ರೌಡಿಶೀಟರ್ ಹತ್ಯೆ ಪ್ರಕರಣ | ಪೋಲಿಸರು ಬಂಧಿಸಿರುವ ಅನಿಲ್ಗೂ, ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ : ಬೈರತಿ ಬಸವರಾಜ್
ಬೈರತಿ ಬಸವರಾಜ್
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಅನಿಲ್ಗೂ, ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಬಿಜೆಪಿ ಶಾಸಕ ಬೈರತಿ ಬಸವರಾಜ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟನೆ ಮೂಲಕ ಸ್ಪಷ್ಟನೆ ನೀಡಿರುವ ಅವರು, ಪೋಲಿಸರಿಂದ ಬಂಧನಕ್ಕೊಳಗಾಗಿರುವ ಅನಿಲ್, ನನ್ನ ಸಹೋದರ ಮಗನೆಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಮಾತು. ಆತ ಯಾರೆಂಬುದೇ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ನಮ್ಮ ಸಹೋದರನ ಮಗ ಶಾಮೀಲಾಗಿದ್ದಾರೆ ಎಂದು ಅನಗತ್ಯವಾಗಿ ರಾಜಕೀಯ ದುರುದ್ದೇಶದಿಂದ ಕೆಲವರು ನನ್ನ ಚಾರಿತ್ರ್ಯವಧೆ ಮಾಡಲು ಷಡ್ಯಂತ್ರ ನಡೆಸಿದ್ದಾರೆ. ನಾನು ಸಂಪೂರ್ಣವಾಗಿ ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ರಾಜಕೀಯ ಪ್ರೇರಿತ ಈ ಪ್ರಕರಣವನ್ನು ಹೇಗೆ ಎದುರಿಸಬೇಕೆಂಬುದು ನನಗೆ ಗೊತ್ತಿದೆ. ಇಂತಹ ಷಡ್ಯಂತ್ರಗಳನ್ನು ಎದುರಿಸಿಯೇ ನಾನು ಮೇಲಕ್ಕೆ ಬಂದಿದ್ದೇನೆ. ಇದಕ್ಕೆಲ್ಲಾ ಹೆದರುವ ಜಾಯಮಾನದವನಲ್ಲ.ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ಸೂಕ್ತ ಕಾಲದಲ್ಲಿ ಎಲ್ಲಾ ದಾಖಲೆಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದಿದ್ದಾರೆ.
ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ದೇಶದ ಕಾನೂನಿಗೆ ತಲೆಬಾಗುತ್ತೇನೆ. ಪೋಲೀಸರ ವಿಚಾರಣೆಗೆ ಹಿಂದೆಯೂ ಸಹಕಾರ ಕೊಟ್ಟಿದ್ದೆ?ಮುಂದೆಯೂ ಕೊಡುತ್ತೇನೆ. ಹೆದರಿ ಕೂರುವ ಜಾಯಮಾನ ನನ್ನದಲ್ಲ. ಏನೇ ಬಂದರೂ ಎದುರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.