"ಎಲ್ಲರನ್ನೂ ಭೇಟಿಯಾಗುತ್ತೇವೆ, ಇದು ಸಂಪ್ರದಾಯವಷ್ಟೇ": ಏಷ್ಯಾ ಕಪ್ ಫೈನಲ್ ಬಳಿಕ ಮೊಹ್ಸಿನ್ ನಖ್ವಿ ಭೇಟಿ ಬಗ್ಗೆ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯೆ
ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಭಾರತ ಮಹಿಳಾ ತಂಡ: ನಿರ್ಧಾರವನ್ನು ಸಮರ್ಥಿಸಿದ BCCI
BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ Photo: PTI
ಹೊಸದಿಲ್ಲಿ: ಮಹಿಳಾ ಏಷ್ಯಾ ಕಪ್ 2026ರ ಫೈನಲ್ ನಲ್ಲಿ ಗೆಲುವು ಸಾಧಿಸಿದ ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ.
ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಶ್ರೀಲಂಕಾವನ್ನು 72 ರನ್ಗಳಿಂದ ಮಣಿಸಿ, ದಾಖಲೆಯ 8ನೇ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಪಂದ್ಯ ಮುಗಿದ ಬಳಿಕ ಪ್ರಶಸ್ತಿಯನ್ನು ಸ್ವೀಕರಿಸಲು ಭಾರತೀಯ ಆಟಗಾರ್ತಿಯರು ನಿರಾಕರಿಸಿದ್ದಾರೆ.
ಫೈನಲ್ ಪಂದ್ಯ ಮುಗಿದ ಬಳಿಕ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ.
“ನಮ್ಮ ಪುರುಷರ ತಂಡವು ಒಂದೂವರೆ ವರ್ಷಗಳ ಹಿಂದೆ ಏಷ್ಯಾ ಕಪ್ ಗೆದ್ದಿತ್ತು. ಆದರೆ, 2025ರ ಎಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ಘಟನೆ ಬಳಿಕ ನಮ್ಮ ಸಂಪೂರ್ಣ ಪರಿಸ್ಥಿತಿ ಬದಲಾಗಿದೆ. ಆ ಘಟನೆ ನಂತರ, ನೆರೆಯ ದೇಶದೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಮತ್ತು ಅವರೊಂದಿಗೆ ಕ್ರಿಕೆಟ್ ಆಡಬಾರದು ಎಂದು ನಮ್ಮ ನಾಗರಿಕರಿಂದ ಒತ್ತಡ ಬಂದಿತ್ತು. ಆದರೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾವು ಪ್ರತಿಯೊಂದು ದೇಶದ ವಿರುದ್ಧವೂ ಆಡಬೇಕು ಎಂಬುದು ನಮ್ಮ ಸರಕಾರದ ನೀತಿಯಾಗಿದೆ” ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.
"ನಮ್ಮ ಸೇನಾ ಸಂಘರ್ಷ ಇನ್ನೂ ಮುಂದುವರಿದಿದೆ. ನಮ್ಮ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ನಾಯಕರೊಬ್ಬರಿಂದ ನಾವು ಟ್ರೋಫಿ ಸ್ವೀಕರಿಸುವುದು ಸಾಧ್ಯವಿಲ್ಲ. ಕಳೆದ ವರ್ಷ ಪುರುಷರ ತಂಡ ಕೈಗೊಂಡ ನಿರ್ಧಾರಕ್ಕೆ ಮಹಿಳಾ ತಂಡವೂ ಬೆಂಬಲ ವ್ಯಕ್ತಪಡಿಸಿದೆ” ಎಂದು ಸೈಕಿಯಾ ಹೇಳಿದರು.
ಆದರೆ, ಪಂದ್ಯದ ವೇಳೆ ಸೈಕಿಯಾ ಅವರು ನಖ್ವಿ ಅವರನ್ನು ಭೇಟಿಯಾಗುತ್ತಿರುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಫೈನಲ್ ಪಂದ್ಯದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿದರು. ನಖ್ವಿ ಅವರು ಮೊದಲು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರನ್ನು ಅಭಿನಂದಿಸಿ, ಬಳಿಕ ಸೈಕಿಯಾ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ.
ಆ ಭೇಟಿಯ ಕುರಿತು ಪ್ರಶ್ನಿಸಿದಾಗ, ಅದು ಪಂದ್ಯದ ದಿನದ ಸಾಮಾನ್ಯ ಶಿಷ್ಟಾಚಾರದ ಭಾಗವಾಗಿತ್ತು. ಇದರಿಂದ ಟ್ರೋಫಿ ಪ್ರದಾನ ಸಮಾರಂಭದ ಕುರಿತು ಬಿಸಿಸಿಐ ಹೊಂದಿರುವ ನಿಲುವಿಗೆ ಯಾವುದೇ ವಿರೋಧಾಭಾಸವಿಲ್ಲ ಎಂದು ಸೈಕಿಯಾ ಹೇಳಿದರು.
“ನಾವು ಯಾರನ್ನೂ ಭೇಟಿಯಾಗುವುದಿಲ್ಲ ಎಂದೇನಲ್ಲ. ಟಾಸ್ನಿಂದ ಹಿಡಿದು ಪಂದ್ಯದ ಅಂತ್ಯದವರೆಗೂ ನಾನು ರಾಯಲ್ ಬಾಕ್ಸ್ನ ಆಸನಗಳಲ್ಲಿ ಕುಳಿತಿದ್ದೆ. ಪಂದ್ಯ ನಡೆಯುವ ವೇಳೆ ಅಲ್ಲಿಗೆ ಬಂದ ಪ್ರತಿಯೊಬ್ಬರೂ ನನ್ನನ್ನು ಭೇಟಿಯಾದರು. ಕೆಲವರು ನನ್ನ ಪಕ್ಕದಲ್ಲಿ ಕುಳಿತರು. ಬಳಿಕ ರಾಜೀವ್ ಶುಕ್ಲಾ ಬಂದು ನನ್ನೊಂದಿಗೆ ಕುಳಿತರು. ನೀವು ಉಲ್ಲೇಖಿಸಿದ ವ್ಯಕ್ತಿ (ನಖ್ವಿ) ಕೂಡ ಖಾಲಿದ್ ಸಾಹಿಬ್ ಅವರ ಜೊತೆ ಬಂದು ಕುಳಿತರು. ಯಾರೇ ಬಂದರೂ ನಾವು ಅವರನ್ನು ಭೇಟಿಯಾಗುತ್ತೇವೆ ಮತ್ತು ಅವರ ಜೊತೆ ಮಾತನಾಡುತ್ತೇವೆ. ಇದು ಸಾಮಾನ್ಯ ಸಂಪ್ರದಾಯವಷ್ಟೇ” ಎಂದು ಸೈಕಿಯಾ ಹೇಳಿದರು.
ಕಳೆದ ವರ್ಷ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ಭಾರತೀಯ ಪುರುಷರ ತಂಡ ನಿರಾಕರಿಸಿತ್ತು.