×
Ad

ಚೊಕ್ಕಾಡಿ ಎಂಬ ಕಾಲವೃಕ್ಷ

ಇಂದು ಸುಬ್ರಾಯ ಚೊಕ್ಕಾಡಿಯವರಿಗೆ ಶಿವಮೊಗ್ಗದ ಕನ್ನಡ ಸಂಘದಿಂದ ಜೀವಮಾನ ಸಾಧನೆಯ ಗೌರವ

Update: 2026-05-15 12:13 IST

ಕವಿ ಸುಬ್ರಾಯ ಚೊಕ್ಕಾಡಿಯವರು ನಮ್ಮ ಸಂಪ್ರದಾಯ ಪ್ರಕಾರ ಸಹಸ್ರ ಚಂದ್ರ ದರ್ಶನ ಮಾಡಿದ್ದಾರೆ. ೮೦ ದಾಟಿದಾಗ ಈ ಲೆಕ್ಕ. ಸಹಸ್ರ ಚಂದ್ರ ಅಂದರೆ ಸಹಸ್ರ ಅಮವಾಸ್ಯೆ, ಹುಣ್ಣಿಮೆ ಹಾಗೂ ಹತ್ತಾರು ಗ್ರಹಣಗಳನ್ನು ಕಂಡಿರುವುದು ಎಂದರ್ಥ.

ಕಳೆದ ಆರು ದಶಕಗಳಲ್ಲಿ ಚೊಕ್ಕಾಡಿ, ಕನ್ನಡದ, ಕರುನಾಡಿನ, ದೇಶದ ಹುಣ್ಣಿಮೆ, ಅಮವಾಸ್ಯೆ, ಗ್ರಹಣಗಳಿಗೆ ಸಾಕ್ಷಿಯಾಗಿದ್ದಾರೆ!

ಚೊಕ್ಕಾಡಿ ಮುಖ್ಯವಾಗುವುದು ಕಾಲಕಾಲದ ಒತ್ತಡಗಳನ್ನು ಅವರು ಗ್ರಹಿಸಿದ ರೀತಿಗೆ. ಮರದ ತಿರುಳಲ್ಲಿ ಒಂದೊಂದು ವೃತ್ತವೂ ಆಯಾ ವರ್ಷದ ಋತು ಸಂಭವಗಳನ್ನು ದಾಖಲಿಸುತ್ತದಂತೆ.; ಮಳೆ, ಬರಗಾಲ ಹೀಗೆ. ಅದು ಮಳೆ ಗಾಳಿ ಚಳಿಗೆ ಒಡ್ಡಿ ನಿಲ್ಲುವ ಬಗೆ ಒಂದು ರೂಪಕವಷ್ಟೆ. ಚೊಕ್ಕಾಡಿ ಅಂಥಾ ಒಂದು ಸಾರಸ್ವತ ಲೋಕದ ರೂಪಕ.

ವೈಯಕ್ತಿಕವಾಗಿ ಅವರು ಅನುಭವಿಸಿದ ಬಡತನ, ಶಿಕ್ಷಣ ಮೊಟಕುಗೊಳಿಸಿ ಪ್ರೈಮರಿ ಶಾಲೆಯ ಮಾಸ್ತರಾಗಿ ದುಡಿದ ಬಗೆ ಎಲ್ಲರಿಗೂ ಗೊತ್ತು. ಆದರೆ ಒಂದು ಗ್ರಾಮದಲ್ಲಿದ್ದೂ ಹೊಸ ವಿಚಾರಗಳಿಗೆ, ಲೋಕದ ನಡೆಗಳಿಗೆ ಸ್ಪಂದಿಸುತ್ತಾ, ಅವುಗಳನ್ನು ಗ್ರಹಿಸುತ್ತಾ ಚೊಕ್ಕಾಡಿ ರಿಜಿಸ್ಟರ್ ಮಾಡಿದ ಬಗೆ ಕುತೂಹಲಕಾರಿ.

ಒಂದರೆಡು ಕಾವ್ಯದ ಉದಾಹರಣೆ ಕೊಡುವೆ.

ಭಾರತದ ನಕ್ಸಲ್ ಕ್ರಾಂತಿಕಾರಿ ಚಾರೂ ಮಜುಂದಾರ್ ಬಗ್ಗೆ ಚೊಕ್ಕಾಡಿ ಬರೆದ ಕವನ ಇಂದಿಗೂ haunting. ಜನ ಮಾತಾಡುವ ದೇಶಾವರಿ ಮಾತುಗಳಲ್ಲೇ ಕವನ ಕಟ್ಟುತ್ತಾ ಚೊಕ್ಕಾಡಿಯವರು,

‘‘ಇವ್ರ ಹೋರಾಟಾನೂ ಸರಿ

ಹಾಗಂತ

ಚಾರು ಸತ್ತ ಅಂತ ಯಾರ್ಸಾಯ್ತಾರೆ ಹೇಳಿ..’’

