Raichur | ಬೆಳೆ ಸಮೀಕ್ಷೆದಾರರ ಹುದ್ದೆ ಖಾಯಂಗೊಳಿಸಲು ಒತ್ತಾಯಿಸಿ ಪ್ರತಿಭಟನೆ

Update: 2026-08-18 20:37 IST

ರಾಯಚೂರು: ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆ, ಜೀವವಿಮೆ ಹಾಗೂ ಹುದ್ದೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದ ನೂತನ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಂದಾಯ ಹಾಗೂ ಕೃಷಿ ಇಲಾಖೆಗಳ ಅಧೀನದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಿ.ಆರ್. (ಖಾಸಗಿ ನಿವಾಸಿ) ಬೆಳೆ ಸಮೀಕ್ಷೆದಾರರು ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಸೇರಿದಂತೆ ಮೂರು ಋತುಗಳಲ್ಲೂ ಸಮೀಕ್ಷೆ ನಡೆಸುತ್ತಿದ್ದಾರೆ. ಆದರೆ, ಕಾರ್ಯದ ವೇಳೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರದಿಂದ ಅಗತ್ಯ ಸೌಲಭ್ಯ ಹಾಗೂ ಭದ್ರತೆ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಈ ಹಿಂದೆ ಸರ್ವೆ ನಂಬರ್ ಆಧಾರದಲ್ಲಿ ನಡೆಯುತ್ತಿದ್ದ ಬೆಳೆ ಸಮೀಕ್ಷೆ ಇದೀಗ ಹಿಸ್ಸಾವಾರು ಮಾದರಿಯಲ್ಲಿ ನಡೆಯುತ್ತಿದ್ದು, ಪ್ರತಿ ಪ್ಲಾಟ್‌ಗೆ ಕೇವಲ 11 ರೂ. ಗೌರವಧನ ನೀಡಲಾಗುತ್ತಿದೆ. ಪ್ರಯಾಣ ಭತ್ಯೆ, ಪೆಟ್ರೋಲ್ ಭತ್ಯೆ ಸೇರಿದಂತೆ ಯಾವುದೇ ಹೆಚ್ಚುವರಿ ಸೌಲಭ್ಯ ನೀಡದೆ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.

ಮಳೆಗಾಲದಲ್ಲಿ ಕೆಸರು, ಹಳ್ಳ-ಗುಂಡಿಗಳು ಹಾಗೂ ನೀರು ತುಂಬಿದ ಪ್ರದೇಶಗಳನ್ನು ದಾಟಿ ಜಮೀನುಗಳಿಗೆ ತೆರಳಿ ಸಮೀಕ್ಷೆ ನಡೆಸಬೇಕಿದೆ. ಭತ್ತ, ಹತ್ತಿ, ಜೋಳ, ತೊಗರಿ ಸೇರಿದಂತೆ ಎತ್ತರವಾಗಿ ಬೆಳೆದ ಬೆಳೆಗಳ ನಡುವೆ ಸಂಚರಿಸುವಾಗ ಹಾವು, ಚೇಳು ಹಾಗೂ ಇತರ ವಿಷಕಾರಿ ಜೀವಿಗಳಿಂದ ಅಪಾಯ ಎದುರಾಗುವ ಸಾಧ್ಯತೆಯಿದೆ. ಕೆಲವೆಡೆ ಕಾಡುಪ್ರಾಣಿಗಳ ಭೀತಿಯ ನಡುವೆಯೂ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಸ್ವಂತ ವಾಹನಗಳಲ್ಲಿ ಸಂಚರಿಸಿ ಸಮೀಕ್ಷೆ ನಡೆಸಿದರೂ ಪೆಟ್ರೋಲ್ ಅಥವಾ ಪ್ರಯಾಣ ಭತ್ಯೆ ನೀಡುತ್ತಿಲ್ಲ. ಮರು ಸಮೀಕ್ಷೆ ಸೇರಿದಂತೆ ಹೆಚ್ಚುವರಿ ಕೆಲಸಗಳನ್ನು ವೇತನವಿಲ್ಲದೆ ಮಾಡಿಸಿಕೊಳ್ಳಲಾಗುತ್ತಿದೆ. ಕರ್ತವ್ಯದ ವೇಳೆ ಅಪಘಾತ ಸಂಭವಿಸಿದರೆ ಚಿಕಿತ್ಸಾ ವೆಚ್ಚ, ವೈದ್ಯಕೀಯ ನೆರವು ಅಥವಾ ಪರಿಹಾರ ದೊರೆಯದ ಕಾರಣ ಸಮೀಕ್ಷೆದಾರರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕರ್ತವ್ಯದ ವೇಳೆ ಅಪಘಾತದಿಂದ ಅಂಗವೈಕಲ್ಯ ಉಂಟಾದರೆ ಕುಟುಂಬದ ಭವಿಷ್ಯವೇ ಅತಂತ್ರವಾಗುವ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರ ಕೂಡಲೇ ಬೆಳೆ ಸಮೀಕ್ಷೆದಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೇವಾ ಭದ್ರತೆ, ಜೀವವಿಮೆ ಹಾಗೂ ಹುದ್ದೆ ಖಾಯಂಗೊಳಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕುಮಾರ, ಜಿಲ್ಲಾ ಉಪಾಧ್ಯಕ್ಷ ಖಾಜಾಸನ್, ಗೌರವ ಅಧ್ಯಕ್ಷ ಸಂಗಪ್ಪ ದಾಸವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರೇಶ ಮಸ್ಕಿ, ಆರ್.ಜಿ. ದೇವದುರ್ಗ, ನಾಗರಾಜ ಪಾಟೀಲ ಸಿರವಾರ, ತಿಮಣ್ಣ ಮರಾಠ ರಾಯಚೂರು, ರವಿ ಸಾಗರ ಮಸ್ಕಿ, ಮಂಜುನಾಥ ಸಿಂಧನೂರು, ಚಂದ್ರೇಶ ಲಿಂಗಸುಗೂರು, ಶಿವಣ್ಣ ಮಾನ್ವಿ, ಬಸಲಿಂಗಪ್ಪ ಮಸ್ಕಿ, ಅಮರೇಶ ಪಾಟೀಲ ಟಿ.ಆರ್. ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News