ರಾಯಚೂರು: ನೆಟ್ವರ್ಕ್ ಸಮಸ್ಯೆ; ಎಸ್ಐಆರ್ ದಾಖಲಿಸಲು ಬೆಟ್ಟ ಏರಿದ ಬಿಎಲ್ಒ
ಲಿಂಗಸುಗೂರು, ಜು.9: ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಎಸ್ಐಆರ್ ದಾಖಲಿಸಲು ನಿಯೋಜನೆಗೊಂಡಿದ್ದ ಸಿಬ್ಬಂದಿ ಬೆಟ್ಟ ಏರಿ ಮಾಹಿತಿ ಅಪ್ಲೋಡ್ ಮಾಡಿದ ಘಟನೆ ಲಿಂಗಸುಗೂರು ತಾಲೂಕಿನ ಗೋಲ್ಪಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಸೂಗೂರ ದೊಡ್ಡಿಯಲ್ಲಿ ಮನೆ ಮನೆಗೆ ತೆರಳಿ ಎಸ್ಐಆರ್ ದಾಖಲಿಸುವ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿ ದೇವಮ್ಮ ಹಾಗೂ ರಾಧಾ ಗೌಡಪ್ಪ ಅವರಿಗೆ ಮೊಬೈಲ್ ಆ್ಯಪ್ನಲ್ಲಿ ಮಾಹಿತಿ ದಾಖಲಿಸಿ ಅಪ್ಲೋಡ್ ಮಾಡಲು ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಗ್ರಾಮದ ಸುತ್ತಮುತ್ತ ಮೊಬೈಲ್ ಸಂಪರ್ಕ ಲಭ್ಯವಾಗದ ಹಿನ್ನೆಲೆಯಲ್ಲಿ ಹಲವು ಬಾರಿ ಪ್ರಯತ್ನಿಸಿದರೂ ಮಾಹಿತಿ ಅಪ್ಲೋಡ್ ಮಾಡಲು ಸಾಧ್ಯವಾಗಿಲ್ಲ. ಕೊನೆಗೆ ಗ್ರಾಮದ ಸಮೀಪದ ಬೆಟ್ಟ ಏರಿ ನೆಟ್ವರ್ಕ್ ಸಂಪರ್ಕ ಪಡೆದು ಎಸ್ಐಆರ್ ಮಾಹಿತಿಯನ್ನು ದಾಖಲಿಸಿದ್ದಾರೆ.
"ಆನ್ಲೈನ್ ವ್ಯವಸ್ಥೆ ಜಾರಿಗೆ ತಂದರೂ ಸಮರ್ಪಕ ನೆಟ್ವರ್ಕ್ ವ್ಯವಸ್ಥೆ ಇಲ್ಲ. ನೆಟ್ವರ್ಕ್ಗಾಗಿ ಬೆಟ್ಟ ಹತ್ತಬೇಕಾದ ಪರಿಸ್ಥಿತಿ ಬಂದಿದೆ" ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದೆ. ಆದರೆ ನಮ್ಮ ಗ್ರಾಮದಲ್ಲಿ ಒಂದು ದಾಖಲೆ ಮಾಡಲು ಸಹ ನೆಟ್ವರ್ಕ್ ಹುಡುಕಿಕೊಂಡು ಬೆಟ್ಟ ಹತ್ತಬೇಕಾಗಿದೆ. ತಕ್ಷಣ ಮೊಬೈಲ್ ಟವರ್ ಅಥವಾ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು" ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.