ಮಾಧ್ಯಮದವರ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಲ್ಲಿ ನೆರವು : ಸಿಎಂ ಡಿ.ಕೆ.ಶಿವಕುಮಾರ್

‘ಕ್ಯಾಮೆರಾ ಕಣ್ಣಲ್ಲಿ ದಾಖಲಾಗುವ ಚಿತ್ರ ಇತಿಹಾಸದ ಸಾಕ್ಷಿ’

Update: 2026-08-23 19:15 IST

ಬೆಂಗಳೂರು : ‘ಒಂದು ಛಾಯಾಚಿತ್ರ ಕೇವಲ ಚಿತ್ರವಲ್ಲ, ಅದು ವ್ಯಕ್ತಿಯ ಬದುಕು. ಸಮಾಜದ ಬೆಳವಣಿಗೆ ಹಾಗೂ ಕಾಲಘಟ್ಟದ ಇತಿಹಾಸವನ್ನು ದಾಖಲಿಸುವ ಮಹತ್ವದ ಸಾಕ್ಷಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಣ್ಣಿಸಿದ್ದಾರೆ.

ರವಿವಾರ ನಗರದ ಚಿತ್ರಕಲಾ ಪರಿಷತ್‍ನಲ್ಲಿ ಛಾಯಾಗ್ರಾಹಕರ ಸಂಘ ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ವಿಶ್ವ ಛಾಯಾಗ್ರಹಣ ದಿನ’ದ ಅಂಗವಾಗಿ ‘ ಫ್ರೋಜನ್ ಮೆಮೊರೀಸ್' ಛಾಯಾಚಿತ್ರ ಪ್ರದರ್ಶನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ಒಬ್ಬ ವ್ಯಕ್ತಿಯ ಇತಿಹಾಸವನ್ನು ದಾಖಲಿಸುವಲ್ಲಿ ಛಾಯಾಚಿತ್ರದ ಪಾತ್ರ ಅತ್ಯಂತ ಮಹತ್ವದ್ದು’ ಎಂದು ನುಡಿದರು.

‘ನಿಮ್ಮದೊಂದು ಚಿತ್ರ ಒಂದು ವರ್ಷದ್ದಾಗಿರಬಹುದು, 50, 100 ವರ್ಷದ್ದಾಗಿರಬಹುದು ಅಥವಾ ಅದಕ್ಕಿಂತಲೂ ಹಳೆಯದಾಗಿರಬಹುದು. ಆದರೆ, ಅದು ಒಬ್ಬ ವ್ಯಕ್ತಿಯ ಇತಿಹಾಸವನ್ನು ಬರೆಯುವಂತಹ ಸಾಕ್ಷಿಯಾಗುತ್ತದೆ. ಒಂದು ಚಿತ್ರ ಸಣ್ಣದು ಎಂದು ಭಾವಿಸಬಾರದು. ನಮ್ಮ ಬದುಕಿನಲ್ಲಿ ನಡೆದ ಘಟನೆಗಳಿಗೆ ಸಾಕ್ಷಿ ಏನು ಎಂಬುದನ್ನು ತೋರಿಸುವಲ್ಲಿ ಛಾಯಾಚಿತ್ರದ ಪಾತ್ರ ದೊಡ್ಡದು’ ಎಂದು ಅವರು ಅಭಿಪ್ರಾಯಪಟ್ಟರು

