ರಾಯಚೂರು | ಯಲಗಟ್ಟ, ಪಲಕನಮರಡಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಮನವಿ
ರಾಯಚೂರು : ಸಿ.ಎಸ್.ಆರ್. ಅನುದಾನದಡಿ ಯಲಗಟ್ಟ, ಪಲಕನಮರಡಿ ಗ್ರಾಮಗಳಲ್ಲಿ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದಗಣಿ ರೋಡಲಬಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಗಟ್ಟ ಗ್ರಾಮದಲ್ಲಿ ಊಟಿ ಚಿನ್ನದ ಗಣಿಯಿಂದ ಹಟ್ಟಿ ಚಿನ್ನದ ಗಣಿಗೆ ಕಚ್ಚಾ ಅಧಿರು ಸಾಗಾಟ ಮಾಡುವ ಲಾರಿಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸ್ಥಳೀಯರು ತಕ್ಷಣವೇ ರಸ್ತೆಗಳನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿದರು.
ಅರಕೇರಾ ತಾಲ್ಲೂಕಿನ ಊಟಿ ಚಿನ್ನದಗಣಿ ವ್ಯಾಪ್ತಿಯ ಪಲಕನಮರಡಿ ಗ್ರಾಮದಲ್ಲಿ ಶೈಕ್ಷಣಿಕ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿರುವುದರಿಂದ, ಸಿ.ಎಸ್.ಆರ್. ಅನುದಾನದಡಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕಾಮಗಾರಿಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಸರಕಾರಿ ಪ್ರೌಢಶಾಲೆ (ಆರ್.ಎಮ್.ಎಸ್.ಎ) ಕಳೆದ ಐದು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಪ್ರಸ್ತುತ 526 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಕಟ್ಟಡವಿಲ್ಲದ ಕಾರಣ ಪ್ರಾಥಮಿಕ ಶಾಲಾ ಪ್ರಾಂಗಣದಲ್ಲಿ ತರಗತಿಗಳು ನಡೆಯುತ್ತಿವೆ. ಮಳೆಗಾಲದಲ್ಲಿ ಮಕ್ಕಳಿಗೆ ಸವಾಲು ಎದುರಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಶಾಲಾ ಕಟ್ಟಡವನ್ನು ಹಾಗೂ ಸರಕಾರಿ ಪ್ರಾಥಮಿಕ ಶಾಲೆಗೆ ಸರಿಯಾದ ರಸ್ತೆ ಸಂಪರ್ಕ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ತಕ್ಷಣ ಸಿ.ಎಸ್.ಆರ್. ಅನುದಾನದಲ್ಲಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಯಲಗಟ್ಟಾ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳನ್ನು ವಿಸ್ತರಿಸಿ ಒದಗಿಸಬೇಕು. ಜೊತೆಗೆ ವಿಜ್ಞಾನ ಶಿಕ್ಷಣಕ್ಕಾಗಿ ಪ್ರಯೋಗಾಲಯವನ್ನು ನಿರ್ಮಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಪ್ರದಾನ ಕಾರ್ಯದರ್ಶಿ. ಕಾಂ ನರಸಣ್ಣ ನಾಯಕ, ಜಿಲ್ಲಾ ಉಪಾಧ್ಯಕ್ಷ ಹನುಮಂತ ಪಲಕನಮರಡಿ, ಜಿಲ್ಲಾ ಮುಖಂಡರಾದ ಕಾಂ ನಿಂಗಪ್ಪ ಎಂ ವೀರಾಪೂರು, ಯಲಗಟ್ಟಾ ಗ್ರಾಮದ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ನಾಗಪ್ಪ, ಪ್ರದಾನ ಕಾರ್ಯದರ್ಶಿ ಅಂಬಣ್ಣ ಮಾಲಿ ಪಾಟೀಲ, ಅಲೆಸಾಬ, ಬೀಮೇಶ ಇನ್ನಿತರರು ಇದ್ದರು.