×
Ad

Raichur | ನನ್ನ ಮತ ನನ್ನ ಹಕ್ಕು ಸಂಘಟನೆಯಿಂದ ಎಸ್‌ಐಆರ್ ಜನಜಾಗೃತಿ ಅಭಿಯಾನ

ಮತದಾನದ ಹಕ್ಕು ಕಸಿಯಲು ಅವಕಾಶ ನೀಡಬಾರದು : ಅಜೀಜ್ ಜಾಗೀರ್ದಾರ್

Update: 2026-06-25 18:36 IST

ರಾಯಚೂರು : ʼನಮ್ಮ ಮತ, ನಮ್ಮ ಹಕ್ಕುʼ ಸಂಘಟನೆಯ ವತಿಯಿಂದ ತಾಲೂಕಿನ ಯೆರಗೇರಾ ಗ್ರಾಮದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಸಂಚಾಲಕ ಅಜೀಜ್ ಜಾಗೀರ್ದಾರ್, ಎಸ್‌ಐಆರ್ ಪ್ರಕ್ರಿಯೆಯನ್ನು ಸಮರ್ಪಕ ಜಾಗೃತಿ ಇಲ್ಲದೆ ಜಾರಿಗೊಳಿಸುವ ಮೂಲಕ ಬಡವರು, ಕಾರ್ಮಿಕರು, ರೈತರು, ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕನ್ನು ಕಸಿಯುವ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಆರೋಪಿಸಿದರು.

ಇಷ್ಟು ವರ್ಷಗಳಿಂದ ಚುನಾವಣಾ ಆಯೋಗವೇ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾ ಬಂದಿದ್ದು, ಇದೀಗ ತನ್ನ ಜವಾಬ್ದಾರಿಯನ್ನು ಮತದಾರರ ಮೇಲೆ ಹಾಕುವ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ಮತದಾರನನ್ನೂ ಅನುಮಾನದಿಂದ ನೋಡುವ ಮನೋಭಾವದಿಂದ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅಗತ್ಯ ದಾಖಲೆಗಳು ಯಾವುವು, 2002ರ ಮತದಾರರ ಪಟ್ಟಿಯೊಂದಿಗೆ ಹೇಗೆ ಮ್ಯಾಪಿಂಗ್ ಮಾಡಬೇಕು, ಹೆಸರು ಸೇರ್ಪಡೆ ಅಥವಾ ತಿದ್ದುಪಡಿ ಹೇಗೆ ಮಾಡಬೇಕು ಎಂಬ ಕುರಿತು ಜನತೆಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಅವರು ದೂರಿದರು.

ಚುನಾವಣಾ ಆಯೋಗ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಎಸ್‌ಐಆರ್ ಕುರಿತು ವ್ಯಾಪಕ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಕೇವಲ ಸಭೆಗಳನ್ನು ನಡೆಸಿ ಕರ್ತವ್ಯ ಮುಗಿದಂತಾಗಿದೆ ಎಂಬ ಭಾವನೆ ಅಧಿಕಾರಿಗಳಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಕಾರ್ಮಿಕ ವರ್ಗದಲ್ಲಿ ಹಾಗೂ ನಿರಕ್ಷರ ಮತದಾರರಲ್ಲಿ ಈ ಪ್ರಕ್ರಿಯೆಯ ಕುರಿತು ಇನ್ನೂ ಗೊಂದಲವಿದೆ ಎಂದು ಹೇಳಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಟ್ಟಿರುವ ಘಟನೆಗಳು ವರದಿಯಾಗಿವೆ. ಇದೇ ರೀತಿಯ ಪರಿಸ್ಥಿತಿ ಕರ್ನಾಟಕದಲ್ಲಿಯೂ ಉಂಟಾದರೆ ಅದು ಪ್ರಜಾಪ್ರಭುತ್ವದ ಮೇಲೆ ನೇರ ದಾಳಿಯಾಗಲಿದೆ ಎಂದು ಎಚ್ಚರಿಸಿದರು.

ಮತದಾನದ ಹಕ್ಕು ಕೇವಲ ಒಂದು ಹಕ್ಕಲ್ಲ; ಅದು ಸಂವಿಧಾನ ನೀಡಿರುವ ಪ್ರಜೆಗಳ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಅದನ್ನು ಆಡಳಿತಾತ್ಮಕ ಪ್ರಕ್ರಿಯೆಗಳ ಹೆಸರಿನಲ್ಲಿ ಕಸಿಯಲು ಯಾರಿಗೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಜಿಲ್ಲಾಡಳಿತ ಕೂಡಲೇ ಜಿಲ್ಲೆಯ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸ್ಪಷ್ಟ ಸೂಚನೆ ನೀಡಿ, ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿದಿದೆಯೇ ಎಂಬುದನ್ನು ಖಚಿತಪಡಿಸಬೇಕು. ಯಾವುದೇ ಮತದಾರರ ಹೆಸರು ಕೈಬಿಟ್ಟರೆ ಅದರ ಸಂಪೂರ್ಣ ಹೊಣೆ ಚುನಾವಣಾ ಆಯೋಗ ಮತ್ತು ಸಂಬಂಧಿಸಿದ ಅಧಿಕಾರಿಗಳದ್ದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಸರ್ಕಾರ ಹಾಗೂ ಚುನಾವಣಾ ಆಯೋಗ ತಕ್ಷಣ ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಘಟನೆಯು ಆಗ್ರಹಿಸಿತು.

ಈ ಸಂದರ್ಭದಲ್ಲಿ ಜಿಲಾನಿ ಯರಿಗೇರಾ, ಜಗದೀಶ್, ಚಾಂದ್ ಪಾಷ, ಎಂ ಡಿ ಹನೀಫ್, ಟಾಕಿ ಅಹ್ಮದ್, ಮುಹಮ್ಮದ್‌ ಸಾಬ್, ಇಸ್ಮಾಯಿಲ್, ಇಕ್ಬಾಲ್ ಹುಸೇನ್, ಮುಜೀಬ್, ಮೊನುದ್ದೀನ್, ಸಂಶುದ್ದೀನ್ ಚೌದ್ರಿ, ರಶೀದ್ ಸಾಬ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News