‘ಒಂದು ಚಿತ್ರ ನೂರಾರು ಅರ್ಥಗಳನ್ನು ನೀಡಬಲ್ಲದು. ಕಾಲ ಕಳೆದಂತೆ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಛಾಯಾಗ್ರಾಹಕರು ಸೆರೆಹಿಡಿಯುವ ಪ್ರತಿಯೊಂದು ದೃಶ್ಯವೂ ಭವಿಷ್ಯದ ಪೀಳಿಗೆಗೆ ದಾಖಲೆಯಾಗಬಹುದು’ ಎಂದ ಅವರು, ‘ಅಕ್ಬರ್ ‘ಕಿವಿಗೂ ಕಣ್ಣಿಗೂ ಎಷ್ಟು ದೂರ?’ ಎಂದು ಪ್ರಶ್ನಿಸಿದಾಗ ಬೀರಬಲ್ ನಾಲ್ಕು ಬೆರಳು ಎಂದು ಉತ್ತರಿಸುತ್ತಾನೆ. ಆದರೆ, ಈ ನಾಲ್ಕು ಬೆರಳಿನ ಅಂತರ ಕೇವಲ ದೈಹಿಕ ಅಂತರವಲ್ಲ, ಕಿವಿಯಿಂದ ಕೇಳುವ ಸುದ್ದಿ ಮತ್ತು ಕಣ್ಣಿನಿಂದ ಕಾಣುವ ಸತ್ಯದ ನಡುವಿನ ವ್ಯತ್ಯಾಸದ ಸಂಕೇತ. ಜನರು ಕಣ್ಣಾರೆ ಕಂಡ ದೃಶ್ಯಕ್ಕೆ ಹೆಚ್ಚಿನ ನಂಬಿಕೆ ನೀಡುತ್ತಾರೆ’ ಎಂದು ಉದಾಹರಣೆ ನೀಡಿದರು.

‘ಕಿವಿಯಿಂದ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದಕ್ಕೆ ಜನರು ಹೆಚ್ಚಿನ ನಂಬಿಕೆ ಇಡುತ್ತಾರೆ. ಮಾಧ್ಯಮದಲ್ಲೂ ಇದೇ ಕಾರಣಕ್ಕೆ ಚಿತ್ರಕ್ಕೆ ಮಹತ್ವವಿದೆ’ ಎಂದ ಅವರು, ‘ಪತ್ರಿಕೆಯಲ್ಲಿ ಎಷ್ಟೇ ಆಳವಾದ ವಾಸ್ತವಾಂಶಗಳನ್ನು ಪ್ರಕಟಿಸಿದರೂ, ಅದರೊಂದಿಗೆ ಸೂಕ್ತ ಚಿತ್ರವಿಲ್ಲದಿದ್ದರೆ ಓದುಗರ ಮೇಲೆ ಸುದ್ದಿಯ ಪರಿಣಾಮ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ದೃಶ್ಯ ಮಾಧ್ಯಮಗಳು ವೇಗವಾಗಿ ಬೆಳೆದಿವೆ ಎಂದರು.

ಬೆಳವಣಿಗೆಗೆ ಚಿತ್ರವೇ ಕಾರಣ: ಯಾವುದೇ ಪತ್ರಿಕೆ, ಎಷ್ಟೇ ವಾಸ್ತವಾಂಶ ಬರೆದಿದ್ದರೂ ಅದರೊಂದಿಗೆ ಒಂದು ಚಿತ್ರ ಇಲ್ಲದಿದ್ದರೆ ಆ ಸುದ್ದಿಯ ಬೆಲೆ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಟಿವಿ ಮಾಧ್ಯಮ ಇಷ್ಟು ದೊಡ್ಡಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆದಿದೆ. ನಂತರ ಸಾಮಾಜಿಕ ಮಾಧ್ಯಮವೂ ವೇಗವಾಗಿ ಬೆಳೆಯಿತು. ಟಿವಿಯಲ್ಲಿ ಜನರು ಕಣ್ಣಾರೆ ನೋಡುವ ಚಿತ್ರಗಳನ್ನು ಹೆಚ್ಚು ನಂಬುತ್ತಾರೆ ಎಂದು ಅವರು ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಿದ್ದರೂ ಅವರ ವ್ಯಾಪ್ತಿ ಅಪಾರವಾಗಿದೆ. ಸ್ಥಳೀಯವಾಗಿ ತೆಗೆದ ಒಂದು ಚಿತ್ರ ಕೆಲವೇ ಕ್ಷಣಗಳಲ್ಲಿ ರಾಜ್ಯದಾದ್ಯಂತ, ದೇಶದಾದ್ಯಂತ ಹಾಗೂ ಜಗತ್ತಿನಾದ್ಯಂತ ತಲುಪುವ ಸಾಮಥ್ರ್ಯ ಹೊಂದಿದೆ ಎಂದ ಅವರು, ನೀವು ಇಲ್ಲಿ 40 ಜನ ಇರಬಹುದು, 100 ಜನ ಇರಬಹುದು ಅಥವಾ 4ಸಾವಿರ ಮಂದಿ ಇರಬಹುದು. ಆದರೆ, ನಿಮ್ಮ ಕ್ಯಾಮೆರಾದ ಮೂಲಕ ಹೊರಬರುವ ಚಿತ್ರಗಳನ್ನು ರಾಜ್ಯದ 7ಕೋಟಿ ಜನರು ನೋಡುತ್ತಾರೆ. ನಿಮ್ಮ ಸಂದೇಶ ಮತ್ತು ಚಿತ್ರಗಳು ಇಡೀ ವಿಶ್ವವನ್ನೇ ತಲುಪುತ್ತವೆ. ಹೀಗಾಗಿ ನಿಮ್ಮ ಕ್ಯಾಮೆರಾದ ಮೇಲೆ ನಮಗೆ ನಂಬಿಕೆ ಇದೆ ಎಂದು ಅವರು ತಿಳಿಸಿದರು.

