×
Ad

ತೆರಿಗೆ ಹಾಕದೆ, ಹೆಚ್ಚಿನ ಸಾಲ ಮಾಡದೆ ಗ್ಯಾರಂಟಿ ಜಾರಿಗೊಳಿಸಿ: ಬಸವರಾಜ ಬೊಮ್ಮಾಯಿ

Update: 2023-07-06 20:10 IST

ಬೆಂಗಳೂರು, ಜು.6: ‘ರಾಜ್ಯ ಸರಕಾರ ಜನರ ಮೇಲೆ ಹೆಚ್ಚಿನ ತೆರಿಗೆ ಹಾಕದೆ, ಹೆಚ್ಚಿನ ಸಾಲ ಮಾಡದೆ ಐದೂ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಬೇಕು. ಇದರ ಹೊರತಾಗಿ ತೆರಿಗೆ ಹಾಕಿದರೆ ಜನ ವಿರೋಧಿ ಗ್ಯಾರಂಟಿಗಳಾಗುತ್ತವೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತು ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ರಾಜ್ಯಪಾಲರ ಭಾಷಣ ನೋಡಿದಾಗ ಜನರ ನಿರೀಕ್ಷೆ ಈಡೇರಿಸುವ, ಭಿನ್ನ ಆಡಳಿತ ನೀಡುವ ಭರವಸೆ ಇಲ್ಲ. ಚರ್ವಿತ ಚರ್ವಣ ಭಾಷಣ ಇದಾಗಿದೆ’ ಎಂದು ಹೇಳಿದರು.

‘ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ಸಾಮಾನ್ಯ ಆಶ್ವಾಸನೆಗಳನ್ನೆ ವಿಶೇಷ ಎಂದು ಬಿಂಬಿಸಿದ್ದಾರೆ. ಗ್ಯಾರಂಟಿ ಗಳಿಗೆ ಜನರು ಮರುಳಾಗಿದ್ದಾರೊ ಗೊತ್ತಿಲ್ಲ. ಮನ್ನಣೆ ಕೊಟ್ಟಿದ್ದಾರೆ. ಜನರು ನೀವು ಕೊಟ್ಟ ಮಾತುಗಳನ್ನು ಹೆಚ್ಚು ನಂಬಿದ್ದಾರೆ. ಎಲ್ಲರಿಗೂ ಗೃಹ ಲಕ್ಷ್ಮಿ, ಎಲ್ಲರಿಗೂ 10 ಕೆಜಿ ಉಚಿತ ಅಕ್ಕಿ, ಎಲ್ಲರಿಗೂ ಗೃಹ ಜ್ಯೋತಿ, ಪದವಿ ಪಡೆದವರಿಗೆ ನಿರುದ್ಯೋಗ ಭತ್ತೆ ಅಂತ ಹೇಳಿದ್ದೀರಿ. ಈಗ ಎಲ್ಲದಕ್ಕೂ ಶರತ್ತುಗಳನ್ನು ಹಾಕಿ ಎಲ್ಲದಕ್ಕೂ ಏಜೆಂಟ್ ಗಳು ಹುಟ್ಟಿಕೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.

‘ಬಸ್ ಪ್ರಯಾಣ ಮಾತ್ರ ಆರಂಭವಾಗಿದೆ. ಅಕ್ಕಿ ಬದಲು ದುಡ್ಡು ಕೊಡುವುದಾಗಿ ಹೇಳಿದ್ದಾರೆ. ನೀವು ಕೊಡುವ ಹಣಕ್ಕೆ ಎರಡೂವರೆ ಕೆಜಿ ಅಕ್ಕಿ ಬರುತ್ತದೆ. ನೀವು ಘೋಷಣೆ ಮಾಡಿರುವಂತೆ ಎಲ್ಲ ಯೋಜನೆಗಳ ಜಾರಿಗೆ 52 ಸಾವಿರ ಕೋಟಿ ರೂ.ಖರ್ಚಾಗುತ್ತದೆ ಅಂತ ನೀವೆ ಹೇಳಿದ್ದೀರಿ. ಆದರೆ, ಎಲ್ಲದಕ್ಕೂ ಶರತ್ತು ಹಾಕಿರೋದರಿಂದ ಸುಮಾರು 20 ರಿಂದ 25 ಸಾವಿರ ಕೊಟಿ ರೂ.ಮಾತ್ರ ಖರ್ಚಾಗಬಹುದು’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಜಿಎಸ್‍ಟಿ ಸಂಗ್ರಹ ಹೆಚ್ಚಾಗಿದೆ. ಇತರ ತೆರಿಗೆ ್ಸ ಸಂಗ್ರಹ ಕೂಡ ಹೆಚ್ಚಾಗಿದೆ. ಈ ಸರಕಾರ ಹೆಚ್ಚಿನ ಸಾಲ ತೆಗೆದುಕೊಳ್ಳುವ ಅಗತ್ಯವಿಲ್ಲ. ನಾನು ಸರಪ್ಲಸ್ ಬಜೆಟ್ ಮಂಡನೆ ಮಾಡಿದ್ದೇನೆ. 78 ಸಾವಿರ ಕೋಟಿ ರೂ.ಸಾಲ ತೆಗೆದುಕೊಳ್ಳಲು ಅವಕಾಶ ಇದೆ ಅಷ್ಟು ಮಾತ್ರ ತೆಗೆದುಕೊಂಡರೆ ಸಾಕು ಎಂದು ಅವರು ಸಲಹೆ ನೀಡಿದರು.

ಮೂಲ ಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಮೀಸಲಿಟ್ಟ ಹಣವನ್ನು ಬಳಕೆ ಮಾಡಬಹುದು. ಎಲ್ಲ ನೀರಾವರಿ ಯೋಜನೆ, ಶಿಕ್ಷಣ ಇಲಾಖೆ ಯೋಜನೆ, ಕೃಷಿ ಹಾಗೂ ಸೇವಾ ವಲಯಕ್ಕೆ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಜನರ ದುಡ್ಡನ್ನು ಕಸಿದುಕೊಂಡು ಇನ್ನೊಂದ ಕಡೆ ಕೊಟ್ಟ ಹಾಗೆ ಆಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News