ದೇವನಹಳ್ಳಿ, ಹೊಸಕೋಟೆ ವರೆಗೂ ಮೆಟ್ರೋ ವಿಸ್ತರಣೆ : ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಿರುವ ದೇವನಹಳ್ಳಿ, ಹೊಸಕೋಟೆ ತಾಲೂಕುಗಳಿಗೂ ನಮ್ಮ ಮೆಟ್ರೋ ಸಂಪರ್ಕ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ರವಿವಾರ ದೇವನಹಳ್ಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಬಳಿ ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವನಹಳ್ಳಿಗೆ ಮೆಟ್ರೋ ಬರಬೇಕು, ಹೊಸಕೋಟೆಗೆ ಮೆಟ್ರೋ ತಲುಪಬೇಕು. ಇದರ ಬಗ್ಗೆ ಕೂಡ ಈಗಾಗಲೇ ಡಿಪಿಆರ್ ತಯಾರಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಎರಡು ಸಾವಿರ ಅಡಿ ಕೆಳಗೆ ಹೋಗಿದೆರಿದರ ನಡುವೆಯೂ ನಮ್ಮ ಸರಕಾರ ಎತ್ತಿನಹೊಳೆಯಿಂದ, ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರು ತಂದು ಕೆರೆಗಳನ್ನು ತುಂಬಿಸುತ್ತೇವೆ. ನೀರನ್ನು ಈಗಾಗಲೇ ಹೊರಗೆ ತರುವಂತಹ ಶಕ್ತಿ ಭಗವಂತ ನನಗೆ ನೀಡಿದ್ದಾನೆ. ಹೊಸಕೋಟೆ ಕೆರೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಕೆರೆ ಸುತ್ತಮುತ್ತ ಇರುವಂತಹ ನಮ್ಮ ಕೆರೆಗಳಿಗೆ ಹೊಸ ರೂಪ ಕೊಡುವ ಕೆಲಸಕ್ಕೆ ಮಾರ್ಗದರ್ಶನ ಕೊಟ್ಟಿದ್ದೇನೆ ಎಂದರು.
ಕೆಂಪೇಗೌಡರ ಜಯಂತಿ ಅಂಗವಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಸ್ತೆಗೆ ಭೂಮಿ ನೀಡಿದ ರೈತರ ಹೆಸರಿರುವ ಗೋಡೆ ನಿರ್ಮಿಸಿ ಗೌರವ ನೀಡಲಾಗಿದೆ. ಮುಂದಿನ ದಿನದಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಈ ಭಾಗದ ಜನರು ಯೋಜನೆಗಳಿಗೆ ಭೂಮಿ ನೀಡಿ ತ್ಯಾಗ ಮಾಡಿದ ನಿಮ್ಮ ಹೆಸರುಗಳನ್ನು ಶಾಶ್ವತವಾಗಿ ಉಳಿಕೊಳ್ಳಲು ವಿಶೇಷವಾದಂತಹ ಕಾರ್ಯಕ್ರಮವನ್ನು ನಾನು ರೂಪಿಸುತ್ತೇನೆ ಎಂದು ಭರವಸೆ ನೀಡಿದರು.
ಮುಂದೆಯೂ ಕಾಂಗ್ರೆಸ್ ಸರಕಾರ: ನಮಗೆ 136 ಸ್ಥಾನವನ್ನು ನೀಡಿ ಈ ರಾಜ್ಯದ ಆಡಳಿತ ನಡೆಸಲು ಜನ ಅವಕಾಶವನ್ನ ಮಾಡಿಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಅತ್ಯುತ್ತಮ ಕಾರ್ಯಕ್ರಮ ಕೊಟ್ಟಿದ್ದೇವೆ. ಮುಂದಿನ ಎರಡು ವರ್ಷ ಅಲ್ಲ, 2028, 2029 ರಲ್ಲಿ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರ ರಚನೆ ಆಗುತ್ತದೆ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.