ಎಂದು ಕವನ ಮುಗಿಸುತ್ತಾರೆ. ಚಾರೂ ಬಗ್ಗೆ ಕನ್ನಡದಲ್ಲಿ ಬಂದ ಏಕೈಕ ಕವನ ಇದು ಇರಬೇಕು. ಹಾಗೆಯೇ ಸಿಕ್ಕಿಂ ಒಂದು ಸ್ವತಂತ್ರ ರಾಷ್ಟ್ರವಾಗಿತ್ತು. ಆನಂತರ ಇಂದಿರಾ ಕಾಲದಲ್ಲಿ ಅದು ಭಾರತದೊಂದಿಗೆ ‘ವಿಲೀನ’ವಾಯಿತು. ಅತ್ತ ಚೀನಾ, ಇತ್ತ ಭಾರತದ ನಡುವೆ ಇದ್ದ ದೇಶ ಈಗ ನಮ್ಮ ದೇಶದ ಒಂದು ರಾಜ್ಯವಾಗಿದೆ. ಈ ವಿಲೀನ ಚೊಕ್ಕಾಡಿ ತಮ್ಮ ‘ಸಿಕ್ಕಿಂ’ ಎಂಬ ಕವನದಲ್ಲಿ,

‘‘ನಿನಗೆ ನಿನ್ನದೇ ಮನೆ ಬೇಡವಾಯಿತೇ ಸಿಕ್ಕಿಂ?’’ ಎಂದು ಬರೆಯುತ್ತಾರೆ.

ಜನಪ್ರಿಯ ದೇಶಭಕ್ತಿಯ ಉಭ್ರಮೆಯಲ್ಲೂ ಒಂದು dissentನ ಒಳನೋಟ ಈ ಕವನದಲ್ಲಿದೆ. ಸಿಕ್ಕಿಂ ಬಗ್ಗೆ ಬಂದ ಏಕಮಾತ್ರಾ ಕವನ ಇದು. ಚೊಕ್ಕಾಡಿಯವರಲ್ಲಿ ವ್ಯಕ್ತವಾಗುವ ರಾಜಕೀಯ ಪ್ರಜ್ಞೆಯ ಸೂಕ್ಷ್ಮ ಹರಹಿನ ಉದಾಹರಣೆ ಇವು.

ಅವರು ಕವಿತೆಯ ಬಗ್ಗೆಯೇ ಬರೆದ ಕವನವೊಂದರಲ್ಲಿ,

‘‘ನನ್ನ ಕವಿತೆಗೆ ರೆಕ್ಕೆಗಳಿಲ್ಲ ಪ್ರಪಂಚ ಸುತ್ತುವುದಕ್ಕೆ’’ ಎಂದು ಆರಂಭವಾಗಿ,

‘‘ನನ್ನ ಮುದ್ದಿನ ಕವಿತೆ

ವ್ಯಂಗ್ಯ ಚಿತ್ರದ ಹಾಗೆ ನೀನು

ಬೆಳೆದ ತಲೆ ಕಡ್ಡಿ ಕೈಕಾಲು..’’ ಎಂಬಲ್ಲಿಗೆ ತಲುಪುತ್ತದೆ.

ಈ ಕನ್ನಡಿಯಾಗುವ ವ್ಯಂಗ್ಯವೇ ಅವರು ಕನ್ನಡ ಕಾವ್ಯವನ್ನು ನೋಡುವ ಬಗೆಗೆ ಉದಾಹರಣೆ. ೭೦ರ ದಶಕದಲ್ಲಿ ಅವರು ಬರೆದ ಕವನವೊಂದು ಬೆಂಗಳೂರು ಮತ್ತು ಅಲ್ಲಿನ ಸಾಂಸ್ಕೃತಿಕ ವೈಯಾರವನ್ನು ವ್ಯಂಗ್ಯವಾಡುತ್ತದೆ.

‘‘ದಿನದಿನವೂ ಸಂಜೆ ಕವಿಗಳ ಕೋಲು ನಡಿಗೆ ಕವಾತು, ಆರ್ತ ಸ್ವರ

ಜೀಯಾ ನನಗೊಂದು ಬಹುಮಾನ ದಯಪಾಲಿಸಿ’’ ಎಂಬ ಸಾಲುಗಳಿವೆ ಈ ಕವನದಲ್ಲಿ.

ಈಗೇನು ಆಗಲೂ ಇಷ್ಟೇ.!

