×
Ad

ಪ್ರಕಾಶಕರ ಹಿತ ಕಾಯಲು ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ : ಸಚಿವ ಶಿವರಾಜ ತಂಗಡಗಿ

Update: 2026-01-12 15:37 IST

ಬೆಂಗಳೂರು : ರಾಜ್ಯದ ಪ್ರಕಾಶಕರ ಸಂಕಷ್ಟಗಳು ನನ್ನ ಗಮನಕ್ಕೆ ಬಂದಿದೆ, ಪ್ರಕಾಶಕರ ಹಿತಕಾಯಲು ಸಗಟು ಖರೀದಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಅವರು ಇಂದು ತಮ್ಮ ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಚನೆಯಡಿ ಉತ್ತಮ ಕೆಲಸ ಮಾಡುತ್ತಿದೆ, ಪುಸ್ತಕ ಪ್ರೀತಿ ಎಂಬುದನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು, ಅವು ನಮ್ಮ ಜ್ಞಾನಾರ್ಜನೆಗೆ ನೆರವಾಗುತ್ತದೆ. ಇಂತಹ ಪುಸ್ತಕ ಪ್ರೀತಿಯ ಫಲವಾಗಿಯೇ ಸಾಹಿತಿಗಳು ಪ್ರಕಾಶಕರು ಹಾಗೂ ಪುಸ್ತಕೋದ್ಯಮ ಜೀವಂತವಾಗಿರಲು ಸಾಧ್ಯ .ಆ ನಿಟ್ಟಿನಲ್ಲಿ ಪುಸ್ತಕ ಪ್ರೇಮ ದೊಡ್ಡ ರೀತಿಯಲ್ಲಿ ಆಂದೋಲನವಾಗಿ ಬೆಳೆಯಬೇಕಿದೆ, ಅದಕ್ಕೆ ಪುಸ್ತಕ ಪ್ರಾಧಿಕಾರದ ಈ ಯೋಜನೆ ಪೂರಕವಾಗಲಿ ಎಂದು ಹಾರೈಸಿದರು.

ಸಚಿವರ ಮನೆಯ ಗ್ರಂಥಾಲಯ ಅನುಷ್ಠಾನದ ಪ್ರಶಂಸಾ ಪತ್ರವನ್ನು ಸಚಿವರಿಗೆ ನೀಡಿದ ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಡಾ.ಬಿ.ಟಿ.ಲಲಿತ ನಾಯಕ್ ಅವರು ಮಾತನಾಡಿ, ಪುಸ್ತಕ ಮನುಷ್ಯನನ್ನು ಮೃಗತ್ವದಿಂದ ಮಾನವತ್ವದ ಕಡೆಗೆ ಕೊಂಡೊಯುತ್ತದೆ. ಪಾಶ್ಚತ್ಯ ದೇಶಗಳಲ್ಲಿರುವ ಪುಸ್ತಕ ಪ್ರೀತಿ ನಮಗೆ ಮಾದರಿಯಾಗಿದೆ, ನಮ್ಮದು ಧರ್ಮಾಧಾರಿತ ಸಮಾಜವಾಗಿದೆ. ಇದನ್ನು ಮಾನವ ಧರ್ಮವಾಗಿ ರೂಪಿಸುವ ಹೊಣೆಗಾರಿಕೆ ಪುಸ್ತಕಗಳ ಮೇಲಿದೆ ಎಂದರು.

ಭಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿ ಯುರೋಪ್ ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಕನ್ನಡದಲ್ಲಿಯೂ ಅಂತಹ ಪುಸ್ತಕ ಸಂಸ್ಕೃತಿ ಬರಬೇಕಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಸಚಿವ ಶಿವರಾಜ ತಂಗಡಗಿ ಅರ್ಹತಾ ಪತ್ರಗಳನ್ನು ವಿತರಣೆ ಮಾಡಿದರು. ಆರಂಭದಲ್ಲಿ ಈ ಯೋಜನೆಯ ಕುರಿತಂತೆ ಹಾಗೂ ಪ್ರಕಾಶಕರ ಸಂಕಷ್ಟಗಳನ್ನು ಕುರಿತಂತೆ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಮಾತನಾಡಿದರು.

ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಣ ಕೊಡಸೆ ಹಾಗೂ ಡಾ.ಬಿ ಸಿ ಕುಶಾಲ ಅವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News