×
Ad

ನೂತನ ವಿವಿಗಳ ಕುರಿತು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ : ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

Update: 2025-03-06 17:57 IST

ಬೆಂಗಳೂರು : ‘ರಾಜ್ಯದ ನೂತನ ವಿಶ್ವ ವಿದ್ಯಾಲಯಗಳ ವಿಚಾರದಲ್ಲಿ ರಾಜ್ಯ ಸರಕಾರ ಇನ್ನೂ ಯಾವುದೇ ರೀತಿಯ ಸ್ಪಷ್ಟ ತೀರ್ಮಾನವನ್ನು ಮಾಡಿಲ್ಲ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಜಗದೀಶ್ ಗುಡಗುಂಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದ ವಿಶ್ವ ವಿದ್ಯಾಲಯಗಳ ಸ್ಥಿತಿಗತಿಗಳ ಸಂಬಂಧ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ವಿಚಾರ ಸಂಪುಟ ಸಭೆಯ ಮುಂದೆ ಇನ್ನು ಬಂದಿಲ್ಲ. ವಾಹನ ಖರೀದಿ, ಜಮೀನು ಖರೀದಿ, ನೇಮಕಾತಿಯ ಸಮಸ್ಯೆಗಳಿವೆ ಎಂದು ವಿವರಿಸಿದರು.

‘ವಿಶ್ವ ವಿದ್ಯಾಲಯಗಳನ್ನು ಮುಚ್ಚಲಾಗುತ್ತದೆ’ ಎಂಬ ವಿಚಾರ ಮಾಧ್ಯಮಗಳಲ್ಲಿ ಬಂದಿದೆಯೇ ಹೊರತು, ಸರಕಾರದಿಂದ ಯಾವುದೇ ನಿರ್ಧಾರವಾಗಿಲ್ಲ. 2022-23ನೆ ಸಾಲಿನ ಬಜೆಟ್‍ನಲ್ಲಿ ಘೋಷಿಸಲಾದಂತೆ ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಏಳು ನೂತನ ವಿವಿಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಬಾಗಲಕೋಟೆ ವಿಶ್ವ ವಿದ್ಯಾಲಯವು ಸೇರಿದೆ ಎಂದರು.

ಈ ವಿವಿಗಳು ಸಾಂಪ್ರದಾಯಿಕ ವಿಶ್ವ ವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಕಾರ್ಯನಿರ್ವಹಿಸಲಿವೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸುವ ಈ ವಿವಿಗಳಿಗೆ ವಾರ್ಷಿಕ 2 ಕೋಟಿ ರೂ.ಗಳ ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ ಎಂದು ಸುಧಾಕರ್ ಹೇಳಿದರು.

ರಾಣಿ ಚೆನ್ನಮ್ಮ ವಿವಿಯಿಂದ ಬೇರ್ಪಡಿಸಿ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಬರುವ ಮಹಾ ವಿದ್ಯಾಲಯಗಳನ್ನು ಒಳಪಡುವಂತೆ ಜಮಖಂಡಿಯಲ್ಲಿ ಹೊಸದಾಗಿ ಬಾಗಲಕೋಟೆ ವಿವಿಯನ್ನು ಸ್ಥಾಪನೆ ಮಾಡಲಾಗಿದೆ. ರಾಣಿ ಚೆನ್ನಮ್ಮ ವಿವಿಯಿಂದ ಸ್ನಾತಕೋತ್ತರ ಕೇಂದ್ರಗಳು, ಬೋಧಕ, ಬೋಧಕೇತರ ಹುದ್ದೆಗಳು, ಸಂಯೋಜಿತ ಕಾಲೇಜುಗಳು, ಜಮೀನು, ಕಟ್ಟಡ ಸೇರಿದಂತೆ ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದರು.

ಗದ್ದಲ: ವಿವಿ ವಿಚಾರದಲ್ಲಿ ಬಿಜೆಪಿ ಸದಸ್ಯ ಡಾ.ಅಶ್ವತ್ಥನಾರಾಯಣ, ಹಾಗೂ ಸಚಿವ ಡಾ.ಸುಧಾಕರ್ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಶ್ವತ್ಥನಾರಾಯಣ ಬೆಂಬಲಕ್ಕೆ ನಿಂತು ಬಿಜೆಪಿ ಸದಸ್ಯರು, ಡಾ.ಸುಧಾಕರ್ ಬೆಂಬಲಕ್ಕೆ ನಿಂತು ಆಡಳಿತ ಪಕ್ಷದ ಸದಸ್ಯರು ಮಾತನಾಡಿದ್ದರಿಂದ ಸದನದಲ್ಲಿ ಗದ್ದಲ, ಗೊಂದಲ ಉಂಟಾಯಿತು.

ರಾಜ್ಯದಲ್ಲಿ ನೂತನ ವಿವಿಗಳಿಗೆ ಒಂದು ನಯಾಪೈಸೆ ಹಣವನ್ನು ನೀಡಿದೆ ನೂತನ ವಿವಿಗಳನ್ನು ಮುಚ್ಚಲು ಮುಂದಾಗಿದ್ದು, ಶಿಕ್ಷಣ ವಿರೋಧಿಗಳು. ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎದುರಾಗಿದೆ ಎಂದು ಡಾ.ಅಶ್ವತ್ಥ ನಾರಾಯಣ ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಸುಧಾಕರ್, ಬಿಜೆಪಿ ಆಡಳಿತದಲ್ಲಿ ವಿವಿಗಳನ್ನು ಮಂಜೂರು ಮಾಡಿ ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳನ್ನು ಹೇಳಲು ಮುಂದಾದರು. ಆಗ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News