ನವ್ಯದ ಅಬ್ಬರದ ಕಾಲದ ವ್ಯರ್ಥ ವಾಗಾಡಂಬರ, ಹುಸಿ ಅನಾಥಪ್ರಜ್ಞೆಯ ಅಲವತ್ತುಕೊಳ್ಳುವಿಕೆಯಲ್ಲಿ ದಿಕ್ಕೆಟ್ಟಂತಾಗಿದ್ದ ಚೊಕ್ಕಾಡಿ ತದನಂತರ ಹಕ್ಕಿ, ಮರ ಹೀಗೆ ತನ್ನ ಸುತ್ತಲಿನ ಬದುಕಿನ ಗ್ರಹಿಕೆಯತ್ತ ವಾಲಿದರು. ಇಲ್ಲೂ ಒಂದು ತೊಡಕಿದೆ. ಹಕ್ಕಿ, ಮರ ಕೂಡಾ ಚೊಕ್ಕಾಡಿಗೆ ಒಂದು ರೂಪಕವೋ, ಪ್ರತಿಮೆಯೋ ಆಗಿ ಗೋಚರಿಸುತ್ತದೆ. ಕವಿಯ ಮನೋಧರ್ಮದ ನೋಟ ಅದು.

ಚೊಕ್ಕಾಡಿಯವರ ವಿಮರ್ಶೆಗಳನ್ನು ನಾವಷ್ಟು ಗಮನಿಸಿಲ್ಲ. ಆದರೆ ಅವರು ಎ.ಕೆ. ರಾಮಾನುಜನ್ ಅವರ ಕಾವ್ಯದ ಬಗ್ಗೆ ಬರೆದಿದ್ದು ಇಂದಿಗೂ ಹೊಸ ಕಾವ್ಯವೊಂದನ್ನು ಅರಿವ ಪ್ರಯತ್ನದ ಪಠ್ಯದಂತಿದೆ. ಹಾಗೆಯೇ ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯಲ್ಲಿ ಅವರ ಟಿಪ್ಪಣಿ ಸ್ಥಿತ್ಯಂತರ ಸಮಾಜದ ತಲ್ಲಣಗಳನ್ನು ಕುರಿತ ಬಹುಮುಖ್ಯ ವ್ಯಾಖ್ಯೆ. ಅದಕ್ಕಿಂತ ಹೆಚ್ಚಾಗಿ ತಾನು ಬರೆಯುತ್ತಿರುವ ಕೃತಿಯನ್ನು ವಿವರವಾಗಿ ವಿಶ್ಲೇಷಿಸುವಾಗಲೂ, ಅವರಿಗಿರುವ ಎಚ್ಚರ ಗಮನಾರ್ಹ.

‘ಇದು ಲೇಖಕರ ಮುಖ್ಯ ಕೃತಿ ಎನ್ನಿಸಲ್ಲ,’ ಎಂದು ಚೊಕ್ಕಾಡಿ ಹೇಳಬಲ್ಲರು. ಒಂದು ಗಮನಾರ್ಹ ಕೃತಿ ಶ್ರೇಷ್ಠ ಅಲ್ಲದಿದ್ದಾಗಲೂ ತನ್ನ ಊನ ಸ್ಥಿತಿಯಲ್ಲೂ ಸಾಂಸ್ಕೃತಿಕವಾಗಿ ಹೇಗೆ ಮುಖ್ಯವಾಗುತ್ತದೆ ಎಂದು ಚೊಕ್ಕಾಡಿ ಹಲವು ಕೃತಿಗಳ ವಿಶ್ಲೇಷಣೆಯಲ್ಲಿ ಹೇಳುತ್ತಾರೆ. ನಾವು ಸಾಹಿತ್ಯ ಚರಿತ್ರೆಯ ಚರ್ಚೆಯಲ್ಲಿ ಗಮನಿಸಬೇಕಾದ ಅಪೂರ್ವ ಸಂಗತಿ ಇದು.

ಈಗ ೮೬ರ ವಯಸ್ಸಲ್ಲೂ ಚೊಕ್ಕಾಡಿ ಹಳಹಳಿಕೆ ತೋರುತ್ತಿಲ್ಲ. ಸಾವಿನ ಬಗ್ಗೆ ಭೀತಿ ಹೊಂದಿಲ್ಲ. ತನಗೆಟುಕದ ಕಾಲದ ನುಡಿಗಟ್ಟು ಬಗ್ಗೆ ಅವರಿಗೆ ಖೇದವಿಲ್ಲ. ಹಿರಿತನದ ಸುಳ್ಳೇ ಮುಚ್ಚಟೆಯನ್ನು ಅವರು ನಿವಾಳಿಸಬಲ್ಲರು. ಜಡವಾಗದೇ ಬಾಳುವ, ಸ್ಪಂದಿಸುವ ರೀತಿ ಹೇಗೆ ಎಂಬುದಕ್ಕೆ ಸಂವೇದನೆಯ ಸೂಕ್ಷ್ಮವನ್ನು ಸದಾ ಕಾಪಿಟ್ಟುಕೊಂಡಿರುವ ಚೊಕ್ಕಾಡಿಯೇ ನಮ್ಮೆದುರು ಇರುವ ಮಾದರಿ..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಕೆ.ಪಿ. ಸುರೇಶ

contributor

Similar News