×
Ad

ಗುಣಮಟ್ಟವಲ್ಲದ ಔಷಧಿಗಳ ನಿಯಂತ್ರಣಕ್ಕಾಗಿ ಮಾನಿಟರಿಂಗ್ ಪೋರ್ಟಲ್ ಅಭಿವೃದ್ಧಿ: ಸಚಿವ ದಿನೇಶ್ ಗುಂಡೂರಾವ್

Update: 2026-05-14 20:26 IST

ಬೆಂಗಳೂರು, ಮೇ 14: ರಾಜ್ಯ ಸರಕಾರವು ಗುಣಮಟ್ಟವಲ್ಲದ(ಎನ್‍ಎಸ್‍ಕ್ಯೂ) ಔಷಧಿಗಳನ್ನು ಪತ್ತೆಹಚ್ಚಿ, ನಿಯಂತ್ರಿಸಲು ಹಾಗೂ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಯಾನ್ಸಸ್ (ಎನ್‍ಡಿಪಿಎಸ್) ಔಷಧಗಳ ದುರುಪಯೋಗ ತಡೆಯಲು ಮಾನಿಟರಿಂಗ್ ಪೋರ್ಟಲ್‍ಅನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸಗಟು ಮತ್ತು ಚಿಲ್ಲರೆ ಔಷಧಿ ಮಳಿಗೆಗಳಲ್ಲಿ ಲಭ್ಯವಿರುವ ಔಷಧಿಗಳ ಬ್ಯಾಚ್‍ಗಳನ್ನು ಮಾನಿಟರಿಂಗ್ ಪೋರ್ಟಲ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಈಗಾಗಲೇ 15 ಸಾವಿರ ಸಗಟು ಔಷಧಿ ಮಳಿಗೆಗಳುಪೋರ್ಟಲ್‍ನಲ್ಲಿ ನೋಂದಣಿಯಾಗಿವೆ. ಪೋರ್ಟಲ್‍ನಲ್ಲಿ ಗುರುತಿಸಲಾದ ಗುಣಮಟ್ಟವಲ್ಲದ ಔಷಧಿಗಳ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಲಾಗುವುದು ಎಂದರು.

ಗುಣಮಟ್ಟವಲ್ಲದ ಔಷಧಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ. ತಯಾರಕರು ಮತ್ತು ಸಗಟು ವ್ಯಾಪಾರಿಗಳಿಂದ ಇಂತಹ ಔಷಧಿಗಳು ಪತ್ತೆಯಾದರೆ ಆ ಔಷಧಿಗಳನ್ನು ಹಿಂಪಡೆಯಲಾಗುವುದು. 2025-26ನೇ ಸಾಲಿನಲ್ಲಿ 1.85 ಕೋಟಿ ರೂ. ಮೌಲ್ಯದ ಗುಣಮಟ್ಟವಲ್ಲದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಪೋರ್ಟಲ್ ಮುಖಾಂತರ ಸರಕಾರಕ್ಕೆ ಲಭ್ಯವಿರುವ ದಾಸ್ತಾನು ವಿವರಗಳು ಹಾಗೂ ಸರಬರಾಜುದಾರರಿಗೆ ಹಿಂತಿರುಗಿಸಿದ ಪ್ರಮಾಣದ ಮಾಹಿತಿಯನ್ನು ತಿಳಿಯುತ್ತದೆ. ಅಲ್ಲದೆ ಉತ್ತಮ ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಹಾಗಾಗಿ ಇದು ಸಾರ್ವಜನಿಕರಿಗೆ ಸುರಕ್ಷಿತ ಔಷಧಿಗಳನ್ನು ಖಚಿತಪಡಿಸುತ್ತದೆ ಎಂದು ಅವರು ವಿವರಿಸಿದರು.

ಸರಕಾರವು ಎನ್‍ಡಿಪಿಎಸ್ ಔಷಧಿಗಳ ಮಾರಾಟದ ಮೇಲೆ ನಿಗಾ ವಹಿಸಲಾಗುತ್ತಿದೆ. ಅನಧಿಕೃತ ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ಪೋರ್ಟಲ್ ಸಹಕಾರಿಯಾಗಿದ್ದು, ಔಷಧಿಗಳ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ವ್ಯವಸ್ಥೆಯಿಂದ ಎನ್‍ಡಿಪಿಎಸ್ ಔಷಧಿಗಳನ್ನು ವಿತರಿಸುವ ಸಂದರ್ಭದಲ್ಲಿ ರೋಗಿ ಮತ್ತು ವೈದ್ಯರ ಮಾಹಿತಿಯನ್ನು ಪಡೆಯುವ ಜೊತೆಗೆ ಸಲಹಾ ಚೀಟಿಯನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದರು.

ಮೊದಲು ಎನ್‍ಡಿಪಿಎಸ್ ಔಷಧಗಳನ್ನು ಮಾರಾಟ ಮಾಡಿದಾಗ ಮಾಹಿತಿ ನೀಡಬೇಕಾಗಿತ್ತು. ಸಲಹಾ ಚೀಟಿಯನ್ನು ನೀಡಬೇಕಾಗಿತ್ತು. ಈಗ ಎನ್‍ಡಿಪಿಎಸ್ ಔಷಧಗಳನ್ನು ಮಾರಾಟ ಮಾಡಿದರೆ, ಈ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಪದೇ ಪದೇ ಸಲಹಾ ಚೀಟಿ ಒಬ್ಬರೇ ನೀಡಿದರೆ, ತಕ್ಷಣ ಪರೀಕ್ಷೆ ನಡೆಸಲು ಇದು ಸಹಾಯಕವಾಗುತ್ತದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಶ್ರೀನಿವಾಸ್, ಅಪರ ಔಷಧ ನಿಯಂತ್ರಕ ಉಮೇಶ್, ಉಪ ಔಷಧ ನಿಯಂತ್ರಕ ಕೆಂಪಯ್ಯ, ಸಹಾಯಕ ನಿರ್ದೇಶಕ ಗೋವಿಂದ ರಾಜು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News