ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಬ್ರಿಟಿಷರ ಜೊತೆಗಿದ್ದ ಬಿಜೆಪಿ, ಆರೆಸ್ಸೆಸ್ ಗೆ ಗೊತ್ತಿರುವುದು ಬರೀ ಹಿಂಸೆ, ಸುಳ್ಳು: ಸಿದ್ದರಾಮಯ್ಯ
ಬೆಂಗಳೂರು ಮೇ 27: ಬಿಜೆಪಿಗೆ ಗೊತ್ತಿರುವುದು ಬರಿ ಹಿಂಸೆ ಮತ್ತು ಸುಳ್ಳು. ದಲಿತರು, ಶೂದ್ರರ ಮೇಲೆ ಕೇಸುಗಳು ಬೀಳುವಂತೆ ಮಾಡುವುದು ಇದೇ BJP ಮತ್ತು RSS. ಆಮೇಲೆ ಅವರನ್ನು ಜೈಲಿನಿಂದ ಕರೆದುಕೊಂಡು ಬರುವುದೂ ಇವರೇ. ಇದೇ ನಾಟಕ ಆಡಿಕೊಂಡೇ ಅವರು ಕಾಲಕಳೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಆಧುನಿಕ ಭಾರತದ ನಿರ್ಮಾತೃ ಜವಾಹರಲಾಲ್ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.
ಆಹಾರ ಕ್ರಾಂತಿ, ಹಸಿರು ಕ್ರಾಂತಿಯ ಜೊತೆಗೆ ವಿಜ್ಞಾನ-ತಂತ್ರಜ್ಞಾನದ ಪ್ರಗತಿಗೆ ಕಾರ್ಯಕ್ರಮಗಳು, ತಾಂತ್ರಿಕ ವಿಶ್ವ ವಿದ್ಯಾನಿಲಯಗಳನ್ನು ಸ್ಥಾಪಿಸುವ ಮೂಲಕ , ತಾಂತ್ರಿಕ ಕ್ಷೇತ್ರ ಪ್ರಗತಿ ಮೂಲಕ ವೈಜ್ಞಾನಿಕ ಭಾರತದ ನಿರ್ಮಾತೃ ಕೂಡ ಆದ ನೆಹರೂ ಅವರ ಕೊಡುಗೆಯನ್ನು ಬಿಜೆಪಿ , RSS ಎಷ್ಟೇ ಅಳಿಸಲು ಹೆಣಗಾಡಿದರೂ ಅದು ಸಾಧ್ಯವಾಗುತ್ತಿಲ್ಲ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸದೆ ಬ್ರಿಟಿಷರ ಜೊತೆಗಿದ್ದ RSS, BJP ಯವರು ಈಗ ದೇಶಭಕ್ತಿ ಬಗ್ಗೆ ಬರಿ ಭಾಷಣ ಮಾಡುವುದು ಡೋಂಗಿತನ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲದ ಬಿಜೆಪಿ, RSS ಸಾಮಾಜಿಕ ನ್ಯಾಯದ ಪರವಾಗಿದ್ದ ಅಂಬೇಡ್ಕರ್, ನೆಹರೂ ಬಗ್ಗೆ ಸಹಸ್ರ ಸಹಸ್ರ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಡಾಂಗೆ ಮತ್ತು ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಪತ್ರ ಬರೆದಿದ್ದಾರೆ. ಆದರೂ ಬಿಜೆಪಿ, RSS ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಹಸಿ ಹಸಿ ಸುಳ್ಳುಗಳನ್ನು ಹಂಚುತ್ತಾ ತಿರುಗುತ್ತಿದ್ದಾರೆ ಎಂದರು.
ನೆಹರೂ ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಅಪಾರ ಶಿಕ್ಷಣ ಮತ್ತು ಜ್ಞಾನ ಹೊಂದಿದ್ದ ನೆಹರೂ ಆಧುನಿಕ ಭಾರತದ ನಿರ್ಮಾಣಕ್ಕೆ ಭದ್ರವಾದ ಅಡಿಪಾಯ ಹಾಕಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದರು.
ದೇಶದಲ್ಲಿ ಭಾರತೀಯರ ಕಣ್ಣೀರು ಒರೆಸುವ, ನೋವುಗಳಿಗೆ ಪರಿಹಾರ ಒದಗಿಸುವುದು ನಮ್ಮ ಕೆಲಸ ಎಂದು ಆರಂಭದಲ್ಲಿ ಘೋಷಣೆ ಮಾಡಿ ನೆಹರೂ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ಬ್ರಿಟಿಷರು ಲೂಟಿ ಮಾಡಿದ್ದ ದೇಶದಲ್ಲಿ ಯಾವ ಸವಲತ್ತುಗಳೂ ಇರಲಿಲ್ಲ. ಅಂಥಾ ಹೊತ್ತಲ್ಲಿ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದ ನೆಹರೂ ದೇಶವನ್ನು ದಶ ದಿಕ್ಕುಗಳಿಂದ ಕಟ್ಟಿ ನಿಲ್ಲಿಸಿದರು. ಅಪಾರ ಶ್ರೀಮಂತ ಕುಟುಂಬದ ನೆಹರೂ, ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿ ದೇಶದ ಪ್ರತಿಯೊಂದು ಕ್ಷೇತ್ರಗಳೂ ಪ್ರಗತಿ ಪಥದಲ್ಲಿ ಸಾಗುವಂತೆ ನೋಡಿಕೊಂಡಿದ್ದನ್ನು ಅಂಕಿ ಅಂಶಗಳ ಸಮೇತ ಸಿಎಂ ವಿವರಿಸಿದರು.