ಮಾಧ್ಯಮ ಲೋಕದಲ್ಲಿ ನೀವು ಶ್ರಮಪಟ್ಟು ತೆಗೆದಿರುವ ಹಲವು ವಿಭಿನ್ನ ಚಿತ್ರಗಳನ್ನು ನಾನು ನೋಡಿದ್ದೇನೆ. ಜೆಸಿಬಿ ಪಕ್ಕದಲ್ಲಿ ಚಿರತೆ ಕಾಣಿಸಿಕೊಂಡಿದ್ದ ಅಪರೂಪದ ಚಿತ್ರವೊಂದನ್ನು ನೋಡಿದ್ದೇನೆ. ಅಂತಹ ಚಿತ್ರವನ್ನು ಸಾಮಾನ್ಯವಾಗಿ ಯಾರೂ ಊಹಿಸಲೂ ಸಾಧ್ಯವಿಲ್ಲ. ಯಾವುದು ಮುಖ್ಯ, ಯಾವ ಕ್ಷಣವನ್ನು ಸೆರೆಹಿಡಿಯಬೇಕು ಎಂಬುದನ್ನು ಕ್ಷಣಾರ್ಧದಲ್ಲಿ ನಿರ್ಧರಿಸುವ ನಿಮ್ಮ ಸಾಮಥ್ರ್ಯ ಮುಖ್ಯ ಎಂದು ಅವರು ಹೇಳಿದರು.

ಬೇಡಿಕೆಗಳಿಗೆ ಸ್ಪಂದನೆ: ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಅರಿವಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಒಂದೇ ರೀತಿಯಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನು ನಾನು ಆಲೋಚಿಸುತ್ತೇನೆ. ಕಾನೂನು ಚೌಕಟ್ಟಿನೊಳಗೆ ನಿಮಗೆ ಯಾವ ರೀತಿಯಲ್ಲಿ ನೆರವು ನೀಡಲು ಸಾಧ್ಯವೋ ಅದನ್ನು ಮಾಡುವ ಬಗ್ಗೆ ಪರಿಶೀಲಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

 

ಅಸಲಿ-ನಕಲಿ ಸವಾಲು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೈಜ ಹಾಗೂ ಕೃತಕವಾಗಿ ಸೃಷ್ಟಿಸಲಾದ ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸುವುದು ಸವಾಲಾಗಲಿದೆ. ಒಂದು ಚಿತ್ರವನ್ನು ಬದಲಿಸಿ ಮತ್ತೊಂದು ರೀತಿಯಲ್ಲಿ ಸೃಷ್ಟಿಸುವುದು ಇದೀಗ ಸಾಧ್ಯ. ನಿಜವಾದ ಚಿತ್ರ ಯಾವುದು, ಕೃತಕ ಚಿತ್ರ ಯಾವುದು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸಿ ನಿಜ-ಸುಳ್ಳು ಎಂಬುದನ್ನು ಪತ್ತೆಹಚ್ಚಬೇಕಾದ ಸ್ಥಿತಿ ಬರಬಹುದು’

-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News