟ್ಟಿನೊಳಗೆ ಸೀಮಿತಗೊಳಿಸುವುದು ಸಮಸ್ಯೆಯ ನಿಜವಾದ ವ್ಯಾಪ್ತಿಯನ್ನು ಕುಗ್ಗಿಸುವಂತಾಗಿದೆ.

ಮೀಸಲಾತಿಯನ್ನು ತೆಗೆದುಹಾಕುವ ಮೂಲಕ ದೇಶವನ್ನು ಉಳಿಸಲು ಸಾಧ್ಯವಿಲ್ಲ. ದೇಶವನ್ನು ಉಳಿಸುವುದು ನ್ಯಾಯವನ್ನು ವಿಸ್ತರಿಸುವುದರಿಂದ, ಅವಕಾಶಗಳನ್ನು ಸಮಾನವಾಗಿ ಹಂಚುವುದರಿಂದ, ಸಂಪನ್ಮೂಲಗಳ ನ್ಯಾಯಸಮ್ಮತ ಪ್ರವೇಶವನ್ನು ಖಾತರಿಪಡಿಸುವುದರಿಂದ ಮತ್ತು ಸಂವಿಧಾನದ ಆತ್ಮವನ್ನು ಬದುಕಿಸುವುದರಿಂದ. ಆದ್ದರಿಂದ ಇಂದಿನ ಅಗತ್ಯ ಮೀಸಲಾತಿ ಹಠಾವೊ ಎಂಬ ಘೋಷಣೆಯಲ್ಲ; ‘ಅಸಮಾನತೆ ಹಠಾವೊ-ಸಂವಿಧಾನ ಉಳಿಸೋಣ’ ಎಂಬ ಪ್ರಜ್ಞಾವಂತ ರಾಷ್ಟ್ರೀಯ ಸಂವಾದ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ.ಶ್ರೀನಿವಾಸ ಡಿ. ಮಣಗಳ್ಳಿ

contributor

Similar News