ಬೆಂಗಳೂರು : ರಾಜ್ಯದಲ್ಲಿ ನೆಮ್ಮದಿ ಶಾಂತಿ ನೆಲಸಲು ಕಾಂಗ್ರೆಸ್‍ಗೆ ಅಧಿಕಾರ ನೀಡಲಾಗಿತ್ತು. ಅದರಂತೆ ಸೆಗಣಿ ಭಕ್ತರು ಕೋಮುದ್ವೇಷ ಹರಡುತ್ತಿರುವುದು ನಿಲ್ಲಿಸಿದ್ದು, ಇದು ನಮ್ಮ ದೊಡ್ಡ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಭವನದ ಸಭಾಂಗಣದಲ್ಲಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ 5ನೆ ವಾರ್ಷಿಕೋತ್ಸವದ ನೆನಪಿಗಾಗಿ ‘ಭಾರತ್ ಜೋಡೋ ಯಾತ್ರೆ ವಾರ್ಷಿಕೋತ್ಸವ ಆಚರಣಾ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ವಾಗ್ದಾನ ನೀಡಿದೆವು. ಅಂಧಭಕ್ತರು, ಸೆಗಣಿ ಭಕ್ತರು ಕೋಮುದ್ವೇಷ ಹರಡುತ್ತಿರುವುದು ನಿಲ್ಲಿಸಿದ್ದು, ಇದು ನಮ್ಮ ದೊಡ್ಡ ಸಾಧನೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆದಿದ್ದೇವೆ. ಸುಂದರವಾದ, ಸಮೃದ್ಧವಾದ ರಾಜ್ಯ ನಮ್ಮದು. ಇದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಮೇಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಈಗಲೂ ದ್ವೇಷ ಹರಡುವುದನ್ನು ನಿಲ್ಲಿಸುತ್ತಿಲ್ಲ. ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ 1.40 ಕೋಟಿ ಮಕ್ಕಳ ಭವಿಷ್ಯ ಹಾಳು ಮಾಡಲು ಮುಂದಾಗಿದ್ದರು. ಈ ವಿಚಾರವಾಗಿ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಗಟ್ಟಿಯಾದ ಹೋರಾಟ ಮಾಡಬೇಕು. ಜೆನ್ ಝಿ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಮಂಡಿಯೂರುವಂತೆ ಮಾಡಿದರು. 56 ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುವ ಸುಳ್ಳಿನ ಸರದಾರ ಜನರನ್ನು ಎದುರಿಸಲಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹೇಳಿಕೊಟ್ಟ ಶಾಂತಿ, ಸಹಬಾಳ್ವೆ ಸಂದೇಶವನ್ನು ನಮ್ಮ ಪ್ರದೇಶದಲ್ಲಿ ಕಾಪಾಡಿಕೊಂಡರೆ ನಾವು ಅವರಿಗೆ ದೊಡ್ಡ ಕೊಡುಗೆ ಕೊಟ್ಟಂತೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣಿರು ಒರೆಸಲು ಸರಕಾರ ಇರಬೇಕು ಎಂದು ಮಹಾತ್ಮಾ ಗಾಂಧಿ ಅವರು ಸಂದೇಶ ನೀಡಿದ್ದಾರೆ. ರಾಜಕಾರಣಕ್ಕೆ ಬರಬೇಕಾದರೆ ಯೋಚನೆ ಮಾಡಿ ಬನ್ನಿ, ಜೀವನ ಮಾಡಲು ರಾಜಕೀಯಕ್ಕೆ ಬರಬೇಡಿ, ಜನರ ಜೀವನ ಬದಲಿಸಲು ರಾಜಕೀಯಕ್ಕೆ ಬನ್ನಿ ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಅದನ್ನು ಪಾಲಿಸೋಣ ಎಂದು ಅವರು ಕರೆ ನೀಡಿದರು.

ನಾನು ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷನಾಗಲು 53 ವರ್ಷ ಬೇಕಾಯಿತು. ನನಗೆ ಏನೂ ಮಾಡಲ್ಲ ಎಂದು ನಾನು ಬಿಟ್ಟು ಹೋಗಬಹುದಿತ್ತಲ್ಲವೇ? ಕಾಂಗ್ರೆಸ್ ಸಿದ್ಧಾಂತ, ತತ್ವದ ಬಗ್ಗೆ ಅಚಲ ನಂಬಿಕೆ ಹೊಂದಿದ್ದೇನೆ. ನೀವು ಕೂಡ ನಾಯಕರ ಹಿಂದೆ ಹೋಗದೆ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಿಂದೆ ಹೋಗಿ. ಕಾಂಗ್ರೆಸ್ ಇತಿಹಾಸದ ಬಗ್ಗೆ ಭಾರತ ಜೋಡೋ ಇತಿಹಾಸದ ಬಗ್ಗೆ ತಿಳಿದು, ದ್ವೇಷದ ಮಾರುಕಟ್ಟೆಯಲ್ಲಿ ಪ್ರಿತಿಯ ಅಂಗಡಿ ತೆರೆಯುವ ರಾಹುಲ್ ಗಾಂಧಿ ಅವರ ಸಂದೇಶವನ್ನು ಪಾಲಿಸಬೇಕು. ಶಾಂತಿ, ಸೌಹಾರ್ದತೆ ಹರಡಿ ಎಂದೂ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್, ಶಿವಲಿಂಗೇಗೌಡ, ಬಾಲಕೃಷ್ಣ, ಎಐಸಿಸಿ ಕಾರ್ಯದರ್ಶಿಗಳಾದ ಗೋಪಿನಾಥನ್, ಪಳನಿಯಪ್ಪನ್, ಮಾಜಿ ಸಚಿವ ಎನ್.ಎಸ್.ಭೋಸರಾಜು ಸೇರಿದಂತೆ ಕೆಪಿಸಿಸಿ ಪದಾಧಕಾರಿಗಳು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor